ಹಾಲಿವುಡ್ ಮಾದರಿಯ ಆ್ಯಕ್ಷನ್, ಥ್ರಿಲ್ಲರ್ ಸಿನಿಮಾಗಳನ್ನು ಮಾಡುವಲ್ಲಿ ಇತ್ತೀಚೆಗೆ ಬಾಲಿವುಡ್ನ ನಿರ್ದೇಶಕರು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ‘ವಾರ್’ ಸಿನಿಮಾ ಬಳಿಕ ಆ್ಯಕ್ಷನ್ ಸಿನಿಮಾಗಳ ಕಡೆ ಒಲವು ಹೆಚ್ಚಿದೆ.
ನಿರ್ಮಾಪಕ ಆನಂದ್ ಎಲ್.ರಾಜು, ತಮ್ಮ ಮುಂದಿನ ಆ್ಯಕ್ಷನ್, ಥ್ರಿಲ್ಲರ್ ಸಿನಿಮಾವನ್ನು ಘೋಷಿಸಿದ್ದಾರೆ. ಕತ್ರಿನಾ ಕೈಫ್ ಹಾಗೂ ವಿದ್ಯಾ ಬಾಲನ್ ಮೊದಲ ಬಾರಿಗೆ ತೆರೆಯ ಮೇಲೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವುದು ಈ ಸಿನಿಮಾದ ವಿಶೇಷ.
ಸಹ ನಿರ್ದೇಶಕರಾಗಿ ಅನುಭವ ಇರುವ ಅನಿರುದ್ಧ್ ಗಣಪತಿ ಈ ಸಿನಿಮಾದ ಮೂಲಕ ನಿರ್ದೇಶನಕ್ಕೆ ಕಾಲಿಡಲಿದ್ದಾರೆ. ‘ಜೀರೊ’ ಸಿನಿಮಾದಲ್ಲೂ ಅವರು ಸಹ ನಿರ್ದೇಶನ ಮಾಡಿ ಸೈ ಎನಿಸಿಕೊಂಡಿದ್ದರು. ಮುಖ್ಯಪಾತ್ರದಲ್ಲಿ ಕತ್ರಿನಾ ಅಭಿನಯಿಸಲಿದ್ದು, ಅವರ ಡೇಟ್ಸ್ ಹೊಂದಾಣಿಕೆಯಾಗಿದ್ದರಿಂದ ಸಿನಿಮಾ ಒಪ್ಪಿಕೊಂಡಿದ್ದಾರೆ.
‘ಸೂರ್ಯವಂಶಿ’ ಸಿನಿಮಾ ಶೂಟಿಂಗ್ ವೇಳೆ ಕತ್ರಿನಾ, ಮಹಿಳಾ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸುವ ಕನಸು ಹೊಂದಿರುವುದಾಗಿ ಹೇಳಿಕೊಂಡಿದ್ದರು. ಈ ಕಾರಣಕ್ಕೆ ಅವರಿಗೆ ಈ ಸಿನಿಮಾದಲ್ಲಿ ಅವಕಾಶ ದೊರೆತಿದೆ. ಅದೇ ರೀತಿಯ ಪಾತ್ರ ಈ ಸಿನಿಮಾದಲ್ಲಿ ಇರುವುದರಿಂದ ಕತ್ರಿನಾ ಒಪ್ಪಿಕೊಂಡಿದ್ದಾರಂತೆ.