ಎಲ್ಲರೂ ಭಿನ್ನಾಭಿಪ್ರಾಯ ಮರೆತು ಜತೆಯಾಗಿ, ಒಗ್ಗಟ್ಟಿನಿಂದ ಇರುವುದಕ್ಕೆ ಹಬ್ಬಗಳು ವೇದಿಕೆಯಾಗಿವೆ. ನಾವು ಚಿಕ್ಕಂದಿನಲ್ಲಿ ಇರುವಾಗ ಸಂಕ್ರಾಂತಿಯ ಎಳ್ಳುಬೆಲ್ಲ ಬೀರಲು ಅಕ್ಕಪಕ್ಕದ ಮನೆಗಳಿಗೆ ಹೋಗುತ್ತಿದ್ದೆವು. ಈಗ ಪರಿಸ್ಥಿತಿ ಆ ರೀತಿ ಇಲ್ಲ. ನಮ್ಮ ನೆರೆಹೊರೆಯಲ್ಲಿ ಯಾರಿದ್ದಾರೆ ಎನ್ನುವುದನ್ನೇ ತಿಳಿಯದಷ್ಟು ನಮಗೆ ನಾವೇ ಗೋಡೆ ಹಾಕಿಕೊಂಡು ಬಿಟ್ಟಿದ್ದೇವೆ. ಇದು ನಮ್ಮ ಸಂಸ್ಕೃತಿ ಮತ್ತು ನಮ್ಮ ದೇಶಕ್ಕೆ ಒಗ್ಗುವಂತಹುದಲ್ಲ. ನಾವೆಲ್ಲರೂ ಒಂದು ಎನ್ನುವ ಭಾವನೆ ಮೂಡಿಸುವುದು, ಎಲ್ಲೆಡೆ ಪ್ರೀತಿ ಹರಡುವುದು ಹಬ್ಬಗಳ ಆಶಯವೂ ಆಗಿದೆ. ನಾವು ಕಳೆದುಕೊಳ್ಳುತ್ತಿರುವ ಸಂಪ್ರದಾಯ, ಆಚರಣೆಗಳನ್ನು ಮರುಸ್ಥಾಪಿಸುವ ಹೊಣೆ ನವಪೀಳಿಗೆಯ ಮೇಲಿದೆ. ಈ ಸಂಕ್ರಾಂತಿ ಎಲ್ಲರಿಗೂ ಖುಷಿ– ಸಂಭ್ರಮ ನೀಡಲಿ
ಅನಿರುದ್ಧ, ನಟ
ಹೊಸ ವರ್ಷದ ಮೊದಲ ಹಬ್ಬ ಸಂಕ್ರಾಂತಿ. ಈ ಹಬ್ಬದ ಉತ್ಸಾಹ ಎಲ್ಲರಲ್ಲೂ ಹೆಚ್ಚೇ ಇರುತ್ತದೆ. ಇದೇ ಉತ್ಸಾಹ ಇಡೀ ವರ್ಷ ಪೂರ್ತಿ ಇರಲಿ. ಹಬ್ಬದ ದಿನ ಡಯಟ್ ಬದಿಗಿಟ್ಟು ಎಲ್ಲರೂ ಪೊಂಗಲ್ ಚೆನ್ನಾಗಿ ತಿನ್ನಿ. ನಾನು ಸಹ ಹಬ್ಬದ ಪ್ರಯುಕ್ತ ಕುಟುಂಬದ ಜತೆಗೆ ಹೊರಗಡೆ ಸುತ್ತಾಡಲು ಬಂದಿದ್ದೇನೆ. ಎಲ್ಲರೂ ಕುಟುಂಬದ ಜತೆಗೆ ಹೊರಗೆ ಸುತ್ತಾಡಿ ಹಬ್ಬವನ್ನು ಎಂಜಾಯ್ ಮಾಡಿ.
ಶ್ರೀಲೀಲಾ, ನಟಿ
ದೇಶದಲ್ಲಿ ಒಂದೇ ದಿನ ಮೂರು ಹಬ್ಬಗಳು ನಡೆಯುವುದು ವಿಶೇಷ. ಸಂಕ್ರಾಂತಿ, ಪೊಂಗಲ್, ಲೋಹಡಿ, ಮಾಘ ಬಿಹು ಹಬ್ಬಗಳು ಎಲ್ಲರಿಗೂ ಸಂಭ್ರಮ, ಸಂತೋಷ ನೀಡಲಿ. ಎಲ್ಲರೂ ಒಗ್ಗಟ್ಟಾಗಿ ಒಮ್ಮನಸಿನಿಂದ ಖುಷಿ ಖುಷಿಯಿಂದ ಹಬ್ಬಗಳನ್ನು ಆಚರಿಸಲಿ. ಎಲ್ಲರಿಗೂ, ಎಲ್ಲಾ ಕ್ಷೇತ್ರಗಳಲ್ಲೂ ಅಭಿವೃದ್ಧಿ ನಳನಳಿಸಲಿ.
