ದೇಶದ ಬಹುತೇಕ ರಾಜ್ಯಗಳಿಗೆ ಮದ್ಯವು ಆದಾಯದ ಪ್ರಮುಖ ಮೂಲ. ಈ ಕಾರಣಕ್ಕೆ ಆಗಿಂದಾಗ್ಗೆ ಮದ್ಯಕ್ಕೆ ಸಂಬಂಧಿಸಿದ ಶುಲ್ಕ, ತೆರಿಗೆಗಳನ್ನು ಹೆಚ್ಚಿಸುತ್ತಲೇ ಇರುತ್ತವೆ. ಕರ್ನಾಟಕ ಸರ್ಕಾರವು ಈಗ ಅಬಕಾರಿ ಕಾನೂನಿಗೆ ತಿದ್ದುಪಡಿ ಮಾಡಿ, ಕರಡು ನಿಯಮಗಳ ಅಧಿಸೂಚನೆ ಪ್ರಕಟಿಸಿದೆ. ಅದರ ಅನ್ವಯ ಮದ್ಯ ತಯಾರಿಕೆ, ಬಾಟ್ಲಿಂಗ್, ಮಾರಾಟ ಮಳಿಗೆಗಳ ಪರವಾನಗಿ ಸೇರಿ ಎಲ್ಲ ಸ್ವರೂಪದ ಶುಲ್ಕವನ್ನೂ ಶೇ 100ರಷ್ಟು ಹೆಚ್ಚಿಸಲು ಮುಂದಾಗಿದೆ. ಇದರಿಂದ ಮದ್ಯ ತಯಾರಕರು ಮತ್ತು ಮಾರಾಟಗಾರರು ಸಂಕಷ್ಟ ಎದುರಿಸಬೇಕಾಗಿದೆ. ಯಾವುದೇ ರೀತಿಯ ಬೆಲೆ/ಶುಲ್ಕ ಹೆಚ್ಚಳವು ಅಂತಿಮವಾಗಿ ಗ್ರಾಹಕರಿಗೆ ವರ್ಗಾವಣೆಯಾಗುತ್ತದೆ. ಮುಂದಿನ ದಿನಗಳಲ್ಲಿ ಮದ್ಯ ಮತ್ತಷ್ಟು ದುಬಾರಿಯಾಗಲಿದೆ ಎಂದು ಹೇಳಲಾಗುತ್ತಿದೆ.
ಪರವಾನಗಿ ಶುಲ್ಕ ಹೆಚ್ಚಳ ಮಾಡಿದರೆ,ಮದ್ಯದ ಅಂಗಡಿಗಳ ಮಾಲೀಕರಿಗೆ ಹೊರೆ ಹೆಚ್ಚಾಗುತ್ತದೆ. ಕಡಿಮೆ ಮದ್ಯ ಮಾರಾಟವಾಗುವ ಅಂಗಡಿಗಳ ಮಾಲೀಕರಿಗೆ ಅದನ್ನು ನಿಭಾಯಿಸುವಷ್ಟು ಆರ್ಥಿಕ ಸಂಪನ್ಮೂಲ ಇರುವುದಿಲ್ಲ. ಕನಿಷ್ಠ ಶೇ 10ರಿಂದ ಶೇ 15ರಷ್ಟು ಅಂಗಡಿಗಳು ಮುಚ್ಚುವ ಸಾಧ್ಯತೆ ಇದೆ. 2016ರಿಂದ ಶುಲ್ಕ ಹೆಚ್ಚು ಮಾಡಿಲ್ಲ ಎಂದು ಸರ್ಕಾರ ಹೇಳುತ್ತಿದೆ. ಆದರೆ, ಈ ಅವಧಿಯಲ್ಲಿ 3000ಕ್ಕೂ ಹೆಚ್ಚು ಹೊಸ ಮದ್ಯದ ಅಂಗಡಿಗಳು ಸ್ಥಾಪನೆಯಾಗಿವೆ. ಆದರೆ, ಮಾರಾಟದಲ್ಲಿ ಹೆಚ್ಚಳವಾಗಿಲ್ಲ– ಗೋವಿಂದರಾಜ್ ಹೆಗ್ಡೆ, ರಾಜ್ಯ ಮದ್ಯ ಮಾರಾಟಗಾರರ ಒಕ್ಕೂಟದ ಕಾರ್ಯದರ್ಶಿ
ಈಗಾಗಲೇ ನಾವು ಸಂಕಷ್ಟ ಅನುಭವಿಸುತ್ತಿದ್ದೇವೆ. ನಮ್ಮ ಮಾರ್ಜಿನ್ ಹೆಚ್ಚಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಲೇ ಇದ್ದೇವೆ. ಅದರ ಬದಲು ಸರ್ಕಾರ ಪರವಾನಗಿ ಶುಲ್ಕವನ್ನು ಶೇ 100ರಷ್ಟು ಹೆಚ್ಚಿಸಿ ನಮ್ಮನ್ನು ಇನ್ನಷ್ಟು ಕಷ್ಟಕ್ಕೆ ತಳ್ಳಿದೆ. ಶೇ 5–10ರಷ್ಟು ಹೆಚ್ಚಿಸಿದ್ದರೆ ಸುಮ್ಮನಿರಬಹುದಿತ್ತು. ಈಗಿನದ್ದಕ್ಕಿಂತ ಎರಡು ಪಟ್ಟು ಜಾಸ್ತಿ ಮಾಡಿದರೆ ಅದನ್ನು ಪಾವತಿಸುವುದು ಹೇಗೆ? ವ್ಯಾಪಾರ ನಡೆಸಲು ಸಾಧ್ಯವೇ ಇಲ್ಲ. ಸರ್ಕಾರ ಹಾಲು ನೀಡುವ ಕೆಚ್ಚಲನ್ನೇ ಕತ್ತರಿಸಲು ಹೊರಟಿದೆ. ಅದು ತನ್ನ ನಿರ್ಧಾರವನ್ನು ಮರುಪರಿಶೀಲಿಸಬೇಕು– ಲೋಕೇಶ್, ಬೆಂಗಳೂರು ನಗರ ಜಿಲ್ಲಾ ಮದ್ಯ ವ್ಯಾಪಾರಿಗಳ ಸಂಘದ ಅಧ್ಯಕ್ಷ
ಆಧಾರ: ಪಿಟಿಐ, ಅಬಕಾರಿ ಇಲಾಖೆ ವೆಬ್ಸೈಟ್, ಮಾಧ್ಯಮ ವರದಿಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.