ಮನು ರವಿಚಂದ್ರನ್ ಅಭಿನಯದ ‘ಮುಗಿಲ್ಪೇಟೆ’ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು/ಎ ಪ್ರಮಾಣಪತ್ರ ನೀಡಿದೆ. ಚಿತ್ರ ಬಿಡುಗಡೆಗೆ ಎಲ್ಲ ಪ್ರಕ್ರಿಯೆಗಳನ್ನು ಮುಗಿಸಿದ ಚಿತ್ರತಂಡ, ನ. 19ರಂದು ತೆರೆ ಕಾಣಿಸಲು ಸಿದ್ಧತೆ ನಡೆಸಿದೆ.
ತೊಂಬತ್ತು ದಿನಗಳ ಕಾಲ ಬೆಂಗಳೂರು, ಚಿಕ್ಕಮಗಳೂರು, ಹಾಸನ, ಸಕಲೇಶಪುರ, ಕುಂದಾಪುರ, ತೀರ್ಥಹಳ್ಳಿ ಮುಂತಾದ ಕಡೆ ಚಿತ್ರೀಕರಣ ನಡೆಸಿದ್ದೇವೆ. ಸಂಬಂಧಗಳಿಗೆ ಬೆಲೆ ಕೊಡುವ ಒಂದು ಕುಟುಂಬ. ಸಂಬಂಧಗಳನ್ನು ಕಡೆಗಣಿಸುವಮತ್ತೊಂದು ಕುಟುಂಬ. ಈ ಕುಟುಂಬಗಳ ಎರಡು ಜೀವಗಳ ನಡುವೆ ಪ್ರೀತಿ ಮಾಡಿದಾಗ ಏನಾಗುತ್ತದೆ ಎಂಬುದೇ ‘ಮುಗಿಲ್ ಪೇಟೆ’ಯ ಕಥಾವಸ್ತು. ಇದು ನಿರ್ದಿಷ್ಟ ಜಾನರ್ನ ಸಿನಿಮಾ ಅಲ್ಲ. ಕೌಟುಂಬಿಕ ಸನ್ನಿವೇಶ, ಪ್ರೀತಿ, ಸಾಹಸ, ಉತ್ತಮ ಹಾಸ್ಯ ಎಲ್ಲವೂ ನಮ್ಮ ಸಿನಿಮಾದಲ್ಲಿವೆ. ಈ ನಮ್ಮ ಚಿತ್ರಕ್ಕೆ ನಿಮ್ಮ ಪ್ರೋತ್ಸಾಹವಿರಲಿ ಎಂದು ನಿರ್ದೇಶಕ ಭರತ್ ಎಸ್. ನಾವುಂದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
‘ಚಿತ್ರಕ್ಕೆ ಜನಮನ್ನಣೆ ಸಿಗುವ ಭರವಸೆಯಿದೆ. ಸಾಧುಕೋಕಿಲ, ರಂಗಾಯಣ ರಘು, ತಾರಾ, ಅವಿನಾಶ್ ಅವರಂತಹ ಉತ್ತಮ ಕಲಾವಿದರೊಡನೆ ಅಭಿನಯಿಸಿದ್ದ ಅನುಭವ ನಿಜಕ್ಕೂ ಮರೆಯುವ ಹಾಗಿಲ್ಲ. ನಾಯಕಿ ಕಯಾದು ಅವರ ಅಭಿನಯ ಸೂಪರ್. ಚಿತ್ರದ ತುಣುಕು ಹಾಗೂ ಹಾಡುಗಳನ್ನು ಅಪ್ಪನಿಗೆ ತೋರಿಸಿದೆ. ಇಷ್ಟಪಟ್ಟರು. ಅವರ ಆಶೀರ್ವಾದ ಸದಾ ಇರುತ್ತದೆ’ ಎಂದರು ನಾಯಕ ಮನು.
17 ಪಾತ್ರಗಳಲ್ಲಿ ಸಾಧು ಕೋಕಿಲ!
‘ನಾನು ಮೊದಲ ಬಾರಿಗೆ ಹದಿನೇಳು ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದೇನೆ. ಚಿತ್ರತಂಡದವರು ಇದನ್ನು ಲಿಮ್ಕಾ ದಾಖಲೆಗೆ ಕಳುಹಿಸುತ್ತೇವೆ ಎನ್ನುತ್ತಿದ್ದಾರೆ. ಸಂತೋಷ. ಆದರೆ ಯಾವ ಪಾತ್ರಗಳು ಅಂತ ಈಗ ಹೇಳುವುದಿಲ್ಲ. ಚಿತ್ರದಲ್ಲೇ ನೋಡಿ ಆನಂದಿಸಿ’ ಎಂದರು ಸಾಧುಕೋಕಿಲ.
‘ನಾನು ಮೊದಲು ಬಣ್ಣ ಹಚ್ಚಿದ್ದು ರವಿಚಂದ್ರನ್ ಅವರ ಮನೆಯಲ್ಲಿ. ಈಗ ಅವರ ಮಗನೊಡನೆ ನಟಿಸಿದ್ದೇನೆ. ಭಾಗವತರ ಪಾತ್ರ ಮಾಡಿದ್ದೇನೆ. ನಿಗದಿಯಂತೆ ಚಿತ್ರೀಕರಣ ನಡೆಸಿದ ನಿರ್ದೇಶಕರ ಕಾರ್ಯವೈಖರಿ ಶ್ಲಾಘನೀಯ. ಮನು ಸೇರಿದಂತೆ ಎಲ್ಲರ ಅಭಿನಯ ಅದ್ಭುತ’ ಎಂದು ರಂಗಾಯಣ ರಘು ತಿಳಿಸಿದರು.
ಸಂಗೀತ ನಿರ್ದೇಶಕ ಶ್ರೀಧರ್ ವಿ ಸಂಭ್ರಮ್, ಕಲಾವಿದರಾದ ಕಾಕ್ರೋಜ್ ಸುಧಿ, ಮೇಘಶ್ರೀ, ಅಪ್ಪಣ್ಣ , ಆನಂದ್ ಹಾಗೂ ಎಫೆಕ್ಟ್ ರಾಜನ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.