ರಾಗಿಣಿ ದ್ವಿವೇದಿ, ನಟಿ
ಕನ್ನಡಿಗರಿಗೆ ಸಂಕ್ರಾಂತಿಯ ಶುಭಾಶಯಗಳು. ಎಳ್ಳು ಬೆಲ್ಲ ತಿನ್ನಿ, ಅದು ಆರೋಗ್ಯಕ್ಕೆ ಒಳ್ಳೆಯದು. ಎಷ್ಟು ಸಾಧ್ಯವೋ ಅಷ್ಟು ಎಳ್ಳು ಬೀರಿ. ಮಕ್ಕಳನ್ನು ಎಳ್ಳು ಬೀರಲು ಮಕ್ಕಳನ್ನು ಕಳುಹಿಸಿ. ನಾನು ಎಳ್ಳು ಬೀರುವುದನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಚಿಕ್ಕವಳಿದ್ದಾಗ ಹಳ್ಳಿಯಲ್ಲಿ ಎಳ್ಳು ಬೀರಲು ಹೋಗುತ್ತಿದ್ದೆ. ಎಲ್ಲರಿಗೂ ತಿನ್ನಲು ಕಬ್ಬು ವಿತರಿಸುತ್ತಿದ್ದೆ. ಅದೆಲ್ಲವನ್ನೂ ಈಗ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಅವೆಲ್ಲವೂ ಸುಂದರ ನೆನಪುಗಳು. ಸಿಹಿ– ಕಹಿ, ನೋವು, ನಲಿವು, ಕಷ್ಟ– ಸುಖ, ನಗು– ಅಳು ಎಲ್ಲಾ ಭಾವನೆಗಳಲ್ಲೂ ಒಂದೇ ಮನಸ್ಥಿತಿ ಇಟ್ಟುಕೊಂಡು, ಖುಷಿಯಾಗಿ ಬದುಕು ನಡೆಸಿ. ಎಲ್ಲರಿಗೂ ಸಂಕ್ರಾಂತಿ ಒಳಿತು ಮಾಡಲಿ.
–ಅದಿತಿ ಪ್ರಭುದೇವ, ನಟಿ
ಸಂಕ್ರಾಂತಿಗಾಗಿ ‘ಗೋದ್ರಾ’ ಚಿತ್ರದ ಟೀಸರ್ ಬಿಡುಗಡೆ ಮಾಡಿ, ಅಭಿಮಾನಿಗಳಿಗೆ ಹಬ್ಬದ ಉಡುಗೊರೆ ನೀಡುತ್ತಿದ್ದೇವೆ. ಸಂಕ್ರಾಂತಿ ಕೂಡ ನಮ್ಮೆಲ್ಲರ ಪಾಲಿಗೆ ಹೊಸ ವರ್ಷ ಇದ್ದಂತೆ. ಎಲ್ಲರಿಗೂ ಈ ಹಬ್ಬ ಒಳಿತು ಮಾಡಲಿ. ಎಲ್ಲದರಲ್ಲೂ ಒಳ್ಳೆಯ ಫಸಲು ಬರಲಿ. ಮಳೆ– ಬೆಳೆ ಕೂಡ ಚೆನ್ನಾಗಿ ಆಗಿ ಸಮೃದ್ಧಿ ನೆಲೆಸಲಿ.
ನೀನಾಸಂ ಸತೀಶ್, ನಟ
ಇದು ಸುಗ್ಗಿಯ ಹಬ್ಬ. ಬಿತ್ತಿದ್ದನ್ನು ಬೆಳೆದು ಸಂಭ್ರಮಪಡುವ ಕಾಲ. ಇದನ್ನು ಕೃಷಿಗಷ್ಟೇ ಅಲ್ಲ, ಬದುಕಿಗೂ ಅನ್ವಯಿಸಿಕೊಳ್ಳಬಹುದು. ಒಳ್ಳೆಯದನ್ನು ಬಿತ್ತಿದರೆ ಒಳ್ಳೆಯದೇ ಬೆಳೆಯುತ್ತದೆ. ಒಂದು ಮಾವಿನ ಬೀಜ ನೆಟ್ಟು ಅದು ಮರವಾದರೆ ನೂರಾರು, ಸಾವಿರಾರು ಮಾವಿನ ಕಾಯಿಯ ಫಲ ಕೊಡುತ್ತದೆ. ಹಾಗೆಯೇ ಒಂದು ಒಳ್ಳೆಯ ಕೆಲಸ ಮಾಡಿದರೆ ಹತ್ತುಪಟ್ಟು ಒಳ್ಳೆಯ ಪ್ರತಿಫಲ ದೊರೆಯುತ್ತದೆ. ಒಂದು ಕೆಡುಕು ಮಾಡಿದರೆ ಅದರ ಹತ್ತುಪಟ್ಟು ಕೆಡುಕು ಆಗುತ್ತದೆ. ಹಾಗಾಗಿ ಬದುಕಿನಲ್ಲಿ ಒಳಿತು ಮಾಡುವತ್ತ ಎಲ್ಲರ ಗಮನವಿರಬೇಕು. ಹಬ್ಬಗಳ ಆಚರಣೆಯಲ್ಲೂ ಇದೇ ಸಂದೇಶವಿದೆ.
ರಮೇಶ್ ಅರವಿಂದ್, ನಟ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.