ಬಂಗಾಳಿ ಸಾಹಿತಿ ಬಂಕಿಮಚಂದ್ರ ಚಟರ್ಜಿ ಅವರು ‘ವಂದೇ ಮಾತರಂ’ ಅನ್ನು ಮೊದಲು ಬರೆದಾಗ ಇದ್ದದ್ದು ಎರಡೇ ಪ್ಯಾರಾ. ಹಲವು ವರ್ಷಗಳ ನಂತರ ಅದು ‘ಆನಂದಮಠ’ ಕಾದಂಬರಿಯ ಭಾಗವಾಗಿ ಪ್ರಕಟವಾದಾಗ ಅದರ ಸ್ವರೂಪ ಬದಲಾಗಿತ್ತು; ಮತ್ತಷ್ಟು ಪ್ಯಾರಾಗಳು ಅದಕ್ಕೆ ಸೇರ್ಪಡೆಯಾಗಿದ್ದವು. ತಾಯ್ನೆಲವನ್ನು ದೇವಿ ದುರ್ಗೆಯೊಂದಿಗೆ ಮೂರ್ತೀಕರಿಸಲಾಗಿತ್ತು. ಕಾದಂಬರಿಯ ಸ್ತುತಿಗೀತೆಯು ಸ್ವಾತಂತ್ರ್ಯ ಹೋರಾಟದ ಘೋಷಣೆಯಾಯಿತು; ಹೋರಾಟದ ಹಾಡಾಗಿ ಜನಪ್ರಿಯವಾಯಿತು. ಪಶ್ಚಿಮ ಬಂಗಾಳದ ರಾಜಕಾರಣ ಮತ್ತು ದೇಶದ ರಾಜಕಾರಣ ಬದಲಾದಂತೆ ವಿವಿಧ ಅರ್ಥಗಳನ್ನು, ನಿರ್ದಿಷ್ಟ ಸಾಂಸ್ಕೃತಿಕ ಸ್ವರೂಪವನ್ನು ಪಡೆಯುತ್ತಾ ಸಾಗಿತು. ಚರಿತ್ರೆಯ ವಸ್ತುವೊಂದು ರಾಜಕಾರಣದ ಹುದಲಿನಲ್ಲಿ ಸಿಲುಕಿ ವರ್ತಮಾನದಲ್ಲಿಯೂ ವಿವಾದದ ಜ್ವಾಲೆ ಹೊಮ್ಮಿಸುತ್ತಲೇ ಇದೆ