ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಗಳ ಗೀತೆಗೆ ಅರ್ಧ ದುಡ್ಡೆಂದಾಗ ಏನಂದ್ರು ಎಸ್ಪಿಬಿ?

ಎಸ್‌ಪಿಬಿ ನೆನಪು
Last Updated 25 ಸೆಪ್ಟೆಂಬರ್ 2020, 14:21 IST
ಅಕ್ಷರ ಗಾತ್ರ

ರಂಗಕರ್ಮಿ ಯಶವಂತಸರದೇಶಪಾಂಡೆ 2009ರಲ್ಲಿ 'ಐಡ್ಯಾ ಮಾಡ್ಯಾರ' ಸಿನಿಮಾ ಮಾಡಿದ್ದರು. ಸಿನಿಮಾಗೆ ಹಾಡಿದ್ದ ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಅವರೊಂದಿಗಿನ ಒಡನಾಟವನ್ನು ಅವರಿಲ್ಲಿ ನೆನಪಿಸಿಕೊಂಡಿದ್ದಾರೆ.

---

2009ರಾಗ 'ಐಡ್ಯಾ ಮಾಡ್ಯಾರ' ಅಂತ ಸಿನೆಮಾ ಬರೆದು, ನಿರ್ದೇಶಿಸಿ, ಮತ್ತ ನಿರ್ಮಿಸುವ ಸಾಹಸ ಮಾಡಿದ್ದೆ... ಅದರ ಸಂಗೀತ ನಿರ್ದೇಶಕರಾಗಿ ಕಿರಣ ಗೋಡಖಿoಡಿ ಕೆಲಸ ಮಾಡಿದರು... ಒಟ್ಟುಆರು ಹಾಡುಗಳು ಆ ಸಿನೆಮಾದಾಗ, ಸಂಗೀತ ನಿರ್ದೇಶಕ ಕಿರಣ ಗೋಡಖಿoಡಿ ಅವರು ಎಸ್.ಪಿ.ಬಿ. ಯವರನ್ನ ಸಂಪರ್ಕಿಸತೇನಿ ಒಪ್ಪಿದ್ರ ಅವರು ಹಾಡಲಿ ಅಂದ್ರು.

ನನಗ ಸ್ವರ್ಗ ಮೂರು ಗೇಣು !! ಅವರು ಒಪ್ಪಿದ್ರ ಸಿನೆಮಾ ಬ್ಯಾರೆ ಲೆವೆಲ್ಲಿಗೆ ಹೋಗತದ ಅಂತ ಗೊತ್ತಿದ್ದ ಸತ್ಯ... ನನ್ನ ಸಹ ನಿರ್ಮಾಪಕ ಅರವಿಂದ ಪಾಟೀಲರ ಜೋಡಿ ಚರ್ಚಾ ಮಾಡಿ ಹೂಂ ಅಂದೆ. ಆರರೊಳಗ ನಾಲ್ಕು ಹಾಡು ಹಾಡಿದರು... ಅವರು ಹಾಡಿದ್ದರಿಂದ ಆನಂದ ಆಡಿಯೋ ದವರು ಮ್ಯೂಸಿಕ್ ರೈಟ್ಸ್ ಖರೀದಿ ಮಾಡಿದರು, ಜೀ ಕನ್ನಡದವರು ಸಿನೆಮಾ ಖರೀದಿಸಿದರು. 'ಐಡ್ಯಾ ಮಾಡ್ಯಾರ' ಸಿನೆಮಾ ಜೀ ಕನ್ನಡ ಚಾನೆಲ್ ನ್ಯಾಗ 100 ಡೇಸ್ ಆಗೇದ... ಆ ವಿಷಯ ಬ್ಯಾರೆ...

ಇತ್ತ ನಾಲ್ಕು ಹಾಡುಗಳನ್ನು ಎರಡುವರಿ ತಾಸಿನ್ಯಾಗ ಹಾಡಿದ ಡಾ ಎಸ್.ಪಿ.ಬಿ. ಸಾಹೇಬರು ಹೊರಟು ನಿಂತಾಗ ಪೇಮೆಂಟ್ ಸಮಯ... ನಾನು ಅವರೆದುರು ಹೋಗಿ ಕೂತು ಚೌಕಾಸಿ ಸುರು ಮಾಡಿದೆ...

'ಸರ ನೋಡ್ರಿ ನಾಲ್ಕು ಹಾಡಿನ್ಯಾಗ ಎರಡು ಡ್ಯೂಯೆಟ್ ಅಂದ್ರ ನೀವು ಅರ್ಧ ಹಾಡು ಹಾಡಿರಿ, ಫೀಮೇಲ್ ಗಾಯಕರು ಇನ್ನರ್ಧ ಹಾಡು ಹಾಡ್ಯಾರ, ಅದಕ್ಕ ಎರಡು ಹಾಡಿಗೆ ಅರ್ಧ ರೊಕ್ಕ ತೊಗೋರಿ'ಅಂದೆ.

ಅದಕ್ಕ ಜೋರಾಗಿ ನಕ್ಕರು ಎಸ್.ಪಿ.ಬಿ., 'ಬಹಳ ಚಾಲು ಪ್ರೊಡ್ಯೂಸರ್ ನೀವು, ಮೊದಲ ಫಿಲ್ಮ್ ಮಾಡ್ತಿದ್ದೀರಿ ಅಂತೆ, ನಿಮ್ಮಂತಹ ಹೊಸ ಪ್ರೊಡ್ಯೂಸರ್ ನಾವು ಉLiಸಿಕೊಳ್ಳಬೇಕು, ಅದಕ್ಕೆ ಶೇ20ಕಡಿಮೆ ಕೊಡಿ, ನಮ್ಮ ಸೆಕ್ರೆಟರಿಗೆ ಹೇಳ್ತೇನೆ...'ಅಂದ್ರು, ನಾನು ಅವರಿಗೆ ಭಾಳ ಭಾಳ ಥ್ಯಾಂಕ್ಯೂ ಹೇಳಿದೆ.

ಹೊರಡೋ ಮುಂದ 'ಅದು ಡುಯೆಟ್‌ದು, ಹಾಗೆ ಅರ್ಧ ದುಡ್ಡು ತೊಗೊಳಕ್ಕಾಗಲ್ಲ, ತಿಳೀತಾ!ಆದ್ರೆ ನೀವು ಇನ್ನು ಹೆಚ್ಚು ಹೆಚ್ಚು ಸಿನೆಮಾ ಮಾಡಿ, ನಮಗೆಲ್ಲ ಕೆಲಸ ಮಾಡೋ ಅವಕಾಶ ಕೊಡಬೇಕು'ಅಂದಾಗ ತುಸು ಕಸಿವಿಸಿ ಆಗಿತ್ತು.

ಎಂಥ ದೊಡ್ಡ ವ್ಯಕ್ತಿತ್ವ ಅವರದ್ದು. ನನ್ನಂಥ ಸಾದಾ ನಿರ್ಮಾಪಕರನ್ನ ಉಳಿಸಬೇಕು, ಬೆಳಸಬೇಕು ಅಂತ ತೋರಿಸಿದ ಕಾಳಜಿ ಎಂದೆಂದೂ ಮರೀಲಿಕ್ಕೆ ಆಗುದಿಲ್ಲ.

(ನಿರೂಪಣೆ: ರಶ್ಮಿ ಎಸ್.)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT