ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿಭೇದವಿಲ್ಲದ ಪ್ರಾಣಿ ಪ್ರಪಂಚ...

Last Updated 24 ಜೂನ್ 2018, 18:38 IST
ಅಕ್ಷರ ಗಾತ್ರ

ಮನುಷ್ಯರ ಸಮಾಜದಲ್ಲಿ ಇರುವ ಜಾತಿಭೇದವು ಪ್ರಾಣಿ ಜಗತ್ತಿನಲ್ಲಿ ಇಲ್ಲ ಎಂದರೆ ನಂಬುತ್ತೀರಾ. ಇಲ್ಲಿ ನಾವು ಹೇಳಹೊರಟಿರುವುದು ಪ್ರಭೇದಗಳ ಗಡಿಯ ಆಚೆಗೂ ಗೆಳೆತನ ವಿಸ್ತರಿಸಿಕೊಳ್ಳುವ ಪ್ರಾಣಿಗಳ ಬಗ್ಗೆ. ಜನಪ್ರಿಯ ಅನಿಮೇಟೆಡ್ ಚಿತ್ರ 'ಐಸ್ ಏಜ್'ನಲ್ಲಿ ಪ್ರಾಚೀನ ಶಿಲಾಯುಗದ ಹಿಮಯುಗಕ್ಕೆ ಸಂಬಂಧಿಸಿದ ಕತೆಯಿದೆ. ಈ ಸಿನಿಮಾದ ಪ್ರಮುಖ ಪಾತ್ರಗಳು ಸೋಮಾರಿ ಸಲಗ ಮತ್ತು ಸಂಶಯಾಸ್ಪದ ನಡತೆಯ ಹುಲಿಯದ್ದು. ಇವು ಪೂರಕ ವಾತಾವರಣವಿಲ್ಲದ ಸ್ಥಿತಿಯಲ್ಲಿ ಬದುಕುಳಿಯುವ ಸಾಧ್ಯತೆಗಳನ್ನು ಹೆಚ್ಚಿಸಿಕೊಳ್ಳಲು, ತಮ್ಮ ಪ್ರಭೇದಗಳ ವ್ಯತ್ಯಾಸಗಳನ್ನು ಮರೆತು, ಒಗ್ಗೂಡಿ, ತಮ್ಮ ಜೀವನ ಪ್ರಯಾಣದಲ್ಲಿ ಪರಸ್ಪರ ಸಹಾಯ ಮಾಡಿಕೊಳ್ಳುತ್ತವೆ. ವಿಭಿನ್ನ ಜಾತಿಗಳಿಗೆ ಸೇರಿದ ಪ್ರಾಣಿಗಳ ನಡುವಣ ಸ್ನೇಹದ ಅತ್ಯುತ್ತಮ ಉದಾಹರಣೆಯಿದು. ಇದು ಕಾಲ್ಪನಿಕವಾದರೂ, ವಾಸ್ತವದಲ್ಲೂ ಇಂತಹ ಸಾವಿರಾರು ಉದಾಹರಣೆಗಳನ್ನು ಕಾಣಬಹುದು. ಭಾರತೀಯ ವಿಜ್ಞಾನ ಸಂಸ್ಥೆಯ ಸಂಶೋಧಕರು ನಡೆಸಿದ ಹೊಸ ಅಧ್ಯಯನವೊಂದು, ಇಂತಹ ಅಸಾಮಾನ್ಯ ಸ್ನೇಹದ ಮೇಲೆ ಬೆಳಕು ಚೆಲ್ಲುತ್ತದೆ.

