‘ನೀರ್ ದೋಸೆ ಮತ್ತು ಸೂಜಿದಾರ ಚಿತ್ರದ ಸಂಬಂಧ ಉತ್ತರ, ದಕ್ಷಿಣ ಇದ್ದಂತೆ. ಕುಮುದಾ ಮತ್ತು ಪದ್ಮಾ ಪಾತ್ರದ ನಡುವೆ ಸಾಕಷ್ಟು ವ್ಯತ್ಯಾಸವಿದೆ’ ಎಂದು ಮೊದಲಿಗೆ ಸ್ಪಷ್ಟಪಡಿಸಿದರು ನಟಿ ಹರಿಪ್ರಿಯಾ.
ಮೌನೇಶ್ ಬಡಿಗೇರ್ ನಿರ್ದೇಶನದ ‘ಸೂಜಿದಾರ’ ಚಿತ್ರದ ಇದೇ ಶುಕ್ರವಾರ ತೆರೆಕಾಣುತ್ತಿದೆ. ಈ ಕುರಿತು ಮಾಹಿತಿ ಹಂಚಿಕೊಳ್ಳಲು ಚಿತ್ರತಂಡ ಸುದ್ದಿಗೋಷ್ಠಿಗೆ ಹಾಜರಾಗಿತ್ತು.
ಸ್ನೇಹಿತರೊಟ್ಟಿಗೆ ನಾಟಕ ವೀಕ್ಷಿಸುವಾಗ ತಾವು ರಂಗದ ಮೇಲೆ ನಟಿಸಬೇಕು ಎಂಬ ಆಸೆ ಹರಿಪ್ರಿಯಾ ಅವರಲ್ಲಿ ಚಿಗುರೊಡೆದಿತ್ತಂತೆ. ಕೊನೆಗೂ, ರಂಗ ಕಲಾವಿದರೊಟ್ಟಿಗೆ ಸಿನಿಮಾ ಮಾಡುತ್ತಿರುವ ಖುಷಿಯಿದೆ ಎಂದು ಹೇಳಿಕೊಂಡರು.
‘ನಾಟಕಗಳಲ್ಲಿ ಆರಂಭದಿಂದಲೂ ಅಂತ್ಯದವರೆಗೆ ಕಲಾವಿದರು ಶಕ್ತಿ ಕಾಯ್ದುಕೊಳ್ಳಬೇಕು. ಕಮರ್ಷಿಯಲ್ ಚಿತ್ರಗಳಲ್ಲಿಯೇ ತೊಡಗಿಸಿಕೊಂಡಿದ್ದ ನನಗೆ ಹೊಸ ಬಗೆಯ ಸಿನಿಮಾದಲ್ಲಿ ಪ್ರಯೋಗಕ್ಕೆ ಒಗ್ಗಿಕೊಂಡಿರುವ ಖುಷಿಯಿದೆ’ ಎಂದು ಹೇಳಿಕೊಂಡರು.
‘ಸೂಜಿದಾರ’ದಲ್ಲಿ ಮಧ್ಯಮ ವರ್ಗದ ಹೆಣ್ಣುಮಗಳ ಪಾತ್ರಕ್ಕೆ ಅವರು ಬಣ್ಣ ಹಚ್ಚಿದ್ದಾರೆ. ಶೂಟಿಂಗ್ ವೇಳೆ ಅವರು ಜ್ವರದಿಂದ ಬಳಲಿದ್ದರಂತೆ. ಇದು ಅವರ ಪಾತ್ರ ಪೋಷಣೆಗೆ ಸಹಕಾರಿಯಾಯಿತು ಎಂದು ನಕ್ಕರು. ಈ ಮಾತು ಕೇಳಿದ ಪೋಷಕ ನಟ ಸುಚೇಂದ್ರಪ್ರಸಾದ್, ‘ನನಗೂ ಮುಂದಿನ ಚಿತ್ರಗಳ ಶೂಟಿಂಗ್ ವೇಳೆ ಜ್ವರ ಬಂದರೆ ಪಾತ್ರ ಪೋಷಣೆಗೆ ಸಹಕಾರಿಯಾಗುತ್ತದೆ’ ಎಂದು ಹಾಸ್ಯ ಚಟಾಕಿ ಹಾರಿಸಿದರು.
ನಿರ್ದೇಶಕ ಮೌನೇಶ್ ಬಡಿಗೇರ್, ‘ಹಿಂದಿನಿಂದಲೂ ಪರ್ಯಾಯ ಮತ್ತು ಕಮರ್ಷಿಯಲ್ ಸಿನಿಮಾಗಳನ್ನು ಇಬ್ಭಾಗಿಸಿ ನೋಡುವ ಪ್ರವೃತ್ತಿ ಬೆಳೆದುಕೊಂಡು ಬಂದಿದೆ. ಇಂದಿಗೂ ಈ ಮನಸ್ಥಿತಿ ಬದಲಾಗಿಲ್ಲ. ಹರಿಪ್ರಿಯಾ ಅವರಂತಹ ಸ್ಟಾರ್ ನಟಿಯರು ಕಲಾತ್ಮಕ ಚಿತ್ರಗಳಲ್ಲಿ ನಟಿಸಿದರೆ ಬೇರೆಯವರಿಗೂ ಸ್ಫೂರ್ತಿಯಾಗುತ್ತದೆ. ಜೊತೆಗೆ, ಇಂತಹ ಸಿನಿಮಾಗಳ ಗೆಲುವು ಮತ್ತಷ್ಟು ಹೊಸ ಪ್ರಯೋಗಗಳಿಗೆ ನಾಂದಿಯಾಗುತ್ತದೆ’ ಎನ್ನುವ ಆಶಯ ಅವರ ಮಾತಿನಲ್ಲಿತ್ತು.
ನಾಯಕ ಯಶವಂತ ಶೆಟ್ಟಿ, ನಟ ಸುಚೇಂದ್ರ ಪ್ರಸಾದ್ ಅನುಭವ ಹಂಚಿಕೊಂಡರು. ಸುಚ್ಚೀಂದ್ರನಾಥ್ ಮತ್ತು ಅಭಿಜಿತ್ ಕೋಟೆಗಾರ್ ಬಂಡವಾಳ ಹೂಡಿದ್ದಾರೆ. ಅಶೋಕ್ ವಿ. ರಾಮನ್ ಸಂಗೀತ ಸಂಯೋಜಿಸಿದ್ದಾರೆ. ಭಿನ್ನಡಷ್ಜ ಸಂಗೀತ ಸಂಯೋಜಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.