ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ | ನವೋದ್ಯಮ, ಕರ್ನಾಟಕದ ಸಾಧನೆ ಅತ್ಯುತ್ತಮ

Last Updated 4 ಜುಲೈ 2022, 19:30 IST
ಅಕ್ಷರ ಗಾತ್ರ

ನವೋದ್ಯಮ ಕ್ಷೇತ್ರದಲ್ಲಿ ಕರ್ನಾಟಕದ ಸಾಧನೆ ಅತ್ಯುತ್ತಮವಾಗಿದೆ. ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆಯು (ಡಿಪಿಐಐಟಿ) ವಿವಿಧ ರಾಜ್ಯಗಳಲ್ಲಿ ನವೋದ್ಯಮಕ್ಕೆ ಇರುವ ಪ್ರೋತ್ಸಾಹ, ಪೂರಕ ವಾತಾವರಣ ಮತ್ತು ಇತರ ಅಂಶಗಳನ್ನು ಮೌಲ್ಯಮಾಪನಕ್ಕೆ ಒಳಪಡಿಸಿ ಶ್ರೇಣಿ ನೀಡಿದೆ. ಅತ್ಯುತ್ತಮ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಮತ್ತು ಗುಜರಾತ್ ಸ್ಥಾನ ಪಡೆದಿವೆ. ಸಣ್ಣ ರಾಜ್ಯಗಳ ಪೈಕಿ ಮೇಘಾಲಯ ಅತ್ಯುತ್ತಮ ರಾಜ್ಯ ಎನಿಸಿಕೊಂಡಿದೆ. ಜೊತೆಗೆ, ರಾಜ್ಯಗಳು ಅನುಸರಿಸಿರುವ ಅತ್ಯುತ್ತಮ ಪದ್ಧತಿಗಳ ಬಗೆಗಿನ ವರದಿಯೊಂದನ್ನು ಕೂಡ ಡಿಪಿಐಐಟಿ ಸಿದ್ಧಪಡಿಸಿದೆ. ಈ ವರದಿಯಲ್ಲಿಯೂ ಕರ್ನಾಟಕದ ಸಾಧನೆಗೆ ಶ್ಲಾಘನೆ ವ್ಯಕ್ತವಾಗಿದೆ. ಸಂಶೋಧನೆ ಮತ್ತು ಅಭಿವೃದ್ಧಿ, ಬ್ಯಾಟರಿ ಚಾಲಿತ ವಾಹನ ಕ್ಷೇತ್ರಕ್ಕೆ ನೀಡಿದ ಒತ್ತು, ನಾವೀನ್ಯತೆಗೆ ಉತ್ತೇಜನವನ್ನು ಉಲ್ಲೇಖಿಸಲಾಗಿದೆ. ರಾಜ್ಯವು ಎಂಜಿನಿಯರಿಂಗ್‌ ಸಂಶೋಧನೆ ಮತ್ತು ಅಭಿವೃದ್ಧಿ ನೀತಿ 2021 ಅನ್ನು ಜಾರಿಗೆ ತಂದದ್ದನ್ನೂ ಪ್ರಸ್ತಾಪಿಸಲಾಗಿದೆ.

ಮೌಲ್ಯಮಾಪನದ ಸಂದರ್ಭದಲ್ಲಿ ಏಳು ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ. ಸಾಂಸ್ಥಿಕ ಬೆಂಬಲ, ನಾವೀನ್ಯತೆಗೆ ಉತ್ತೇಜನ, ಮಾರುಕಟ್ಟೆ ಲಭ್ಯತೆ, ಸರ್ಕಾರದಿಂದ ದೊರೆತ ಪೋಷಣೆ, ಹಣಕಾಸು ಬೆಂಬಲ, ಸಾಮರ್ಥ್ಯವೃದ್ಧಿ ಅವಕಾಶಗಳು ಮತ್ತು ಮಾರ್ಗದರ್ಶನ ಬೆಂಬಲ ಎಂಬ ಅಂಶಗಳನ್ನು ಮೌಲ್ಯಮಾಪನಕ್ಕೆ ಒಳಪಡಿಸಲಾಗಿದೆ. ಇವುಗಳ ಅಡಿಯಲ್ಲಿ 26 ವಿಷಯಗಳನ್ನು ವಿಶ್ಲೇಷಣೆಗೆ ಒಳಪಡಿಸಲಾಗಿದೆ.

ನವೋದ್ಯಮಗಳಿಗೆ ಸುಲಲಿತ ವ್ಯಾಪಾರದ ಅವಕಾಶವನ್ನು ತೆರೆಯುವುದು, ನವೋದ್ಯಮಕ್ಕೆ ಉತ್ತೇಜನ ಕೊಡುವುದು ಮತ್ತು ರಾಜ್ಯಗಳಲ್ಲಿ ಅನುಸರಿಸುತ್ತಿರುವ ಅತ್ಯುತ್ತಮ ಪದ್ಧತಿಗಳು ಪರಸ್ಪರರಿಗೆ ತಿಳಿಯುವಂತೆ ಮಾಡುವುದು ಶ್ರೇಣೀಕರಣದ ಉದ್ದೇಶವಾಗಿದೆ.

ಭಾರತಕ್ಕೆ 3ನೇ ಸ್ಥಾನ

ಜಗತ್ತಿನ ವಿವಿಧ ದೇಶಗಳು ಇತ್ತೀಚಿನ ವರ್ಷಗಳಲ್ಲಿ ನವೋದ್ಯಮಗಳಿಗೆ ವಿಶೇಷ ಪ್ರೋತ್ಸಾಹ ನೀಡಲು ಆರಂಭಿಸಿವೆ. ಭಾರತವೂ ಈ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ಅತಿ ಹೆಚ್ಚು ನವೋದ್ಯಮ ಹೊಂದಿರುವ ದೇಶಗಳ ಪೈಕಿ ಭಾರತಕ್ಕೆ ಮೂರನೇ ಸ್ಥಾನವಿದೆ ಎಂದು ಡಿಪಿಐಐಟಿ ವರದಿಯು ಹೇಳಿದೆ. ಈ ಕ್ಷೇತ್ರದಲ್ಲಿ ಮೊದಲ ಸ್ಥಾನಕ್ಕೆ ಏರಬೇಕು ಎಂಬ ಆಕಾಂಕ್ಷೆಯನ್ನು ವರದಿಯಲ್ಲಿ ವ್ಯಕ್ತಪಡಿಸಲಾಗಿದೆ. ನವೋದ್ಯಮಗಳ ಸಂಖ್ಯೆಯಲ್ಲಿ ಆಗುತ್ತಿರುವ ಹೆಚ್ಚಳ ಮತ್ತು ಈ ಕ್ಷೇತ್ರಕ್ಕೆ ಪೂರಕವಾದ ವಾತಾವರಣ ಸೃಷ್ಟಿಯು ಇಡೀ ದೇಶಕ್ಕೆ ಹೊಸ ದಿಕ್ಕನ್ನೇ ತೋರುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಸ್ಟಾರ್ಟ್‌ಅಪ್‌ ಇಂಡಿಯಾ ಎಂಬ ಕಾರ್ಯಕ್ರಮದ ಮೂಲಕ ಕೇಂದ್ರ ಸರ್ಕಾರವು ನವೋದ್ಯಮಗಳಿಗೆ ಉತ್ತೇಜನ ನೀಡುತ್ತಿದೆ. ಶ್ರೇಣೀಕರಣ ವ್ಯವಸ್ಥೆಯು ಜಾರಿಗೆ ಬಂದ ನಂತರ ಹಲವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ನವೋದ್ಯಮ ನೀತಿಯನ್ನು ಬಲಪಡಿಸಿವೆ ಮತ್ತು ನವೋದ್ಯಮಗಳಿಗಾಗಿ ವಿವಿಧ ಬೆಂಬಲ ವ್ಯವಸ್ಥೆ ಜಾರಿಗೊಳಿಸಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಗುಜರಾತ್

ನವೋದ್ಯಮಗಳ ತರಬೇತಿ ಮತ್ತು ನವೋದ್ಯಮಗಳ ಸ್ಥಾಪನೆಗೆ ಆರ್ಥಿಕ ನೆರವು ನೀಡುವಲ್ಲಿ ಗುಜರಾತ್ ಸರ್ಕಾರ ರೂಪಿಸಿರುವ ಕಾರ್ಯಕ್ರಮಗಳು ಯಶಸ್ವಿಯಾಗಿವೆ. ಈ ಕಾರಣದಿಂದಲೇ ಬೇರೆಲ್ಲಾ ರಾಜ್ಯಗಳಿಗಿಂತ ಗುಜರಾತ್‌ನಲ್ಲಿ ನವೋದ್ಯಮಗಳ ಸ್ಥಾಪನೆಗೆ ಅತ್ಯುತ್ತಮ ವಾತಾವರಣ ಇದೆ ಎಂದು ವರದಿಯಲ್ಲಿ ವಿಶ್ಲೇಷಿಸಲಾಗಿದೆ.

ನವೋದ್ಯಮಗಳ ಅಗತ್ಯಗಳು, ಅವುಗಳ ಬೆಳವಣಿಗೆಗೆ ಪೂರಕವಾಗುವಂತೆ ಸರ್ಕಾರವು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಅಧಿಕಾರಿಗಳಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಸರ್ಕಾರವು ರಾಜ್ಯದಲ್ಲಿ ಹಲವಾರು ತರಬೇತಿ ಶಿಬಿರಗಳನ್ನು ನಡೆಸಿದೆ. 2021ರಲ್ಲಿ ಇಂತಹ ಒಟ್ಟು ಐದು ಶಿಬಿರಗಳನ್ನು ನಡೆಸಲಾಗಿದೆ. ಪ್ರತಿ ಶಿಬಿರದಲ್ಲಿ 15 ಇಲಾಖೆಗಳ ಒಟ್ಟು 30 ಅಧಿಕಾರಿಗಳು ಭಾಗಿಯಾಗಿದ್ದಾರೆ. ಹೀಗೆ ರಾಜ್ಯದ ಎಲ್ಲಾ ಇಲಾಖೆಗಳ ಒಟ್ಟು 150 ಅಧಿಕಾರಿಗಳನ್ನು ನವೋದ್ಯಮಗಳ ಬೆಳವಣಿಗೆಗೆ ಪೂರಕವಾದ ವಾತಾವರಣ ನಿರ್ಮಿಸಲು ಸಜ್ಜುಗೊಳಿಸಲಾಗಿದೆ.

ದೊಡ್ಡ ಉದ್ಯಮಗಳು ನವೋದ್ಯಮಗಳಲ್ಲಿ ಹೂಡಿಕೆ ಮಾಡಲು ಸರ್ಕಾರವು ಒಂದು ಸೇತುವೆಯಂತೆ ಕೆಲಸ ಮಾಡಿದೆ. ರಾಜ್ಯದಲ್ಲಿನ ನವೋದ್ಯಮ ಕ್ಷೇತ್ರದ ಸ್ಥಿತಿಗತಿಯ ಬಗ್ಗೆ ದೇಶೀ ಉದ್ಯಮಗಳು, ಬಹುರಾಷ್ಟ್ರೀಯ ಕಂಪನಿಗಳಿಗೆ ಮನವರಿಕೆ ಮಾಡಿಕೊಡುವ ಸಲುವಾಗಿ ಸಮ್ಮೇಳನಗಳನ್ನು ನಡೆಸಲಾಗಿದೆ. ಒಟ್ಟು 300 ಕಂಪನಿಗಳು/ಹೂಡಿಕೆದಾರರು ಈ ಸಮ್ಮೇಳನಗಳಲ್ಲಿ ಭಾಗಿಯಾಗಿದ್ದಾರೆ. ನವೋದ್ಯಮಗಳು ಯಾವುವು, ಅವುಗಳಿಗೆ ಬಂಡವಾಳದ ಅವಶ್ಯಕತೆ ಏಕಿದೆ, ಅವುಗಳಲ್ಲಿ ಏಕೆ ಬಂಡವಾಳ ಹೂಡಬೇಕು ಮತ್ತು ಬಂಡವಾಳ ಹೂಡಿಕೆಯ ಸ್ವರೂಪದ ಬಗ್ಗೆ ಅವರಿಗೆ ಮನವರಿಕೆ ಮಾಡಿಕೊಡಲಾಗಿದೆ.

ನವೋದ್ಯಮಗಳಿಗೆ ಆರ್ಥಿಕ ನೆರವು ನೀಡಲು ಗುಜರಾತ್ ರಾಜ್ಯ ಸರ್ಕಾರವು ಎರಡು ನಿಧಿಗಳನ್ನು ಸ್ಥಾಪಿಸಿದೆ. ಜೀವವಿಜ್ಞಾನ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಅನ್ವೇಷಣೆಯಲ್ಲಿ ತೊಡಗಿರುವ ನವೋದ್ಯಮಗಳಿಗೆ ಆರ್ಥಿಕ ನೆರವು ನೀಡಲು ಪ್ರತ್ಯೇಕ ನಿಧಿ ಸ್ಥಾಪಿಸಲಾಗಿದೆ. ಗುಜರಾತ್‌ ರಾಜ್ಯ ಜೀವ ವಿಜ್ಞಾನ ಮಿಷನ್‌ ಅಡಿ ಈ ನಿಧಿಗೆ 2021ರಲ್ಲಿ ₹11.31 ಕೋಟಿ ಅನುದಾನ ನೀಡಲಾಗಿದೆ. ಇದೇ ರೀತಿ ವಿದ್ಯಾರ್ಥಿಗಳ ಅನ್ವೇಷಣೆಗೆ ನವೋದ್ಯಮಗಳ ರೂಪ ನೀಡಲು, ‘ಸ್ಟೂಡೆಂಟ್ಸ್‌ ಇನೋವೇಷನ್ಸ್ ಫಂಡ್‌’ ಅನ್ನು ಸ್ಥಾಪಿಸಲಾಗಿದೆ. ಗುಜರಾತ್ ಜ್ಞಾನ ಸೊಸೈಟಿಯ ಅಡಿಯಲ್ಲಿ ಈ ನಿಧಿಗೆ 2021ರಲ್ಲಿ ₹17 ಕೋಟಿ ಅನುದಾನ ಒದಗಿಸಲಾಗಿದೆ. ಈ ಎರಡೂ ನಿಧಿಗಳ ಅಡಿಯಲ್ಲಿ ಒಟ್ಟು 160 ನವೋದ್ಯಮಗಳಿಗೆ ತಲಾ ₹3 ಲಕ್ಷದ ಆರ್ಥಿಕ ನೆರವು ನೀಡಲಾಗಿದೆ.

ಕರ್ನಾಟಕ

ಕರ್ನಾಟಕವು ನವೋದ್ಯಮಗಳ ಬೆಳವಣಿಗೆಗೆ ‍ಪೂರಕವಾದ ವಾತಾವರಣವನ್ನು ನಿರ್ಮಿಸಿದೆ. ಇದಕ್ಕಾಗಿ ನೀತಿ ರೂಪಣೆ ಮತ್ತು ಯೋಜನೆಗಳ ಮಟ್ಟದಲ್ಲಿ ಕ್ರಮ ತೆಗೆದುಕೊಂಡಿದೆ. ಎಂಜಿನಿಯರಿಂಗ್ ಸಂಶೋಧನೆ ಮತ್ತು ಅಭಿವೃದ್ಧಿಗೆ ಆದ್ಯತೆ ನೀಡಿದ ಕಾರಣ ನವೋದ್ಯಮಗಳ ಸ್ಥಾಪನೆ ಮತ್ತು ಬೆಳವಣಿಗೆಗೆ ಅಗತ್ಯವಾದ ವಾತಾವರಣ ಸೃಷ್ಟಿಯಾಗಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

2021ರಲ್ಲಿ ಕರ್ನಾಟಕ ಸರ್ಕಾರವು ‘ಎಂಜಿನಿಯರಿಂಗ್ ಸಂಶೋಧನೆ ಮತ್ತು ಅಭಿವೃದ್ಧಿ ನೀತಿ–2021’ನ್ನು ರೂಪಿಸಿದೆ. ಈ ನೀತಿಯ ಅಡಿ ರಾಜ್ಯದ ಹಲವೆಡೆ ಪ್ರಯೋಗಾಲಯಗಳು ಮತ್ತು ಪರೀಕ್ಷಾ ಕೇಂದ್ರಗಳನ್ನು ಆರಂಭಿಸಲಾಗಿದೆ. ಎಂಜಿನಿಯರಿಂಗ್, ವಿದ್ಯುತ್ ಚಾಲಿತ ವಾಹನ ಆಧಾರಿತ ಸಾರಿಗೆಗೆ ಸಂಬಂಧಿಸಿದಂತೆ ನವೋದ್ಯಮಗಳ ಅನ್ವೇಷಣೆಗಳನ್ನು ಪರೀಕ್ಷೆಗೆ ಒಳಪಡಿಸಲು ಈ ಕೇಂದ್ರಗಳು ನೆರವಾಗುತ್ತವೆ.

ಬೆಂಗಳೂರಿನಲ್ಲಿ ಎಲ್ಲರಿಗೂ, ಎಲ್ಲಾ ಸಮಯದಲ್ಲೂ ಲಭ್ಯವಾಗುವಂತೆ ಇ–ಬೈಕ್‌ ಟ್ಯಾಕ್ಸಿ ಸೇವೆ ನೀತಿಯನ್ನು ಜಾರಿಗೆ ತರಲಾಗಿದೆ. ಇದರಿಂದ ಹಲವು ನವೋದ್ಯಮಗಳು ಇ–ಬೈಕ್‌ ಟ್ಯಾಕ್ಸಿ ಸೇವೆಯನ್ನು ನೀಡಲು ಮುಂದೆ ಬಂದಿವೆ. ಜತೆಗೆ ಈ ನವೋದ್ಯಮಗಳಿಗೆ ಅಗತ್ಯವಾದ ಸರಕು ಮತ್ತು ಸೇವೆಗಳನ್ನು ಒದಗಿಸುವ ಪೂರಕ ನವೋದ್ಯಮಗಳ ಸ್ಥಾಪನೆಗೂ ಅವಕಾಶ ದೊರೆತಿದೆ.

ನವೋದ್ಯಮಗಳ ಉತ್ತೇಜನಕ್ಕೆ ಉದ್ಯಮಶೀಲತೆ ಅಭಿವೃದ್ಧಿ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಈ ಕಾರ್ಯಕ್ರಮದ ಅಡಿ ರಾಜ್ಯದ 14 ಜಿಲ್ಲೆಗಳಲ್ಲಿ ವಿದ್ಯಾರ್ಥಿಗಳಿಗಾಗಿ ‘ಇ–ಸ್ಟೆಪ್‌’ ಎಂಬ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ ಸ್ವರೂಪದ 20 ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. 8,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗಿದೆ.

ಗ್ರಾಮೀಣ ಪ್ರದೇಶಕ್ಕೆ ಸಂಬಂಧಿಸಿದ ಮತ್ತು ಗ್ರಾಮೀಣ ಪ್ರದೇಶದ್ದೇ ಆದ ನವೋದ್ಯಮಗಳ ಅಭಿವೃದ್ಧಿಗೂ ಆದ್ಯತೆ ನೀಡಲಾಗಿದೆ. ಈ ಕಾರ್ಯಕ್ರಮದ ಅಡಿ ರಾಜ್ಯದ ಗ್ರಾಮೀಣ ಪ್ರದೇಶದ ಹಲವೆಡೆ ತರಬೇತಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ. 100 ನವೋದ್ಯಮಗಳಿಗೆ ತರಬೇತಿ, ಸಂಶೋಧನೆ ಮತ್ತು ಕಾರ್ಯನಿರ್ವಹಣೆಯಲ್ಲಿ ವಿವಿಧ ರೀತಿಯ ನೆರವು ನೀಡಲಾಗಿದೆ. ಕೃಷಿ ಉತ್ಪನ್ನಗಳನ್ನು ದೀರ್ಘಕಾಲದವರೆಗೆ ಕೆಡದಂತೆ ಇಡಲು ಅನುವು ಮಾಡಿಕೊಡುವ ಸೌರಶಕ್ತಿ ಚಾಲಿತ ರೆಫ್ರಿಜರೇಟರ್‌, ವಿದ್ಯುತ್ ಇಲ್ಲದೆಯೇ ಕೆಲಸ ಮಾಡುವ ನೀರು ಶುದ್ಧೀಕರಣ ಘಟಕಗಳನ್ನು ತಯಾರಿಸುವಂತಹ ನವೋದ್ಯಮಗಳಿಗೆ ಬೆಂಬಲ ನೀಡಲಾಗಿದೆ. ಈ ಮೂಲಕ ರಾಜ್ಯದ ಗ್ರಾಮೀಣ ಪ್ರದೇಶದ ಜನರ ಜೀವನಮಟ್ಟ ಸುಧಾರಿಸಲು, ನವೋದ್ಯಮಕ್ಕೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಒತ್ತು ನೀಡಲಾಗಿದೆ.

ಮೇಘಾಲಯ

ನವೋದ್ಯಮ ರ‍್ಯಾಂಕಿಂಗ್‌ನ ‘ಅತ್ಯುತ್ತಮ ರಾಜ್ಯ’ ವರ್ಗದಲ್ಲಿ ಮೇಘಾಲಯವು ಸ್ಥಾನ ಪಡೆದಿದೆ.ಮೇಘಾಲಯವು, ಈ ವರ್ಗದಲ್ಲಿ ಸ್ಥಾನ ಪಡೆದ ಈಶಾನ್ಯ ಭಾರತದ ಏಕೈಕ ರಾಜ್ಯ ಎನಿಸಿದೆ.

ಮೇಘಾಲಯದಲ್ಲಿ ನವೋದ್ಯಮಗಳ ಬೆಳವಣಿಗೆಗೆ ಪೂರಕವಾದ ವಾತಾವರಣವನ್ನು ರೂಪಿಸುವ ಸಲುವಾಗಿ ರಾಜ್ಯ ಸರ್ಕಾರವು ನೀತಿಯೊಂದನ್ನು ರೂಪಿಸಿದೆ. 2023ರ ವೇಳೆಗೆ ಮೇಘಾಲಯವನ್ನು ದೇಶದ ನವೋದ್ಯಮಗಳ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವ ಗುರಿಯನ್ನು, ‘ಮೇಘಾಲಯ ನವೋದ್ಯಮ ನೀತಿ’ಯ ಅಡಿ ಹಾಕಿಕೊಳ್ಳಲಾಗಿದೆ. ಇದಕ್ಕಾಗಿ ₹15 ಕೋಟಿಯ ಅನುದಾನವನ್ನು ರಾಜ್ಯ ಸರ್ಕಾರವು ತೆಗೆದಿರಿಸಿದೆ.ನವೋದ್ಯಮಗಳ ಆರಂಭಕ್ಕೆ ಆರ್ಥಿಕ ನೆರವು ನೀಡಲು ಮೇಘಾಲಯ ಸರ್ಕಾರವು ‘ಪ್ರೈಮ್‌’ ಎಂಬ ಯೋಜನೆಯನ್ನು ರೂಪಿಸಿದೆ.