ಪ್ರಾಣಿ ಸಮಾಜದ ಕ್ರಿಯಾಶೀಲತೆಯು ಆಸಕ್ತಿದಾಯಕ
ವಾಗಿದೆ. ಒಂದೆಡೆ, ಒಂದೇ ಜಾತಿಯ ಪ್ರಾಣಿಗಳು ಆಹಾರ ಸಂಪಾದನೆ, ಸಂತಾನೋತ್ಪತ್ತಿ ಹಾಗೂ ಮಕ್ಕಳ ಪಾಲನೆ ಪೋಷಣೆಗಳಿಗಾಗಿ ಗುಂಪು ಕಟ್ಟಿಕೊಳ್ಳುತ್ತವೆ. ಮತ್ತೊಂದೆಡೆ, ಬೇರೆ ಬೇರೆ ಜಾತಿಯ ಪ್ರಾಣಿಗಳ ನಡುವೆ ಗೆಳೆತನ ಮೂಡಿ, ಅವು ಗುಂಪು ಕಟ್ಟಿಕೊಳ್ಳುವ ಉದಾಹರಣೆಗಳು. ಕಾಜಾಣ ಹಾಗೂ ಬ್ಯಾಬ್ಲರ್ಗಳ ನಡುವೆ ಇಂತಹದ್ದೇ ಒಂದು ಅಸಾಮಾನ್ಯ 'ಬಂಧ' ಕಂಡು ಬರುತ್ತದೆ. ಬ್ಯಾಬ್ಲರ್ಗಳು ಗುಂಪುಗೂಡಿ ಬಿರುಸಿನ ಹಾರಾಟ ನಡೆಸಿ, ಪೊದೆಗಳೊಳಗೆ ನುಗ್ಗಿ ಕೀಟಗಳನ್ನು ಮೇಲೆಬ್ಬಿಸುತ್ತವೆ. ಬ್ಯಾಬ್ಲರ್ಗಳನ್ನು ಹಿಂಬಾಲಿಸಿ ಹೋದ ಕಾಜಾಣಗಳು, ಹೀಗೆ ಮೇಲೆದ್ದ ಕೀಟಗಳನ್ನು ಸುಲಭವಾಗಿ ಹಿಡಿದು ತಿನ್ನುತ್ತವೆ. ಕಾಜಾಣಗಳು ಇತರ ಕಾಜಾಣಗಳನ್ನೇ ಹಿಂಬಾಲಿಸಿ ಹಾರಿದರೆ, ಕೀಟ ಬೇಟೆ ಕಷ್ಟ ಸಾಧ್ಯ. ಏಕೆಂದರೆ, ಕಾಜಾಣಗಳು ಹೀಗೆ ಗುಂಪಿನಲ್ಲಿ ಹಾರಿ ಕೀಟಗಳನ್ನು ಮೇಲೆಬ್ಬಿಸಲಾರವು. ಅವು ಒಂದೆಡೆ ಕೂತು, ಕಾದು ಕೀಟಗಳನ್ನು ಬೇಟೆಯಾಡುವ ಪಕ್ಷಿಗಳು. ಹಾಗಾಗಿ ಬ್ಯಾಬ್ಲರ್ಗಳ ಜೊತೆ ಗುಂಪುಗೂಡಿ ಬೇಟೆಗಿಳಿದರೆ, ಅನುಕೂಲ ಎಂಬುದನ್ನು ಅವು ಮನಗಂಡಿವೆ.

ತಮ್ಮ ಅಧ್ಯಯನದ ಪ್ರಾಮುಖ್ಯದ ಮೇಲೆ ಬೆಳಕು ಚೆಲ್ಲುತ್ತಾ, ‘ಪ್ರಾಣಿಗಳ ಸಾಮಾಜಿಕತೆಯ ಬಗ್ಗೆ ನಮ್ಮ ಗ್ರಹಿಕೆಯು, ಒಂದೇ ಜಾತಿಯ ಗುಂಪುಗಳ ಬಗ್ಗೆ ಇರುವ ಮಾಹಿತಿಯನ್ನು ಆಧರಿಸಿದೆ. ವಿವಿಧ ಜಾತಿಗಳ ಜೀವಿಗಳು ಕಟ್ಟಿಕೊಳ್ಳುವ ಗುಂಪುಗಳನ್ನು, ಒಂದೇ ಜಾತಿಯ ಜೀವಿಗಳ ಗುಂಪುಗಳಿಗೆ ಹೋಲಿಸಿ ಅಧ್ಯಯನ ಮಾಡಿರುವುದು ಬಹಳವೇ ವಿರಳ’ ಎನ್ನುತ್ತಾರೆ ಭಾರತೀಯ ವಿಜ್ಞಾನ ಸಂಸ್ಥೆಯ ಡಾ.ಹರಿ ಶ್ರೀಧರ್. ಈ ಅಧ್ಯಯನವನ್ನು ರಾಯಲ್ ಸೊಸೈಟಿಯ 'ಫಿಲಾಸಫಿಕಲ್ ಟ್ರಾನ್ಸಾಕ್ಷನ್ಸ್' ನಿಯತಕಾಲಿಕೆಯಲ್ಲಿ ಪ್ರಕಟಿಸಲಾಗಿದೆ. ಈ ಅಧ್ಯಯನವನ್ನು ಭಾರತದ ರಾಷ್ಟ್ರೀಯ ವಿಜ್ಞಾನ ಅಕಾಡೆಮಿ, ವಿಸೆನ್ಸ್ಚಫ್ಟ್ಸ್ಕೊಲೆಗ್ ಜು ಬರ್ಲಿನ್ ಮತ್ತು ಡಿ.ಬಿಟಿ-ಐಐಎಸ್ಸಿಯ ಸಹಭಾಗಿತ್ವವು ಬೆಂಬಲಿಸಿದೆ.

ಡಾ. ಶ್ರೀಧರ್ ಮತ್ತು ಡಾ.ವಿಶ್ವೇಷ ಗುಟ್ಟಾಲ್ ಅವರ ಈ ಅಧ್ಯಯನದಲ್ಲಿ, ವಿಭಿನ್ನ ಜಾತಿಗಳ ನಡುವಣ ಪರಸ್ಪರ ಕ್ರಿಯೆಗಳ ಬಗ್ಗೆ ಈಗಾಗಲೇ ನಡೆದಿರುವ ಅಧ್ಯಯನಗಳನ್ನು ವಿಶ್ಲೇಷಿಸಲಾಗಿದೆ. ಆ ಜೀವಿಗಳ ವರ್ತನೆಯಲ್ಲಿನ ವೈವಿಧ್ಯತೆ ಮತ್ತು ಈ ಸಂಬಂಧವು ನೀಡುವ ಪ್ರಯೋಜನಗಳ ಬಗ್ಗೆಯೂ ಅಧ್ಯಯನ ನಡೆಸಿ, ಈ ವಿವಿಧ ಜಾತಿಗಳ ಗುಂಪುಗೂಡುವಿಕೆಯು ಭೌಗೋಳಿಕವಾಗಿ ಹಾಗೂ ಜೀವವರ್ಗಗಳಿಗೆ ಸಂಬಂಧಿಸಿದಂತೆ ಎಷ್ಟು ವ್ಯಾಪಕವಾಗಿ ಹರಡಿಕೊಂಡಿದೆ ಎಂಬುದನ್ನೂ ಕೂಲಂಕುಷವಾಗಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದ್ದಾರೆ. ಒಂದು ಜೀವಿಯು, ಮಿಶ್ರ - ಜಾತಿಗಳ ಗುಂಪಿಗೆ ಸೇರಲು ಯಾವ ಅಂಶಗಳು ಪ್ರಭಾವ ಬೀರುತ್ತವೆ ಎಂಬುದನ್ನೂ ತಿಳಿಯಲು ಪ್ರಯತ್ನಿಸಿದ್ದಾರೆ.

