ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ನಟ ಶಿವರಾಜ್ ಕುಮಾರ್, ದುನಿಯಾ ವಿಜಯ್ ಕೂಡ ಹಾಜರಿದ್ದರು. ಟೀಸರ್ ಬಿಡುಗಡೆ ಬಳಿಕ ಮಾತನಾಡಿದ ಅವರು, ‘ಒಂದು ಸತ್ಯ ಹೇಳಿ ಬಿಡ್ತೀನಿ. ಚಿತ್ರದಲ್ಲಿ ಶೇ. 90 ಗ್ರಾಫಿಕ್ಸ್ ಇದೆ. ಬೇರೆ ಬೇರೆ ಕಡೆಗಳಲ್ಲಿ ಇದರ ಕೆಲಸ ನಡೆಯುತ್ತಿದೆ. ಅದು ಮುಗಿಯೋವರೆಗೂ ಏನನ್ನೂ ತೋರಿಸೋಕೆ ಆಗಲ್ಲ. ಈ ಮಧ್ಯೆ ಬರ್ತ್ಡೇ ಬಂತು. ಈ ಕಾರಣದಿಂದ ಅಭಿಮಾನಿಗಳ ತಲೆಗೆ ಕೆಲಸ ಕೊಡಲು ಈ ಟೀಸರ್ ರಿಲೀಸ್ ಮಾಡಿದ್ದೇನೆ’ ಎಂದಿದ್ದಾರೆ.
ಐದು ಭಾಷೆಗಳಲ್ಲಿ ಚಿತ್ರ ತೆರೆಗೆ ಬರುತ್ತಿದ್ದು, ಈ ವರ್ಷದ ಅಂತ್ಯಕ್ಕೆ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ. ಚಿತ್ರದಲ್ಲಿ ಹೆಚ್ಚಿನ ಗ್ರಾಫಿಕ್ಸ್ ಬಳಕೆ ಮಾಡಲಾಗಿದ್ದು, ಮತ್ತೊಮ್ಮೆ ನಿರ್ದೇಶನ ಮತ್ತು ನಟನೆಯಲ್ಲಿ ತಮ್ಮ ಕೈಚಳಕ ತೋರಿಸಲು ರಿಯಲ್ ಸ್ಟಾರ್ ಸಜ್ಜಾಗಿದ್ದಾರೆ.
ಲಹರಿ ಫಿಲಂಸ್ ಹಾಗೂ ವೀನಸ್ ಎಂಟರ್ಟೈನರ್ಸ್ ಲಾಂಛನದಲ್ಲಿ ಜಿ.ಮನೋಹರನ್ ಹಾಗೂ ಕೆ.ಪಿ.ಶ್ರೀಕಾಂತ್ ಈ ಚಿತ್ರವನ್ನು ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ. ‘ತರ್ಲೆನನ್ಮಗ’ನಿಂದ ಹಿಡಿದು ‘ಶ್’, ‘ಓಂ’, ‘ಆಪರೇಷನ್ ಅಂತ’, ‘ಎ’, ‘ಸ್ವಸ್ತಿಕ್’, ‘ಉಪೇಂದ್ರ’, ‘ಸೂಪರ್’, ‘ಉಪ್ಪಿ–2’ ಹೀಗೆ ಸಾಲು ಸಾಲು ಹಿಟ್ ಚಿತ್ರಗಳನ್ನು ನಿರ್ದೇಶಿಸಿದ್ದ ಉಪೇಂದ್ರ ಅವರು ಇದೀಗ ಎಂಟು ವರ್ಷಗಳ ನಂತರ ಮತ್ತೆ ನಿರ್ದೇಶಕನಾಗಿ ತೆರೆ ಮೇಲೆ ಬರಲಿದ್ದಾರೆ.