ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರದ ನಟಿಯನ್ನು ಪರಿಚಯಿಸಿದ ರಾಜ್ ಬಿ ಶೆಟ್ಟಿ

Last Updated 5 ಡಿಸೆಂಬರ್ 2022, 10:26 IST
ಅಕ್ಷರ ಗಾತ್ರ

ರಾಜ್‌ ಬಿ.ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಹೊಸ ಸಿನಿಮಾ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರೀಕರಣ ಇತ್ತೀಚೆಗಷ್ಟೇ ಪೂರ್ಣಗೊಂಡಿತ್ತು. ಸದ್ಯ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳಲ್ಲಿ ತಲ್ಲೀನವಾಗಿರುವ ಚಿತ್ರತಂಡವು ನಾಯಕಿಯ ಪಾತ್ರದ ಪರಿಚಯವನ್ನು ಮಾಡಿದೆ.

ನಟಿ ಸಿರಿ ರವಿಕುಮಾರ್‌ ಈ ಚಿತ್ರದಲ್ಲಿ ‘ಪ್ರೇರಣಾ’ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ‘ಪ್ರೇರಣಾ’ಳನ್ನು ಪರಿಚಯಿಸಿರುವ ರಾಜ್‌ ಬಿ.ಶೆಟ್ಟಿ, ‘ನೀವು ಎಷ್ಟು ಅದ್ಭುತವಾದ ನಟಿ ಎನ್ನುವುದನ್ನು ಪ್ರೇಕ್ಷಕರಿಗೆ ತೋರಿಸಲು ಕಾತುರದಿಂದಿದ್ದೇವೆ’ ಎಂದಿದ್ದಾರೆ. ‘ಸಕುಟುಂಬ ಸಮೇತ’, ‘ಆಬ್ರಕಡಾಬ್ರ’ ಸಿನಿಮಾದಲ್ಲಿ ನಟಿಸಿದ್ದ ಸಿರಿ ರವಿಕುಮಾರ್‌, ಸದ್ಯ ಅಭಿಜಿತ್‌ ಮಹೇಶ್‌ ನಿರ್ದೇಶನದ ‘ಬ್ಯಾಚುಲರ್ ಪಾರ್ಟಿ’ ಸಿನಿಮಾದಲ್ಲೂ ಬಣ್ಣಹಚ್ಚಿದ್ದಾರೆ. ದಿಗಂತ್ ಮಂಚಾಲೆ, ರಿಷಬ್ ಶೆಟ್ಟಿ, ಅಚ್ಯುತಕುಮಾರ್ ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ನಟಿ ರಮ್ಯಾ ಅವರ ನಿರ್ಮಾಣ ಸಂಸ್ಥೆ ಆ್ಯಪಲ್‌ ಬಾಕ್ಸ್‌ ಸ್ಟುಡಿಯೋಸ್‌ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾವನ್ನು ನಿರ್ಮಾಣ ಮಾಡಿದೆ. ರಮ್ಯಾ ಅವರು ಈ ಪಾತ್ರದಲ್ಲಿ ನಟಿಸಬೇಕಿತ್ತು. ಆದರೆ ಕೊನೆಯ ಕ್ಷಣದಲ್ಲಿ ಅವರು ಹಿಂದೆ ಸರಿದಿದ್ದರು.‘ಹೊಸ ಮುಖವೊಂದು ಈ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಲಿದೆ’ ಎನ್ನುವ ಕಾರಣ ನೀಡಿ ಈ ಸಿನಿಮಾದಿಂದ ರಮ್ಯಾ ಹೊರ ಹೆಜ್ಜೆ ಇಟ್ಟಿದ್ದರು. ನಂತರದಲ್ಲಿ ಚಿತ್ರದ ನಾಯಕಿಯಾಗಿ ನಟಿ ಸಿರಿ ರವಿಕುಮಾರ್‌ ಚಿತ್ರತಂಡ ಸೇರಿಕೊಂಡಿದ್ದರು.

‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರದಲ್ಲಿ ರಾಜ್‌ ಬಿ. ಶೆಟ್ಟಿ ಪ್ರಧಾನ ಪಾತ್ರದಲ್ಲಿದ್ದಾರೆ. ಕಥೆ, ನಿರ್ದೇಶನ ರಾಜ್‌ ಬಿ. ಶೆಟ್ಟಿ ಅವರದ್ದೇ.ಬಾಲಾಜಿ ಮನೋಹರ್‌, ರೇಖಾ ಕೂಡ್ಲಗಿ ಮುಂತಾದವರು ತಾರಾಬಳಗದಲ್ಲಿದ್ದಾರೆ. ರಾಜ್‌ ಅವರ ‘ಗರುಡ ಗಮನ ವೃಷಭ ವಾಹನ’ ಚಿತ್ರದ ತಾಂತ್ರಿಕ ತಂಡವೇ ಇಲ್ಲಿ ಕೆಲಸ ಮಾಡಲಿದೆ. ಮಿಥುನ್‌ ಮುಕುಂದನ್‌ ಅವರ ಸಂಗೀತ, ಪ್ರವೀಣ್‌ ಶ್ರೀಯಾನ್‌ ಅವರ ಸಂಗೀತ ಈ ಚಿತ್ರಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT