ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಮೀನು ಖಾದ್ಯ, ಆರೋಗ್ಯ ಭಾಗ್ಯ

Last Updated 21 ನವೆಂಬರ್ 2020, 10:38 IST
ಅಕ್ಷರ ಗಾತ್ರ
ADVERTISEMENT
""
""

ಅಪೌಷ್ಟಿಕತೆಯಿಂದ ಬಳಲುತ್ತಿರುವವರಿಗೆ, ಅನಾರೋಗ್ಯ ಉಂಟಾದರೆ, ಗರ್ಭಿಣಿ, ಬಾಣಂತಿಯರಿಗೆ, ಹೃದ್ರೋಗಿಗಳಿಗೆ ವೈದ್ಯರು ಮೀನು ತಿನ್ನಲು ಸಲಹೆ ನೀಡುತ್ತಾರೆ. ಸಂತುಲಿತ, ಸಮತೋಲಿತ ಆಹಾರಗಳಲ್ಲಿ ಮೀನು ಅಗ್ರಗಣ್ಯ.

***

‘ಮೀನು ತಿನ್ನು ಬುದ್ಧಿ ಚುರುಕಾಗುತ್ತೆ’ ಎಂದು ಮಂದ ಬುದ್ಧಿಯವರಿಗೆ ಹೇಳುವುದುಂಟು. ಮೀನು ತಿನ್ನುವುದರಿಂದ ಬುದ್ಧಿ ಚುರುಕಾಗುತ್ತೊ ಬಿಡುತ್ತೊ ಗೊತ್ತಿಲ್ಲ; ಆದರೆ, ಆರೋಗ್ಯ ವರ್ಧನೆಯಂತೂ ಖಂಡಿತ ಆಗುತ್ತದೆ. ಅಪೌಷ್ಟಿಕತೆಯಿಂದ ಬಳಲುತ್ತಿರುವವರಿಗೆ, ಅನಾರೋಗ್ಯ ಉಂಟಾದರೆ, ಗರ್ಭಿಣಿ, ಬಾಣಂತಿಯರಿಗೆ,ಹೃದ್ರೋಗಿಗಳಿಗೆ ವೈದ್ಯರು ಮೀನು ತಿನ್ನಲು ಸಲಹೆ ನೀಡುತ್ತಾರೆ.

ಸಂತುಲಿತ, ಸಮತೋಲಿತ ಆಹಾರಗಳಲ್ಲಿ ಮೀನು ಅಗ್ರಗಣ್ಯ. ಮೂಳೆ ಸವಕಲು ಉಂಟಾದವರಿಗೆ ವಾರದಲ್ಲಿ ಎರಡು ಮೂರು ಬಾರಿ ಮೀನಿನ ಖಾದ್ಯ ಸವಿಯಲು ಸಲಹೆ ನೀಡುತ್ತಾರೆ ವೈದ್ಯರು. ಮೀನೆಣ್ಣೆ ಹಚ್ಚಿದರೆ ವಿಟಮಿನ್ ಹೆಚ್ಚಾಗುತ್ತದೆ ಎಂಬ ನಂಬಿಕೆಯೂ ಇದೆ. ಅದಕ್ಕಾಗಿ ಕಾಡ್‌ಲಿವರ್ ಆಯಿಲ್ ಬಳಕೆಯಲ್ಲಿದೆ.

ಕರಾವಳಿ ಭಾಗದಲ್ಲಿ ಸಿಗುವ ಸಮುದ್ರ ಮೀನುಗಳಿಗೆ ನಾಡಿನಾದ್ಯಂತ ಬೇಡಿಕೆ ಹೆಚ್ಚು. ಸ್ಥಳೀಯವಾಗಿ ಕೆರೆಮೀನುಗಳು ಲಭಿಸಿದರೂ, ಸಮುದ್ರದ (ಉಪ್ಪು ನೀರು) ನೀರು ಕುಡಿದ ಮೀನುಗಳೇ ಬಹುತೇಕರ ಜಿಹ್ವೆಗೆ ಅಚ್ಚುಮೆಚ್ಚು. ವಾರಕ್ಕೆ ಎರಡು ಅಥವಾ ಮೂರು ಬಾರಿ ಮೀನಿನ ಖಾದ್ಯ ಉದರಕ್ಕೆ ಇಳಿದರೆ ಅದೇನೋ ತೃಪ್ತಿ.

ಮೀನು ಫ್ರೈ

ಕರಾವಳಿ ಭಾಗದಲ್ಲಿ ಮೀನಿನ ಬಳಕೆ ಹೆಚ್ಚು. ಅಲ್ಲಿನ ಬಹುತೇಕರು ದಿನದ ಮೂರು ಹೊತ್ತೂ ಮೀನೂಟ ಸವಿಯುವುದುಂಟು. ಇನ್ನು ಕೆಲವರು ದಿನಕ್ಕೆ ಒಂದು ಬಾರಿಯಾದರೂ ಮೀನೂಟ ಸವಿಯದಿದ್ದರೆ ಆ ದಿನ ಪೂರ್ತಿಯಾಗುವುದಿಲ್ಲ. ಅಷ್ಟರಮಟ್ಟಿಗೆ ಕರಾವಳಿಗರ ಮನೆ, ಮನದಾಳದಲ್ಲಿ ಮೀನು ಮನೆಮಾಡಿದೆ. ರಾಜ್ಯದ ಇತರೆಡೆಯಿಂದ ಕರಾವಳಿ ಭಾಗಕ್ಕೆ ಹೋದರೆ ಮತ್ಸ್ಯ ಪ್ರಿಯರು ಮೀನೂಟ ಸವಿಯದೆ ಹಿಂದಿರುಗುವುದಿಲ್ಲ.

ಒಂದೊಂದು ಬಗೆಯ ಮೀನೂ ವೈವಿಧ್ಯದ ರುಚಿ ನೀಡುವುದೇ ವಿಶೇಷ. ಬಂಗುಡೆ, ಭೂತಾಯಿ, ಬಿಳಿಮಾಂಜಿ, ಕಪ್ಪುಮಾಂಜಿ, ಕಾಣೆ ಮೀನು, ಅಂಜಲ್‌, ಬೊಳಿಂಜಿರ್‌, ಮದ್ಮಲ್‌ ಮೀನು, ಕೊಡ್ಡಾಯಿ, ಮುರ್‌ಮಿನ್‌, ಬಟರ್‌ ಫಿಶ್‌, ಎಟ್ಟಿ, ಪಂಪ್ರೆಟ್, ಪ್ರೌನ್ಸ್‌, ಕ್ರ್ಯಾಬ್‌, ಬೊಂಡಾಸ್‌ ಹೀಗೆ ತರಹೇವಾರಿ ಮೀನುಗಳು ಮತ್ಸ್ಯ ಪ್ರಿಯರ ಉದರ ತಣಿಸುತ್ತವೆ.

ಮೀನುಗಳಲ್ಲಿ ತವಾ ಫ್ರೈ, ರವಾ ಫ್ರೈ, ಡೀಪ್‌ ಫ್ರೈ, ಘೀ ರೋಸ್ಟ್‌, ಕರಿ, ಪುಳಿಮುಂಚಿ, ಮೀನ್ಸಾರು ಹೀಗೆ ವೈವಿಧ್ಯದ ಖಾದ್ಯಗಳು ತಯಾರಾಗುತ್ತವೆ. ಪುಳಿಮುಂಚಿ, ತವಾ ಫ್ರೈ ಬಹುತೇಕರು ಇಷ್ಟ ಪಟ್ಟು ತಿನ್ನುವರು.

ಮೀನಿನ ದೇಹದಲ್ಲಿ ಮುಳ್ಳುಗಳು ಹೆಚ್ಚು. ಹಾಗಾಗಿ, ಅದರ ಖಾದ್ಯ ಸವಿಯಲು ಅಷ್ಟೇ ನಾಜೂಕುತನ ಬೇಡುತ್ತದೆ. ಸ್ವಲ್ಪ ಎಚ್ಚರ ತಪ್ಪಿದರೂ ಮುಳ್ಳು ಗಂಟಲಿಗೆ ಸಿಲುಕಿ ತೊಂದರೆ ಉಂಟಾಗುವ ಅಪಾಯ ಹೆಚ್ಚು. ಅಂಜಲ್‌ ಹಾಗೂ ಪ್ರೌನ್ಸ್‌ ಮೀನುಗಳಲ್ಲಿ ಮುಳ್ಳುಗಳು ಕಡಿಮೆ. ಹಾಗಾಗಿ, ಬಹುತೇಕರು ಈ ಮೀನುಗಳನ್ನು ಸವಿಯುತ್ತಾರೆ. ಒಂದೊಂದು ಜಾತಿ ಮೀನೂ ಭಿನ್ನ ರುಚಿ ಕೊಡುವ ಕಾರಣ ರುಚಿಗೆ ತಕ್ಕಂತೆ ಆಯ್ಕೆಯೂ ಭಿನ್ನವಾಗಿರುತ್ತದೆ. ಮುರ್‌ಮೀನ್‌, ಬಟರ್‌ಫಿಶ್‌ ಹೆಚ್ಚು ರುಚಿ ನೀಡುತ್ತವೆ. ಅದರಲ್ಲಿ ಹೆಚ್ಚು ಮುಳ್ಳುಗಳಿದ್ದರೂ ಬಹುತೇಕರು ಇಷ್ಟಪಟ್ಟು ಸವಿಯುವರು.

ದೇಹದಲ್ಲಿ ಗಾಯಗಳಾಗಿದ್ದರೆ ಬಂಗುಡೆ, ಎಟ್ಟಿ ಮೀನುಗಳನ್ನು ಕೆಲವರು ವರ್ಜಿಸುತ್ತಾರೆ. ಈ ಮೀನುಗಳನ್ನು ತಿಂದರೆ ಗಾಯಗಳು ಬೇಗ ಗುಣವಾಗುವುದಿಲ್ಲ ಎಂದು ಹೇಳುವರು. ಇನ್ನು ಗರ್ಭಿಣಿ, ಬಾಣಂತಿಯರಿಗೆ ಭೂತಾಯಿ, ಬೊಳಂಜಿರ್‌ ಮೀನುಗಳು ಹೆಚ್ಚು ಸೂಕ್ತ.

ಮಂಗಳೂರು ಭಾಗದಲ್ಲಿ ಈಚೆಗೆ ಹೊಸ ಟ್ರೆಂಡೊಂದು ಶುರುವಾಗಿದೆ. ಕೆಲವು ಕಾರ್ಯಕ್ರಮಗಳಲ್ಲಿ ಮಾಂಸಾಹಾರದ ಖಾದ್ಯಗಳನ್ನು ತಯಾರಿಸುವ ಜತೆಗೆ ಮೀನುಗಳಲ್ಲಿ ವಿವಿಧ ಬಗೆಯ ಖಾದ್ಯ ತಯಾರಿಸಿ ಆಕರ್ಷಕವಾಗಿ ಜೋಡಿಸಿ ಇಡಲಾಗುತ್ತದೆ. ಪಾಂಪ್ರೆಟ್‌ ಮೀನಿನಲ್ಲಿ ತಯಾರಾಗುವ ತವಾ ಫ್ರೈ ಈ ಭಾಗದಲ್ಲಿ ‘ಶ್ರೀಮಂತ ಖಾದ್ಯ’ವಾಗಿ ಗುರುತಿಸಿಕೊಂಡಿದೆ.

ಬಡವರ ಮೀನು ಭೂತಾಯಿ: ಉಳಿದೆಲ್ಲ ಮೀನುಗಳಿಗಿಂತ ಭೂತಾಯಿ ಮೀನಿನ ಬೆಲೆ ಕಡಿಮೆ. ಹಾಗಾಗಿ, ಇದು ‘ಬಡವರ ಮೀನು’ ಎಂತಲೇ ಗುರುತಿಸಿಕೊಂಡಿದೆ. ಅಲ್ಲದೆ ಬೇರೆ ಮೀನುಗಳಲ್ಲಿ ಸ್ವಲ್ಪ ಪ್ರಮಾಣದ ನಂಜಿನ ಅಂಶ, ಕೊಬ್ಬಿನ ಅಂಶ ಇರುತ್ತದೆ. ಆದರೆ, ಭೂತಾಯಿ ಮೀನು ಸರ್ವರಿಗೂ, ಸರ್ವಕಾಲಕ್ಕೂ ಸಲ್ಲುತ್ತದೆ. ಹಾಗಾಗಿ, ಕರಾವಳಿ ಭಾಗದಲ್ಲಿ ಹೆಚ್ಚಿನ ಜನರ ಹೊಟ್ಟೆ ತುಂಬಿಸುವುದು ‘ಭೂತಾಯಿ’ಯೇ. ಮಕ್ಕಳ ಬುದ್ಧಿಮತ್ತೆ ಹೆಚ್ಚಿಸಲು ಭೂತಾಯಿ ಮೀನು ಕೊಡುವ ರೂಢಿ ಬಹುತೇಕ ಕಡೆ ಇದೆ. ಅಲ್ಲದೆ, ಮೀನಿನ ಮಾತ್ರೆಗಳು ಭೂತಾಯಿ ಮೀನಿನಲ್ಲಿ ತಯಾರಾಗುತ್ತವೆ.

ಮೀನಿನ ಖಾದ್ಯ ತಯಾರಿಯೂ ಸುಲಭ. ಮೀನು ಸ್ವಚ್ಛಗೊಳಿಸಿದ ಬಳಿಕ ಯಾವುದೇ ಬಗೆಯ ಖಾದ್ಯ ತಯಾರಿಯಾದರೂ 2ರಿಂದ 30 ನಿಮಿಷ ಸಾಕಾಗುತ್ತದೆ. ಇತರೆ ಮಾಂಸಾಹಾರ ಖಾದ್ಯ ತಯಾರಿಗೆ ಬೇಕಾಗುವಷ್ಟು ಸಮಯ ಮೀನಿನ ಖಾದ್ಯ ತಯಾರಿಗೆ ಬೇಕಾಗುವುದಿಲ್ಲ. ಹಾಗಾಗಿ ಬ್ರಹ್ಮಚಾರಿಗಳು ಕೂಡ ಸುಲಭದಲ್ಲಿ ಮೀನಿನ ಖಾದ್ಯ ತಯಾರಿಸಿಕೊಂಡು ಸವಿಯುವರು. ಅಲ್ಲದೆ ಈಗೀಗ ಸ್ಟಾಲ್‌ಗಳಲ್ಲಿ ಮೀನನ್ನು ಸ್ವಚ್ಛಗೊಳಿಸಿ ಕೊಡುವ ಪರಿಪಾಠವೂ ಹೆಚ್ಚಾಗುತ್ತಿದೆ. ಹಾಗಾಗಿ ಮೀನು ಖಾದ್ಯ ತಯಾರಿ ಇನ್ನಷ್ಟು ಸುಲಭವಾಗಿದೆ. ಮೀನನ್ನು ಸರಿಯಾಗಿ ಸ್ವಚ್ಛಗೊಳಿಸುವುದು ಬಹುತೇಕರಿಗೆ ಗೊತ್ತಿರುವುದಿಲ್ಲ. ಸ್ಟಾಲ್‌ಗಳಲ್ಲೇ ಸ್ವಚ್ಛಗೊಂಡ ಮೀನು ಸಿಗುವುದರಿಂದ ಮೀನು ಬಲು ಬೇಗ ಉದರ ತಣಿಸಲು ರೆಡಿಯಾಗುತ್ತದೆ.

ಮೀನು ಕರಿ

ಮಂಗಳೂರು ಭಾಗದಲ್ಲಿ ಬ್ಯಾರಿ ಸಮುದಾಯದ ಹೆಚ್ಚಿನವರು ಮೀನು ವ್ಯಾಪಾರದಲ್ಲಿ ತೊಡಗಿಕೊಂಡಿದ್ದಾರೆ. ಅಲ್ಲದೆ ಮೀನಿನ ಮಾರಾಟವೂ ಒಂದಷ್ಟು ಜನರಿಗೆ ಉದ್ಯೋಗ ಕೊಟ್ಟಿದೆ. ಬೈಕ್‌, ಜೀಪ್‌, ಆಟೊ, ಟೆಂಪೊಗಳಲ್ಲಿ ಮೀನುಗಳನ್ನು ತುಂಬಿಕೊಂಡು ವಿವಿಧ ಸ್ಥಳಗಳಲ್ಲಿ ಮಾರಾಟ ಮಾಡುವ ಮೂಲಕ ಅನೇಕರು ಬದುಕಿನ ನೆಲೆ ಕಂಡುಕೊಂಡಿದ್ದಾರೆ.

ಮಲ್ಪೆ, ಮಂಗಳೂರು ದಕ್ಕೆ, ಕುಂದಾಪುರದ ಕಡಲತೀರದಿಂದ ಬರುವ ಮೀನುಗಳಿಗೆ ಬೆಂಗಳೂರು ಸೇರಿದಂತೆ ನಾಡಿನಾದ್ಯಂತ ಹೆಚ್ಚು ಬೇಡಿಕೆ. ಬೆಂಗಳೂರಿಗೆ ಮಲ್ಪೆ, ಮಂಗಳೂರಿನಿಂದಲೇ ಹೆಚ್ಚು ಮೀನುಗಳು ಪೂರೈಕೆಯಾಗುತ್ತವೆ. ಕಲ್ಲಿಕೋಟೆ, ಮದ್ರಾಸ್‌ ಈ ಭಾಗದಿಂದಲೂ ಬೆಂಗಳೂರಿಗೆ ಮೀನು ಪೂರೈಕೆಯಾಗುತ್ತದೆ. ಆದರೆ, ಮಲ್ಪೆ, ಮಂಗಳೂರಿನಿಂದ ತರಿಸಿದ ಮೀನುಗಳಿಗೇ ಹೆಚ್ಚು ಬೇಡಿಕೆ.

ಮೀನು ಮಾಂಸಾಹಾರವಲ್ಲ; ಸಮುದ್ರಾಹಾರ ಎಂತಲೂ ಬಹುತೇಕರು ವಾದಿಸುತ್ತಾರೆ. ಅದೇನೆ ಇರಲಿ ಮೀನು ತಿನ್ನಿ, ಆರೋಗ್ಯದಿಂದಿರಿ ಎನ್ನುವರು ಮತ್ಸ್ಯ ಖಾದ್ಯ ಪ್ರಿಯರು.

ಖಾರಾ ಮತ್ತು ಹುಳಿ ಮಿಶ್ರಿತ ಪುಳಿಮುಂಚಿ ಬಹುತೇಕರು ಇಷ್ಟ ಪಟ್ಟು ತಿನ್ನುವ ಖಾದ್ಯ. ಬೂತಾಯಿ ಮೀನಿನಲ್ಲಿ ಈ ಖಾದ್ಯ ತಯಾರಿಸಿದರೆ ಹೆಚ್ಚು ರುಚಿಕರ. ಪುಳಿ ಎಂದರೆ ಹುಳಿ, ಮುಂಚಿ ಎಂದರೆ ಮೆಣಸು. ಇವೆರಡರ ಮಿಶ್ರಣದಲ್ಲಿ ಪುಳಿಮುಂಚಿ ತಯಾರಾಗುತ್ತದೆ. ಪುಳಿಮುಂಚಿ ಮಾಡಿದ ದಿನ ತಿನ್ನುವುದಕ್ಕಿಂತ ಮರುದಿನ ಸವಿದರೆ ಹೆಚ್ಚು ರುಚಿಕರ.

ಅರ್ಧ ಕೆ.ಜಿ ಬೂತಾಯಿ ಮೀನಿನಲ್ಲಿ ಪುಳಿಮುಂಜಿ ಹೀಗೆ ಮಾಡಿ...

ಅರ್ಧ ಟೀ ಚಮಚ ಮೆಂತ್ಯ, 2 ಟೀ ಚಮಚ ಕಾಳುಮೆಣಸು, 6 ಬೆಳ್ಳುಳ್ಳಿ ಬೇಳೆ, ಅರ್ಧ ಟೀ ಚಮಚ ಜೀರಿಗೆ, 1 ಚಮಚ ಓಂ ಕಾಳು ಇವೆಲ್ಲವನ್ನೂ ಚೆನ್ನಾಗಿ ಹುರಿಯಬೇಕು. ಬಳಿಕ 6 ಟೀ ಚಮಚ ಕೊತ್ತಂಬರಿ ಕಾಳು, ಒಣ ಮೆಣಸಿನ ಕಾಯಿ (ಮೂರು ಖಾರದ್ದು, 10 ಬ್ಯಾಡಗಿ ಮೆಣಸಿನ ಕಾಯಿ) ಹಾಕಿ ಹುರಿದುಕೊಳ್ಳಬೇಕು. ನೆಲ್ಲಿಕಾಯಿ ಗಾತ್ರದಷ್ಟು ಹುಣಸೆ ಹಣ್ಣು ಹಾಗೂ ಅರ್ಧ ಚಮಚ ಅರಿಶಿನ ಪುಡಿ ಸೇರಿಸಿ ಮಿಕ್ಸಿ ಮಾಡಿಕೊಳ್ಳಬೇಕು.

ಬಳಿಕ ಒಂದು ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ, ಒಂದು ಚಮಚದಷ್ಟು ಕುಟ್ಟಿದ ಶುಂಠಿ, ಅರ್ಧ ಈರುಳ್ಳಿ ಹೋಳು, ಎರಡು ಹಸಿ ಮೆಣಸು, ಕರಿಬೇಕು, ಉಪ್ಪು ಹಾಕಿ ಬಾಡಿಸಬೇಕು. ಈರುಳ್ಳಿ ಚೆನ್ನಾಗಿ ಹುರಿದಮೇಲೆ ಮಿಕ್ಸಿ ಮಾಡಿಕೊಂಡದ್ದನ್ನು ಆ ಪಾತ್ರೆಗೆ ಹಾಕಿ ಸ್ವಲ್ಪ ನೀರು ಹಾಕಬೇಕು. ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕುದಿಯಲು ಬಿಡಬೇಕು. ಕುದಿದ ಮೇಲೆ ಮೀನುಗಳನ್ನು ಆ ಪಾತ್ರೆಗೆ ಹಾಕಿ 15 ನಿಮಿಷ ಕುದಿಸಿದರೆ ಬೂತಾಯಿ ಪುಳಿಮುಂಚಿ ತಯಾರಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT