ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರಸ್ನೇಹಿ ವಾಸ್ತುಶಿಲ್ಪ ನಮ್ಮದಾಗಲಿ..

Environmental architecture
Last Updated 29 ಅಕ್ಟೋಬರ್ 2019, 19:45 IST
ಅಕ್ಷರ ಗಾತ್ರ

ನಿಮ್ಮ ಪ್ರಕಾರ ವಾಸ್ತುಶಿಲ್ಪ ಎಂದರೆ?

ಸಾಮಾನ್ಯವಾಗಿ ಕಟ್ಟಡ ನಿರ್ಮಿಸಬೇಕಾದರೆ ಸುತ್ತಮುತ್ತಲಿನ ಮರಗಿಡಗಳನ್ನು ಕತ್ತರಿಸಿ ನಿರ್ಮಿಸುತ್ತೇವೆ. ಆದರೆ ಪ್ರಕೃತಿಯನ್ನು ನಾಶಮಾಡದಂತೆ ನಾವು ವಾಸ್ತುಶಿಲ್ಪ ರಚಿಸಬಹುದು. ಪ್ರಕೃತಿ ನಾಶಮಾಡಿದರೆ ನಾವು ಏನನ್ನೋ ಕಳೆದುಕೊಂಡಂತೆ ಭಾಸವಾಗುತ್ತದೆ. ಪ್ರಕೃತಿ ಹೊರತಾದ ವಾಸ್ತುಶಿಲ್ಪವಿಲ್ಲ.

ಬೆಂಗಳೂರಿನಲ್ಲಿ ಐಐಎಂಬಿ ಕಟ್ಟಡ ವಿನ್ಯಾಸದ ಮುಖ್ಯ ಪ್ರೇರಣೆ ಏನು?

ನಾವು ವಿವಿಧ ರೀತಿಯ ಸಂಸ್ಕೃತಿಯನ್ನು ಅನುಸರಿಸುತ್ತಿದ್ದೇವೆ. ಪ್ರತಿಯೊಬ್ಬರೂ ತಮ್ಮ ಕೆಸಗಳಲ್ಲಿ ನಿರತರಾಗಿದ್ದಾರೆ. ತಮ್ಮ ವೈಯಕ್ತಿಕ ಸಮಯವನ್ನು ನೆಮ್ಮದಿಯಾಗಿ ಕಳೆಯಲು ಸಾಧ್ಯವಾಗುತ್ತಿಲ್ಲ. ನಮ್ಮ ಸುತ್ತಮುತ್ತಲಿನ ವಾತಾವರಣ ಸರಿಯಿದ್ದರೆ ಅಲ್ಪಕಾಲವಾದರೂ ವಿಹರಿಸಬಹುದು. ಅಲ್ಪ ಕಾಲವಾದರೂ ಪ್ರಕೃತಿಯೊಂದಿಗೆ ಸಮಯ ಕಳೆಯುವುದು ಸಾಧ್ಯವಾಗಬೇಕು. ಈ ಕ್ಯಾಂಪಸ್‍ನಲ್ಲಿ ವಿಹರಿಸಬಹುದು, ವಾಯುವಿಹಾರಕ್ಕೆ ಪ್ರಶಸ್ತ ಜಾಗ. ಇದು ಪ್ರಕೃತಿ ಮತ್ತು ಬ್ರಹ್ಮಾಂಡದೊಂದಿಗಿನ ಸಂಬಂಧ.

ನಿಸರ್ಗ ಮತ್ತು ವಾಸ್ತುಶಿಲ್ಪ ಸಂಬಂಧ ಹೇಗೆ?

ನಾವು ಮರಗಳನ್ನು ನಿರಂತರವಾಗಿ ಕತ್ತರಿಸುತ್ತಿರುವುದರಿಂದ ನೀರಿನ ಮೂಲಗಳು ಬತ್ತಿಹೋಗುತ್ತಿವೆ. ಇದು ಮುಂದುವರಿದರೆ ಗಾಳಿ, ನೀರಿನ ಕೊರತೆ ಅನುಭವಿಸಬೇಕಾಗುತ್ತದೆ. ಈಗಾಗಲೇ ಎಲ್ಲೆಂದರಲ್ಲಿ ಮಾಲಿನ್ಯವಿದೆ. ಹೀಗೆಯೇ ಮುಂದುವರೆದರೆ ಮನುಷ್ಯ ಬದುಕುಳಿಯುವ ಸಾಧ್ಯತೆ ತೀರ ಕಡಿಮೆ. ನಾವು ದೇವಸ್ಥಾನಗಳಿಗೆ ಏಕೆ ಹೋಗುತ್ತೇವೆ? ಅಲ್ಲಿ ಪ್ರಶಾಂತ ವಾತಾವರಣವಿರುತ್ತದೆ. ಆದರೆ ಇತ್ತೀಚೆಗೆ ದೇವಸ್ಥಾನಕ್ಕೆ ಹೋದರೂ ಅವರ ಮನಸು ಅಲ್ಲಿ ಇರುವುದಿಲ್ಲ ಮೊಬೈಲ್ ಹಿಡಿದು ಕುಳಿತುಬಿಡುತ್ತಾರೆ. ರಸ್ತೆಗಳನ್ನು ಅಗಲ ಮಾಡುತ್ತಿದ್ದೇವೆ, ಇರುವ ನೈಸರ್ಗಿಕ ಸಂಪನ್ಮೂಲಗಳನ್ನು ನಾಶ ಮಾಡುತ್ತಿದ್ದೇವೆ ಇದರಿಂದ ನಾವು ಪಡೆದಿದ್ದಾದರೂ ಏನು? ನಮಗೆ ವೇಗವಾದ ಮತ್ತು ತುಂಬಾ ಉತ್ತಮವಾದ ವಸ್ತುಗಳು ಬೇಡ, ಜಾಗತಿಕವಾಗಿ ಸಮೃದ್ಧವಾದ ವಸ್ತು ಉತ್ಪಾದನೆ ಅಥವಾ ಬೆಳವಣಿಗೆ ಬೇಕು. ವಾಸ್ತುಶಿಲ್ಪ ಎಂಬುದು ಸೂಕ್ತ ಮತ್ತು ಉತ್ತಮ ವಸ್ತುಗಳನ್ನು ಬಳಸಿಕೊಂಡು ರೂಪಿಸುವಂಥದ್ದು, ಇದು ಫಲಿತಾಂಶಕ್ಕೆ ಸಂಬಂಧಿಸಿದ್ದೂ ಹೌದು. ಮುಖ್ಯವಾಗಿ ನಾವು ವಸ್ತುವನ್ನು ಮರುಬಳಕೆ ಮಾಡಿಕೊಳ್ಳಬೇಕು. ನೈಸರ್ಗಿಕವಾಗಿ ವಸ್ತುಗಳನ್ನು ಎಷ್ಟು ಬಳಕೆ ಮಾಡಬೇಕೊ ಅಷ್ಟು ಮಾಡಬೇಕು. ಒಂದು ಕಟ್ಟಡ ಕಟ್ಟಲು ಯೋಜನೆ ಬಹಳ ಮುಖ್ಯ. ಕಳಪೆ ಯೋಜನೆ ಇದ್ದಲ್ಲಿ ಕಟ್ಟಡಗಳು ಕೆಲವೇ ದಿನಗಳಲ್ಲಿ ಕುಸಿದು ಬೀಳುತ್ತವೆ.

ನಿಮ್ಮ ಪ್ರಕಾರ ಭಾರತದ ಯಾವ ನಗರ ವಾಸ್ತುಶಿಲ್ಪದಲ್ಲಿ ಉತ್ತಮ?

ಭಾರತದಲ್ಲಿ ಅನೇಕ ಐತಿಹಾಸಿಕ ತಾಣಗಳು ವಾಸ್ತುಶಿಲ್ಪದ ದೃಷ್ಟಿಯಿಂದ ಆಕರ್ಷಣೀಯ. ಇದರಿಂದ ಪ್ರವಾಸಿಗರ ಸಂಖ್ಯೆಯೂ ಹೆಚ್ಚುತ್ತಿದೆ. ನಾನು ಭೇಟಿ ನೀಡಿದ ಬನವಾಸಿ ವಾಸ್ತುಶಿಲ್ಪದ ನೆಲೆಯಲ್ಲಿ ಪ್ರಾಮುಖ್ಯತೆ ಹೊಂದಿದೆ ಎಂದು ಹೇಳಬಹುದು. ಉತ್ತಮ ವಾತಾವರಣವೂ ಅಲ್ಲಿರುವುದರಿಂದ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

ನಿಮ್ಮ ಕಾಲದ ವಾಸ್ತುಶಿಲ್ಪಕ್ಕೂ ಪ್ರಸ್ತುತ ವಾಸ್ತುಶಿಲ್ಪಕ್ಕೂ ವ್ಯತ್ಯಾಸ ಅಥವಾ ಸಾಮ್ಯತೆ ಇದೆಯೇ?
ಇತ್ತೀಚೆಗೆ ವಾಸ್ತುಶಿಲ್ಪದಲ್ಲಿ ತುಂಬಾ ವಸ್ತುಗಳ ಬಳಕೆಯಾಗುತ್ತಿದೆ. ಯಾಂತ್ರಿಕವಾಗಿ ವಸ್ತುಗಳನ್ನು ಬಳಸಲಾಗುತ್ತಿದೆ. ಇದು ತೃಪ್ತಿದಾಯಕವಲ್ಲ. ಹಳೆಯ ಮನೆಗಳಲ್ಲಿ ಕೂತು ಸ್ನೇಹಿತರೊಂದಿಗೆ ಮಾತನಾಡಲು ಉತ್ತಮ ವಾತಾವರಣವಿತ್ತು. ಆದರೆ ಇತ್ತೀಚೆಗೆ ಎಲ್ಲೆಂದರಲ್ಲಿ ಗ್ಲಾಸ್‍ಗಳಿಂದ ಅಲಂಕೃತವಾದ ವಸ್ತುಗಳು, ಕುರ್ಚಿ ಮೇಲೆ ಕುಳಿತುಕೊಳ್ಳಲು ಕೂಡ ಕೆಲವು ನಿಯಮಗಳನ್ನು ಪಾಲಿಸಬೇಕು.. ಇದು ತೀರಾ ಕಿರಿಕಿರಿ ಉಂಟುಮಾಡುವಂಥದು. ಆಧುನೀಕರಣದಿಂದಾಗಿ ಮನುಷ್ಯ ತನ್ನ ನೆಮ್ಮದಿ ಹುಡುಕುವ ಬದಲು ಮತ್ತೊಬ್ಬರಿಗಿಂತ ತಾನು ಎಲ್ಲದರಲ್ಲೂ ಉತ್ತಮ ಎನಿಸಿಕೊಳ್ಳಲು ಒದ್ದಾಡುತ್ತಿದ್ದಾನೆ.

ಕೊನೆಯ ಮಾತು?

ಅಭಿವೃದ್ಧಿಗೂ ವೇಗವಾಗಿ ಕಟ್ಟಡಗಳ ನಿರ್ಮಾಣವಾಗುತ್ತಿದೆ. ಹಣದಾಸೆಗಿಂತ ಆ ಕಟ್ಟಡದ ಬಾಳಿಕೆ ಮುಖ್ಯ. ಇರುವ ಮಾನವ ಸಂಪನ್ಮೂಲಗಳನ್ನು ಬಳಸಿಕೊಂಡು ಪರಿಸರಕ್ಕೆ ಹಾನಿ ಮಾಡದಂತೆ ಕಟ್ಟಡ ನಿರ್ಮಿಸೋಣ. ನಮ್ಮ ಮನೆಯ ಸುತ್ತಮುತ್ತ ಗಿಡ ಮರಗಳಿದ್ದರೆ ಎಷ್ಟು ಚೆನ್ನ! ಮನೆಯ ಅಂಗಳದಲ್ಲಿ ಎಷ್ಟು ಸಾಧ್ಯವೋ ಅಷ್ಟು ಗಿಡ ಮರಗಳಿಂದ ಅಲಂಕರಿಸೋಣ. ಇದರಿಂದ ಪರಿಸರ, ಅಂತರ್ಜಲ ಉಳಿಯುತ್ತದೆ ಮತ್ತು ಮುಖ್ಯವಾಗಿ ಮಾಲಿನ್ಯ ತಡೆಗಟ್ಟಬಹುದು.

