ಶ್ರೀನಿ ನಿರ್ದೇಶನದ ‘ಓಲ್ಡ್ ಮಾಂಕ್’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಸುನಿಲ್ ರಾವ್. ಸುನಿಲ್ ಅವರು ಶ್ರೀಕೃಷ್ಣನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
‘ಪುರಾಣದ ಕಥೆಯಲ್ಲಿ ಶ್ರೀಕೃಷ್ಣ ನಾರದನಿಗೆ ಶಾಪ ಕೊಡುವ ಸನ್ನಿವೇಶ ಇದೆ. ನಾರದ ಭೂಲೋಕಕ್ಕೆ ಬರುತ್ತಾನೆ. ಆ ಸನ್ನಿವೇಶ ಚಿತ್ರದಲ್ಲಿದೆ. ಅಂಥ ತುಂಟ ಕೃಷ್ಣನ ಸನ್ನಿವೇಶವನ್ನು ಆಗಾಗ ತೋರಿಸಿದ್ದೇವೆ. ಚಿತ್ರದಲ್ಲಿ ಇದೊಂದು ವಿಶೇಷ. ಚಿತ್ರದ ಆರಂಭ, ಮಧ್ಯಂತರದಲ್ಲಿ ಆಗಾಗ ಅವರು ಕಾಣಿಸಿಕೊಳ್ಳುತ್ತಾರೆ. ಶ್ರೀಕೃಷ್ಣನ ಪಾತ್ರ ಅವರಿಗೆ ತುಂಬಾ ಹೊಂದುತ್ತದೆ. ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ’ ಎಂದು ಶ್ರೀನಿ ಹೇಳಿದರು.
‘ಚಿತ್ರದ ಬಹುತೇಕ ಭಾಗ ಚಿತ್ರೀಕರಣ ಮುಗಿದಿದೆ. ಇನ್ನೆರಡು ದಿನಗಳಲ್ಲಿ ಶೂಟಿಂಗ್ ಮುಕ್ತಾಯ ಆಗಲಿದೆ. ಮೊದಲಾರ್ಧ ಭಾಗದ ಡಬ್ಬಿಂಗ್ ಮುಗಿದಿದೆ. ದ್ವಿತೀಯಾರ್ಧದ ಸಂಕಲನ ನಡೆದಿದೆ. ಜೂನ್ ವೇಳೆಗೆ ಬಿಡುಗಡೆಗೆ ಯೋಜನೆ ಹಾಕಿಕೊಂಡಿದ್ದೇವೆ’ ಎಂದು ಶ್ರೀನಿ ಹೇಳಿದರು.
‘ಕೋವಿಡ್ ಕಾರಣಕ್ಕೆ ಚಿತ್ರೀಕರಣ ಸ್ವಲ್ಪ ನಿಧಾನಗತಿಯಲ್ಲಿ ಸಾಗಿತು. ಕೆಲವು ಕಲಾವಿದರೂ ಕೋವಿಡ್ಗೆ ಒಳಗಾದರು. ಹೀಗಾಗಿ ಚಿತ್ರದ ಎಲ್ಲ ಕೆಲಸಗಳಲ್ಲೂ ವಿಳಂಬವಾಯಿತು’ ಎಂದರು ಶ್ರೀನಿ
ಚಿತ್ರದಲ್ಲಿ ನಾಯಕಿಯಾಗಿ ಅದಿತಿ ಪ್ರಭುದೇವ ಇದ್ದಾರೆ. ಸಿಹಿ ಕಹಿ ಚಂದ್ರು,ಎಸ್.ನಾರಾಯಣ್, ಆರ್.ಟಿ. ರಮಾ, ಡಿಂಗ್ರಿ ನಾಗರಾಜ್ ತಾರಾಗಣದಲ್ಲಿದ್ದಾರೆ.