ಪ್ರೈಮ್‌ ಯೋಜನೆ ಅಡಿ ಎರಡು ಪ್ರತ್ಯೇಕ ನಿಧಿಗಳನ್ನು ರಚಿಸಲಾಗಿದೆ. ನವೋದ್ಯಮಗಳ ಸ್ಥಾಪನೆಗೆ ಆರಂಭಿಕ ಬಂಡವಾಳವಾಗಿ ತಲಾ ₹5 ಲಕ್ಷ ಆರ್ಥಿಕ ನೆರವು ನೀಡಲು ಒಂದು ನಿಧಿ ಸ್ಥಾಪಿಸಲಾಗಿದೆ. ಈ ನಿಧಿಯ ಅಡಿ 2021ರಲ್ಲಿ ₹70 ಲಕ್ಷ ಅನುದಾನವನ್ನು ಬಿಡುಗಡೆ ಮಾಡಿದ್ದು, 10ಕ್ಕೂ ಹೆಚ್ಚು ನವೋದ್ಯಮಗಳು ಇದರ ಅನುಕೂಲ ಪಡೆದಿವೆ. ಇದೇ ರೀತಿ, ನವೋದ್ಯಮಗಳಿಗೆ ಪೂರಕ ಆರ್ಥಿಕ ನೆರವು ನೀಡುವ ಸಲುವಾಗಿ ಬಡ್ಡಿರಹಿತ ಸಾಲ ನಿಧಿಯನ್ನು ಸ್ಥಾಪಿಸಲಾಗಿದೆ. ನವೋದ್ಯಮಗಳು ತಮ್ಮ ವಹಿವಾಟುಗಳನ್ನು ವಿಸ್ತರಿಸಲು ಅಗತ್ಯವಿರುವ ಆರ್ಥಿಕ ನೆರವನ್ನು ಈ ನಿಧಿಯಿಂದ ನೀಡಲಾಗುತ್ತದೆ. ಒಂದು ನವೋದ್ಯಮಕ್ಕೆ ಗರಿಷ್ಠ ₹25 ಲಕ್ಷ ಬಡ್ಡಿರಹಿತ ಸಾಲವನ್ನು ನೀಡಲಾಗುತ್ತದೆ. ಈ ಕಾರ್ಯಕ್ರಮಗಳ ಮೂಲಕ 100 ನವೋದ್ಯಮಗಳಿಗೆ ನೆರವು ನೀಡುವ ಗುರಿ ಹಾಕಿಕೊಳ್ಳಲಾಗಿದೆ.

ಮಹಿಳೆಯರ ಮುಂದಾಳತ್ವದ ನವೋದ್ಯಮಗಳಿಗೂ ಒತ್ತು ನೀಡಲಾಗಿದೆ. 10 ಮಹಿಳಾ ನವೋದ್ಯಮಗಳಿಗೆ ₹5 ಲಕ್ಷದ ಆರಂಭಿಕ ಬಂಡವಾಳ ಮತ್ತು ₹25 ಲಕ್ಷ ಬಡ್ಡಿರಹಿತ ಸಾಲವನ್ನು ಒದಗಿಸಲಾಗಿದೆ.ನವೋದ್ಯಮಗಳ ಸ್ಥಾಪನೆಗೆ ಅಗತ್ಯವಾದ ಮಾನವ ಸಂಪನ್ಮೂಲವನ್ನು ಅಭಿವೃದ್ಧಿಪಡಿಸುವ ಸಲುವಾಗಿ ರಾಜ್ಯದಾದ್ಯಂತ ತರಬೇತಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ. 45ಕ್ಕೂ ಹೆಚ್ಚು ಕಂಪನಿಗಳು ಇಂತಹ ತರಬೇತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ಸಂಸ್ಥೆಗಳಾಗಿ ಭಾಗಿಯಾಗಿವೆ.

***

ಆಧಾರ: ರಾಜ್ಯಗಳ ನವೋದ್ಯಮ ರ‍್ಯಾಂಕಿಂಗ್‌–2021, ನವೋದ್ಯಮ: ಅತ್ಯುತ್ತಮ ಪದ್ಧತಿಗಳ ಕುರಿತ ವರದಿ–2021, ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆ, ಪಿಟಿಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT