ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳದಲ್ಲಿ ಕಿಡಿ ಹೊತ್ತಿಸಿದ ದಿ ಕೇರಳ ಸ್ಟೋರಿ ಸಿನಿಮಾ! ವಿವಾದದ ಸುತ್ತ ಇಲ್ಲಿದೆ ಮಾಹಿತಿ

ಸುದೀಪ್ತೊ ಸೇನ್ ಅವರ ನಿರ್ದೇಶನದ ಈ ಸಿನಿಮಾ ಇದೇ ಮೇ 5 ರಂದು ಜಾಗತಿಕವಾಗಿ ಬಿಡುಗಡೆಯಾಗುತ್ತಿದೆ
Published 29 ಏಪ್ರಿಲ್ 2023, 10:06 IST
Last Updated 29 ಏಪ್ರಿಲ್ 2023, 10:06 IST
ಅಕ್ಷರ ಗಾತ್ರ

ಬೆಂಗಳೂರು: ಮೇ 5 ರಂದು ಜಾಗತಿಕವಾಗಿ ಬಿಡುಗಡೆಗೆ ಸಿದ್ದವಾಗಿರುವ ‘ದಿ ಕೇರಳ ಸ್ಟೋರಿ’ ಎಂಬ ಹಿಂದಿ ಸಿನಿಮಾ ಕೇರಳದಾದ್ಯಂತ ವ್ಯಾಪಕ ವಿವಾದವೆಬ್ಬಿಸಿದ್ದು, ಈ ಚಿತ್ರದ ಬಗ್ಗೆ ದೇಶದಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ಪರ–ವಿರೋಧದ ಚರ್ಚೆಗಳು ಬಿರುಸು ಪಡೆದುಕೊಂಡಿವೆ.

ಸುದೀಪ್ತೊ ಸೇನ್ ಅವರ ನಿರ್ದೇಶನದ ಈ ಸಿನಿಮಾವನ್ನು ವಿಫುಲ್ ಶಾ ನಿರ್ಮಾಣ ಮಾಡಿದ್ದಾರೆ. ಅದಾ ಶರ್ಮಾ, ಯೋಗಿತಾ ಬಿಹಾನಿ, ಸೋನಿಯಾ ಬಿಲಾನಿ, ಸಿದ್ಧಿ ಇದ್‌ನಾನಿ ಅವರು ಲವ್ ಜಿಹಾದ್‌ಗೆ ಒಳಗಾಗುವ ಹಿಂದೂ ಯುವತಿಯರ ಪಾತ್ರದಲ್ಲಿ ಅಭಿನಯಿಸಿದ್ದಾರೆ. ‘ದಿ ಕೇರಳ ಸ್ಟೋರಿ’ ಇದೇ ಮೇ 5 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ.

ಚಿತ್ರತಂಡದ ಮಾಹಿತಿ ಪ್ರಕಾರ ಕೇರಳದಲ್ಲಿ ಹಿಂದು, ಕ್ರಿಶ್ಚಿಯನ್ ಮಹಿಳೆಯರನ್ನು ಲವ್‌ ಜಿಹಾದಿಗೆ ಒಳಪಡಿಸಿ, ಅವರನ್ನು ಐಎಸ್ ಉಗ್ರಗಾಮಿ ಸಂಘಟನೆಗೆ ಸೇರಿಸಿ ಚಿತ್ರಹಿಂಸೆ ಕೊಡುತ್ತಿದ್ದ ಘಟನಾವಳಿಗಳ ಮೇಲೆ ಈ ಚಿತ್ರನ್ನು ತಯಾರಿಸಲಾಗಿದೆ.

ಆದರೆ, ‘ದಿ ಕೇರಳ ಸ್ಟೋರಿ’ ಸಿನಿಮಾದ ಈ ಕಥಾನಕ ಕೇರಳದಲ್ಲಿ ವಿವಾದವೆಬ್ಬಿಸಿದೆ. ಆಡಳಿತಾರೂಢ ಸಿಪಿಐಎಂ ನೇತೃತ್ವದ ಸರ್ಕಾರ ಹಾಗೂ ಕಾಂಗ್ರೆಸ್ ನೇತೃತ್ವದ ವಿರೋಧ ‍ಪಕ್ಷಗಳು ಈ ಚಿತ್ರದ ವಿರುದ್ಧ ಮುಗಿಬಿದ್ದಿವೆ.

‘ದಿ ಕೇರಳ ಸ್ಟೋರಿ’ ಸಿನಿಮಾವನ್ನು ಜನ ಬಹಿಷ್ಕರಿಸಬೇಕು. ಈ ಸಿನಿಮಾವನ್ನು ಕೇರಳದಲ್ಲಿ ಬಿಡುಗಡೆಯಾಗದಂತೆ ತಡೆಯಲು ಕಾನೂನು ಕ್ರಮಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಸಂಸ್ಕೃತಿ ಹಾಗೂ ಸಿನಿಮಾ ಸಚಿವ ಶಾಜಿ ಚೆರಿಯನ್ ಹೇಳಿದ್ದಾರೆ.

ಈ ಚಿತ್ರ ಜನರ ನಡುವೆ ಕೋಮು ಭಾವನೆಗಳನ್ನು ಕೆರಳಿಸಿ ಸಮಾಜವನ್ನು ಒಡೆಯುವ ಉದ್ದೇಶ ಹೊಂದಿರುವುದು ತೋರುತ್ತದೆ. ಕೋಮು ಸೌಹಾರ್ಧಕ್ಕೆ ಹೆಸರಾಗಿರುವ ಕೇರಳದ ಹೆಸರು ಕೆಡಿಸಲು ಇದು ಸಂಘಪರಿವಾರದವರು ಮಾಡುತ್ತಿರುವ ಕುತಂತ್ರ. ಜನರೇ ಇದಕ್ಕೆ ಉತ್ತರ ಕೊಡಲಿದ್ದಾರೆ, ನಾವು ಕಾನೂನಿನ ಮೂಲಕ ಏನು ಮಾಡಬೇಕು ಎಂಬುದನ್ನು ಪರಿಶೀಲಿಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.

ಈ ಸಿನಿಮಾವನ್ನು ಕೇರಳದಲ್ಲಿ ಬಿಡುಗಡೆ ಮಾಡಲು ಸರ್ಕಾರ ಅವಕಾಶ ಕೊಡಬಾರದು ಎಂದು ವಿರೋಧ ಪಕ್ಷದ ನಾಯಕ ವಿ.ಡಿ ಸತೀಶನ್ ಆಗ್ರಹಿಸಿದ್ದಾರೆ.

ಈ ಸಿನಿಮಾ ಕೇರಳದ ಬಗ್ಗೆ ಸುಳ್ಳುಗಳನ್ನು ಹರಡಲು ಯತ್ನಿಸುತ್ತಿದೆ. ಈ ಸಿನಿಮಾ ಪ್ರದರ್ಶನಕ್ಕೆ ನಿಷೇಧ ಹೇರಬೇಕು ಎಂದು ಒತ್ತಾಯಿಸಿದ್ದಾರೆ. ಇದೇ ರೀತಿ ಅನೇಕ ಶಾಸಕರು, ಸಚಿವರು ಈ ಚಿತ್ರವನ್ನು ವಿರೋಧಿಸಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವರು ಈ ಚಿತ್ರವನ್ನು ನಿಷೇಧಿಸಬೇಕು ಎಂದು ಆಗ್ರಹಿಸಿದರೆ, ಸತ್ಯವನ್ನು ತೆರೆದಿಡುತ್ತಿರುವ ಈ ಚಿತ್ರವನ್ನು ಸ್ವಾಗತಿಸಬೇಕು ಎಂದಿದ್ದಾರೆ.

‘ಕೇರಳದಲ್ಲಿ 32 ಸಾವಿರ ಹಿಂದು, ಕ್ರಿಶ್ಚಿಯನ್ ಯುವತಿಯರು, ಮಹಿಳೆಯರು ಕಾಣೆಯಾಗಿದ್ದಾರೆ. ಅವರನ್ನು ಲವ್‌ ಜಿಹಾದಿಗೆ ಬಳಸಿಕೊಳ್ಳಲಾಗಿದೆ. ಮತಾಂತರ ಮಾಡಲಾಗಿದೆ, ಇನ್ನೂ ಕೆಲವರನ್ನು ಮಾನವ ಕಳ್ಳಸಾಗಣೆ ಮಾಡಿ ಭಯೋತ್ಪಾದನಾ ಕೃತ್ಯಗಳಿಗೆ ಬಳಸಿಕೊಳ್ಳಲಾಗಿದೆ’ ಎಂದು ಚಿತ್ರತಂಡ ಟ್ರೆಲರ್‌ನಲ್ಲಿ ಹೇಳಿಕೊಂಡಿದೆ.

‘ಈ ಚಿತ್ರದ ವಿರುದ್ಧ ಕೇರಳದಲ್ಲಿ ಅನೇಕ ದೂರುಗಳು ಸಲ್ಲಿಕೆಯಾಗಿದ್ದು, ಇದುವರೆಗೆ ಯಾವುದೇ ಎಫ್‌ಐಆರ್‌ಗಳು ದಾಖಲಾಗಿಲ್ಲ’ ಎಂದು ಕೇರಳ ಪೊಲೀಸರು ಹೇಳಿದ್ದಾರೆ.

ಸುದೀಪ್ತೊ ಸೇನ್ ಅವರು ‘ದಿ ಲಾಸ್ಟ್ ಮಾಂಕ್’, ‘ಲಖನೌ ಟೈಮ್ಸ್‌’, ‘ಆಸಮ್’ ಎಂಬ ಮೂರು ಹಿಂದಿ ಸಿನಿಮಾಗಳನ್ನು ಇದಕ್ಕೂ ಮುನ್ನ ನಿರ್ದೇಶಿಸಿದ್ದಾರೆ. ಇನ್ನೊಂದು ವಿಶೇಷವೆಂದರೆ ಕಳೆದ ಮೂರು ದಿನಗಳ ಹಿಂದೆ ಬಿಡುಗಡೆಯಾಗಿರುವ ದಿ ಕೇರಳ ಸ್ಟೋರಿ ಟ್ರೇಲರ್ 12 ಮಿಲಿಯನ್ ವೀಕ್ಷಣೆ ಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT