ನವದೆಹಲಿ: ಕರ್ನಾಟಕದ ಉತ್ತರ ಭಾಗ, ತೆಲಂಗಾಣ, ಆಂಧ್ರಪ್ರದೇಶದಲ್ಲಿ ಈ ಬಾರಿ ಬೇಸಿಗೆ ಅವಧಿಯಲ್ಲಿ ಆರಂಭದಿಂದಲೇ ಬಿಸಿಲ ಝಳ ಹೆಚ್ಚಾಗಿರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಶುಕ್ರವಾರ ಹೇಳಿದೆ.
ಮಹಾರಾಷ್ಟ್ರ ಮತ್ತು ಒಡಿಶಾದ ಹಲವು ಭಾಗಗಳಲ್ಲಿ ಕೂಡ ಬಿಸಿಲು ಹೆಚ್ಚಾಗಿರಲಿದೆ. ಈ ಎಲ್ಲ ರಾಜ್ಯಗಳಲ್ಲಿ ವಾಡಿಕೆಗಿಂತ ಹೆಚ್ಚು ದಿನಗಳ ಕಾಲ ಬಿಸಿಗಾಳಿ ಬೀಸಲಿದೆ ಎಂದೂ ಇಲಾಖೆ ಮುನ್ಸೂಚನೆ ನೀಡಿದೆ.
ಬೇಸಿಗೆ ಅವಧಿಯುದ್ದಕ್ಕೂ ಎಲ್ ನಿನೊ ಪರಿಸ್ಥಿತಿ ಮುಂದುವರಿಯುವ ಮುನ್ಸೂಚನೆ ಇದ್ದು, ಇದೇ ಕಾರಣಕ್ಕೆ ತಾಪಮಾನದಲ್ಲಿ ಹೆಚ್ಚಳ ಕಂಡುಬರಲಿದೆ ಇಲಾಖೆ ತಿಳಿಸಿದೆ.
ಪೆಸಿಫಿಕ್ ಸಾಗರದ ಮೇಲ್ಮೈ ಉಷ್ಣಾಂಶದಲ್ಲಿ ಆಗುವ ಹೆಚ್ಚಳವು ಮುಂಗಾರು ಮಾರುತಗಳನ್ನು ದುರ್ಬಲಗೊಳಿಸುತ್ತದೆ. ಈ ಪ್ರಾಕೃತಿಕ ವಿದ್ಯಮಾನವನ್ನು ಎಲ್ ನಿನೊ ಎನ್ನಲಾಗುತ್ತದೆ.
ದೇಶದ ಬಹುತೇಕ ಭಾಗಗಳಲ್ಲಿ ಮಾರ್ಚ್ನಿಂದ ಮೇ ವರೆಗಿನ ಅವಧಿಯ ಗರಿಷ್ಠ ಮತ್ತು ಕನಿಷ್ಠ ತಾಪಮಾನಗಳು ಈ ಬಾರಿ ವಾಡಿಕೆಗಿಂತ ಹೆಚ್ಚಿರಲಿವೆ ಎಂದು ಇಲಾಖೆಯ ಮಹಾ ನಿರ್ದೇಶಕ ಮೃತ್ಯುಂಜಯ ಮಹಾಪಾತ್ರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ದೇಶದ ಉತ್ತರ ಮತ್ತು ಕೇಂದ್ರ ಭಾಗದ ಪ್ರದೇಶಗಳಲ್ಲಿ ಬಿಸಿ ಗಾಳಿಯ ಪರಿಸ್ಥಿತಿ ಕಂಡುಬರುವ ಸಾಧ್ಯತೆ ಇಲ್ಲ ಎಂದೂ ಹೇಳಿದ್ದಾರೆ.