ಈ ಅಧ್ಯಯನಕ್ಕೂ ಮುನ್ನ, ವಿವಿಧ ಜಾತಿಯ ಪ್ರಾಣಿಗಳ ಗುಂಪುಗಳು (ಭಿನ್ನಜಾತೀಯ ಸಾಮಾಜಿಕ ಗುಂಪುಗಳು) ಮತ್ತು ಒಂದೇ ರೀತಿಯ ಪ್ರಾಣಿಗಳ ಗುಂಪುಗಳು - ಇವೆರಡೂ ಗುಣಾತ್ಮಕವಾಗಿ ವಿಭಿನ್ನ ಘಟಕಗಳು ಎಂದು ವಿಜ್ಞಾನಿಗಳು ನಂಬಿದ್ದರು. ಒಂದು ಪ್ರಭೇದದ ಪ್ರಾಣಿಗಳು, ತಮ್ಮದೇ ಪ್ರಭೇದದ ಇತರ ಜೀವಿಗಳಿಂದ ಯಾವುದಾದರೂ ಪ್ರಯೋಜನವನ್ನು ಪಡೆಯಲು ಸಾಧ್ಯವಿಲ್ಲದ ಪರಿಸ್ಥಿತಿಯಲ್ಲಿ, ಭಿನ್ನಜಾತಿಯ ಸಾಮಾಜಿಕ ಗುಂಪುಗಳ ಭಾಗವಾಗಿ ಸೇರಿ, ಅನುಕೂಲ ಪಡೆಯುತ್ತವೆ ಎಂದು ವಿಜ್ಞಾನಿಗಳು ಭಾವಿಸಿದ್ದರು. ಆದರೆ, ಇದು ಸಾರ್ವಕಾಲಿಕ ಸತ್ಯವಲ್ಲ ಎಂದು ಇತ್ತೀಚಿನ ಅಧ್ಯಯನಗಳು ತೋರಿಸಿವೆ.

ಸಂಶೋಧಕರು ಅರಿತುಕೊಂಡ ಪ್ರಕಾರ, ಒಂದೇ ಪ್ರಭೇದದ ಜೀವಿಗಳ ಗುಂಪಾಗಲೀ, ಬೇರೆ ಬೇರೆ ಪ್ರಭೇದಗಳ ಗುಂಪಾಗಲೀ, ಮೂಲಭೂತ ಗುಣಲಕ್ಷಣಗಳು ಒಂದೇ ಬಗೆಯಲ್ಲಿದ್ದು, ಸಾಮೂಹಿಕ ಹಿತಕ್ಕಾಗಿ ಇಡಿಯ ಸಮುದಾಯವು ಕಾರ್ಯನಿರತವಾಗುತ್ತದೆ.
‘ಪ್ರಕೃತಿಯಲ್ಲಿ, ವಿವಿಧ ಪ್ರಭೇದಗಳ ಭವಿಷ್ಯವು ಒಂದಕ್ಕೊಂದು ಜಾಲದಂತೆ ಬೆಸೆದುಕೊಂಡಿದೆ. ನಾವು ಪ್ರಕೃತಿಯಲ್ಲಿನ ಜಾಲದ ಬಗ್ಗೆ ಯೋಚಿಸುವಾಗ, ಪರಭಕ್ಷಕ ಮತ್ತು ಬೇಟೆಯ ನಡುವಣ ಪರಸ್ಪರ ಕ್ರಿಯೆಗಳ ಬಗ್ಗೆ, ಅಥವಾ ಒಂದು ಸಸ್ಯ ಮತ್ತು ಅದರ ಪ್ರಸರಣಕಾರಿ ಜೀವಿಯ ಸಂಬಂಧದ ಬಗ್ಗೆ ಗಮನ ಹರಿಸುತ್ತೇವೆ. ಆದರೆ, ಆಹಾರ ಸರಪಳಿಯ ವಿವಿಧ ಹಂತಗಳಲ್ಲಿರುವ ಜೀವಿಗಳ ಬದುಕೂ ಒಂದಕ್ಕೊಂದು ಬೆಸೆದುಕೊಂಡಿರುತ್ತವೆ. ಅದರಲ್ಲೂ ಭಿನ್ನ ಜಾತಿಯ ಜೀವಿಗಳು ಒಂದೇ ಗುಂಪಿನಲ್ಲಿದ್ದಾಗ, ಒಂದೇ ರೀತಿಯ ಸಂಪನ್ಮೂಲಗಳನ್ನು ಬಳಸುವ, ಆಹಾರ ಸರಪಳಿಯ ಒಂದೇ ಹಂತಕ್ಕೆ ಸೇರಿರುವ ಜೀವಿಗಳ ನಡುವೆ ನಿಕಟ ಸಂಬಂಧ ಏರ್ಪಡುತ್ತದೆ. ತಮ್ಮ ಪರಸ್ಪರ ಸಾಮಾಜಿಕ ಉಳಿವಿಗಾಗಿ ಅವು ಪರಸ್ಪರ ಅವಲಂಬಿಸಿರುವುದರಿಂದ, ಅವುಗಳ ಭವಿಷ್ಯಗಳು ಒಂದಕ್ಕೊಂದು ಬೆಸೆದುಕೊಂಡಿವೆ’ ಎಂದು ಡಾ. ಶ್ರೀಧರ್ ಹೇಳುತ್ತಾರೆ.

ಹಲವು ಜೀವಜಾತಿಗಳ ನಡುವೆ ಬಲವಾದ ಸಂಪರ್ಕವಿದೆ ಎಂಬುದನ್ನು ಸಾರುವ ಈ ಅಧ್ಯಯನವು ಪರಿಸರ ದೃಷ್ಟಿಯಿಂದ ಬಹಳ ಮಹತ್ವದ್ದು ಎಂದು ಸಂಶೋಧಕರು ಮನಗಂಡಿದ್ದಾರೆ. ಇಂತಹ ಗುಂಪುಗಳಲ್ಲಿ ಕೆಲವು 'ಕೇಂದ್ರ ಪ್ರಭೇದ'ಗಳು ಇರುತ್ತವೆ. ಅವು ಇಡಿಯ ಗುಂಪಿಗೆ ಅತ್ಯಂತ ಹೆಚ್ಚು ಪ್ರಯೋಜನಕಾರಿಯಾಗಿದ್ದು, ಗುಂಪಿನ ರಚನೆ ಹಾಗೂ ಒಗ್ಗಟ್ಟಿಗೆ ಕಾರಣವಾಗಿರುತ್ತದೆ. ಅವೇನಾದರೂ ಅಳಿವಿನಂಚಿಗೆ ಸಾಗಿದರೆ, ಇಡಿಯ ಗುಂಪೇ ನಾಶವಾಗುವ ಸಾಧ್ಯತೆ ಇರುತ್ತದೆ. ಪರಿಸರದಲ್ಲಾಗುವ ಬದಲಾವಣೆಗಳು, ಭಿನ್ನಜಾತಿಯ ಸಾಮಾಜಿಕ ಗುಂಪಿನ ಮೇಲೆ ಹೇಗೆ ಪರಿಣಾಮ ಬೀರುತ್ತವೆ. ಏಕಜಾತೀಯ ಗುಂಪುಗಳ ಮೇಲೆ ಬೀರುವ ಪ್ರಭಾವಕ್ಕೂ, ಇದಕ್ಕೂ ಏನಾದರೂ ವ್ಯತ್ಯಾಸವಿದೆಯೇ. ಒಂದು ಜೀವಿಯು ತನ್ನದೇ ಜಾತಿಯ ಅಥವಾ ಭಿನ್ನಜಾತಿಯ ಸಾಮಾಜಿಕ ಸಂಗಾತಿಯನ್ನು ಆಯ್ದುಕೊಳ್ಳುವುದು, ಯಾವ ಆಧಾರದ ಮೇಲೆ. ಇಂತಹ ಹಲವಾರು ಪ್ರಶ್ನೆಗಳಿಗೆ ಸಂಶೋಧಕಿ ಅನಿಂದಿತಾ ದಾಸ್, ಸಂಶೋಧಕ ಡಾ. ಶ್ರೀಧರ್ ಸೇರಿದಂತೆ ಅನೇಕ ಸಂಶೋಧಕರ ಗುಂಪು, ಅಧ್ಯಯನ ನಡೆಸುತ್ತಾ, ಈ ಪರಿಸರ ದೃಷ್ಟಿಯಿಂದ ಪ್ರಮುಖವಾದ ವಿಷಯಕ್ಕೆ ಹಲವಾರು ಆಯಾಮಗಳನ್ನು ನೀಡುತ್ತಿದ್ದಾರೆ.

–ಗುಬ್ಬಿ ಲ್ಯಾಬ್ಸ್‌

(ಸಂಶೋಧನಾ ಚಟುವಟಿಕೆಗಳಲ್ಲಿ ತೊಡಗಿರುವ ಸಾಮಾಜಿಕ ಉದ್ಯಮ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT