ಪೈರಸಿ ತಡೆಗೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಹಾಗೂ ಇವುಗಳ ವಿಚಾರಣೆಗೆ ಪ್ರತ್ಯೇಕ ನ್ಯಾಯಾಲಯ ಸ್ಥಾಪಿಸಬೇಕು ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಪ್ರತಿನಿಧಿಗಳು ಗೃಹ ಸಚಿವರಿಗೆ ಮಂಗಳವಾರ ಮನವಿಪತ್ರ ನೀಡಿದರು. ಮನವಿ ಸ್ವೀಕರಿಸಿ ಮಾತನಾಡಿದ ಅವರು, ‘ಆನ್ಲೈನ್ ಜೂಜಾಟ ನಿಷೇಧಿಸಲು ಮಸೂದೆ ತರಲು ಮುಂದಾದಾಗ ನಮ್ಮ ಮೇಲೆ ಒತ್ತಡ ಬಹಳಷ್ಟಿತ್ತು. ಆದರೂ, ಯಾರನ್ನೂ ಬೀದಿಪಾಲು ಮಾಡಲು ನಾವು ಬಿಡುವುದಿಲ್ಲ ಎಂದು ಇದನ್ನು ಜಾರಿಗೊಳಿಸಿದೆವು. ಹಾಗೆಯೇ ಪೈರಸಿ ತಡೆಯಲು ಕಠಿಣ ಕ್ರಮ ಕೈಗೊಳ್ಳುತ್ತೇವೆ. ಮಲ್ಟಿಪ್ಲೆಕ್ಸ್ ಹಾಗೂ ಚಿತ್ರಮಂದಿರಗಳಲ್ಲಿ ಟಿಕೆಟ್ ದರ ನಿಯಂತ್ರಣದ ಕುರಿತೂ ಅಧಿಕಾರಿಗಳ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ’ ಎಂದರು.