ಡಾ. ಬಾಲಕೃಷ್ಣ ದೋಶಿ

ಬೃಹತ್ ಕಟ್ಟಡಗಳನ್ನು ವಿನ್ಯಾಸಗೊಳಿಸುವಲ್ಲಿ ನಿಪುಣ ಡಾ. ಬಾಲ್‌ಕೃಷ್ಣ ದೋಶಿ ಮಾರ್ಚ್‌ 2018ರಲ್ಲಿ ನೊಬೆಲ್‌ಗೆ ಸಮಾನವಾದ ಪ್ರತಿಷ್ಠಿತ ‘ಪ್ರಿಟ್ಜ್‌ಕರ್‌ ಪ್ರಶಸ್ತಿ’ಯನ್ನು ಪಡೆದ ಮೊದಲ ಭಾರತೀಯ ವಾಸ್ತುಶಿಲ್ಪಿ. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು ಕೂಡ.

1962 ರಿಂದ 72ರ ವರೆಗೆ ಅಹಮದಾಬಾದ್ ಸ್ಕೂಲ್ ಆಫ್ ಆರ್ಕಿಟೆಕ್ಟಚರ್‌ನ ಮೊದಲ ಸಂಸ್ಥಾಪಕ ನಿರ್ದೇಶಕರಾಗಿ, 1972 ರಿಂದ 79ರ ವರೆಗೆ ಅಹಮದಾಬಾದ್‌ ಸ್ಕೂಲ್‌ ಆಫ್‌ ಫ್ಲಾನಿಂಗ್‌ನ ಮೊದಲ ಸಂಸ್ಥಾಪಕ ನಿರ್ದೇಶಕರಾಗಿ, 1972ರಿಂದ 81ರವರೆಗೆ ಪರಿಸರ ಯೋಜನೆ ಮತ್ತು ತಂತ್ರಜ್ಞಾನ ಕೇಂದ್ರದ ಮೊದಲ ಸಂಸ್ಥಾಪಕ ಡೀನ್‌ ಆಗಿ ಕಾರ್ಯ ನಿರ್ವಹಿಸಿದ್ದಾರೆ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧ ಸಂಶೋಧನಾ ಸಂಸ್ಥೆ ವಾಸ್ತುಶಿಲ್ಪ ಫೌಂಡೇಶನ್ ಫಾರ್ ಸ್ಟಡೀಸ್ ಅಂಡ್ ರಿಸರ್ಚ್‌ ಇನ್ ಎನ್ವಿರಾನ್‌ಮೆಂಟ್ ಡಿಸೈನ್ ಸಂಸ್ಥೆಯ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಕಡಿಮೆ ವೆಚ್ಚದ ವಸತಿ ಮತ್ತು ನಗರ ಯೋಜನೆಗಳಲ್ಲಿ ಈ ಸಂಸ್ಥೆಯ ಕೆಲಸ ಗಮನಾರ್ಹ.

ದೋಶಿ ಅವರು ಸುಸ್ಥಿರತೆಯ ಪರಿಕಲ್ಪನೆಗಳನ್ನು ಒಳಗೊಂಡಿರುವ ವಿನ್ಯಾಸಗಳಿಗೆ ಹೆಸರುವಾಸಿ. ಇವರ ಗಮನಾರ್ಹವಾದ ವಿನ್ಯಾಸಗಳಲ್ಲಿ ಐಐಎಂ ಬೆಂಗಳೂರು, ಐಐಎಂ ಉದಯಪುರ, ಹೈದರಾಬಾದ್‌ನ ಇಸಿಐಎಲ್‌ ಟೌನ್‌ಶಿಪ್‌, ದೆಹಲಿಯ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಫ್ಯಾಶನ್‌ ಟೆಕ್ನಾಲಜಿ, ಅಹಮದಾಬಾದ್‌ನ ಪ್ರೇಮಬಾಯ್‌ ಹಾಲ್‌, ಟ್ಯಾಗೋರ್‌ ಮೆಮೋರಿಯಲ್‌ ಹಾಲ್‌ ಮತ್ತು ಅಮ್ಡಾವಾಡ್‌ ನಿ ಗುಫಾ ಕಟ್ಟಡಗಳು ಪ್ರಮುಖ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT