ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೀತಿ ಬಿಡಿ: ಬದಲಾವಣೆಗೆ ಸಿದ್ಧರಾಗಿ

Last Updated 30 ಆಗಸ್ಟ್ 2022, 0:30 IST
ಅಕ್ಷರ ಗಾತ್ರ

‘ಜಗತ್ತಿನಲ್ಲಿ ಬದಲಾವಣೆಯೇ ಶಾಶ್ವತ’ (Change is the only permanent thing in the world) – ಎನ್ನುವ ಮಾತಿದೆ. ಆದರೆ ಬಹುತೇಕರಿಗೆ ಬದಲಾವಣೆ ಸುಲಭವಲ್ಲ. ಯಾವುದೋ ಅನುಕೂಲಕರ ಸ್ಥಿತಿಗೆ ಹೊಂದಿಕೊಂಡ ಮನಸ್ಸನ್ನು ಅದರಿಂದ ಹೊರದೂಡುವುದು ಪ್ರತಿರೋಧವಿಲ್ಲದೆ ಸಾಧ್ಯವಾಗುವುದಿಲ್ಲ. ಅದರಲ್ಲೂ ಬದಲಾವಣೆಯೆಂಬುದು ಭೌತಿಕ ಮತ್ತು ಮಾನಸಿಕ ಕ್ಲೇಶಗಳನ್ನು ಉಂಟು ಮಾಡುವಂಥದ್ದಾಗಿದ್ದರೆ ಮತ್ತೂ ಕಷ್ಟ. ಒಂದೆಡೆ ಬದಲಾವಣೆ ಅನಿವಾರ್ಯ ಎಂಬುದನ್ನು ಒಪ್ಪಬೇಕು; ಮತ್ತೊಂದೆಡೆ ಬದಲಾವಣೆ ಆಗಬಾರದು ಎಂದು ಬಯಸುವ ಮನಃಸ್ಥಿತಿಯನ್ನೂ ಕಡೆಗಣಿಸಲಾಗದು. ಈ ತಾಕಲಾಟವು ಜೀವನದ ಪ್ರಮುಖ ಸಂಘರ್ಷಗಳಲ್ಲಿ ಒಂದು.

ಜನಪ್ರಿಯ ಹ್ಯಾರಿ ಪಾಟರ್ ಸರಣಿಯಲ್ಲಿ ‘ಕತ್ತಲೆ ಮತ್ತು ಸಾವಿನಲ್ಲಿ ಅಜ್ಞಾತದ ಭಯವಿದೆ’ ಎನ್ನುವ ಮಾತು ಬರುತ್ತದೆ. ಜೀವನದಲ್ಲಿ ಆಗುವ ಬದಲಾವಣೆಗಳ ಹಿಂದಿನ ಭೀತಿಗೂ ‘ಅಜ್ಞಾತದ ಭಯ’ವೇ ಕಾರಣ. ಎಷ್ಟೋ ಮಂದಿ ಈ ಬದಲಾವಣೆಗಳನ್ನು ಸ್ವೀಕರಿಸಲಾಗದೆ ಜೀವನದಲ್ಲಿ ಹಿಂದಡಿಯಿಡುತ್ತಾರೆ. ನೌಕರಿಯಲ್ಲಿ ಬಡ್ತಿಯ ಜೊತೆಗೆ ಬರುವ ಹೆಚ್ಚಿನ ಜವಾಬ್ದಾರಿಗಳಿಗೆ ಹೆದರಿ ಬಡ್ತಿಯನ್ನು ನಿರಾಕರಿಸಿದವರಿದ್ದಾರೆ. ಪರಿಣಾಮಗಳಿಗೆ ಹೆದರಿ ಪ್ರಯತ್ನವನ್ನೇ ಮಾಡದವರನ್ನು ನೋಡಿರುತ್ತೇವೆ. ಹೆದರಿಕೆಯ ನಿಲುವಿಗೆ ಪೂರಕವಾಗುವಂತಹ ಕಥೆಗಳನ್ನು, ನೆಪಗಳನ್ನು, ಊಹೆಗಳನ್ನು ಹೆಣೆದು ತಮ್ಮನ್ನು ತಾವು ಸಮಾಧಾನ ಮಾಡಿಕೊಳ್ಳುವವರಿಗೆ ಕೊರತೆಯಿಲ್ಲ. ತಮ್ಮಂತಹ ನಿಲುವಿನ ಮತ್ತೊಬ್ಬರನ್ನು ಹುಡುಕಿ, ಅವರ ಜೊತೆಗೆ ನಿರ್ಧಾರಗಳನ್ನು ಸಮರ್ಥಿಸಿಕೊಳ್ಳುವುದು ಅನೇಕರ ವಿಧಾನ.

ಆದರೆ ಜೀವನವು ಬದಲಾವಣೆಗಳನ್ನು ಅಪ್ಪಿಕೊಳ್ಳುವುದರಲ್ಲಿದೆಯೇ ಹೊರತು, ಅದನ್ನು ನಿರಾಕರಿಸುವುದರಲ್ಲಿ ಅಲ್ಲ. ಈ ವಿಷಯದಲ್ಲಿ ನಮ್ಮ ಮನಃಸ್ಥಿತಿಯ ಬದಲಾವಣೆ ಪ್ರಮುಖ ಘಟ್ಟ. ಬದಲಾವಣೆ ಚಿಕ್ಕದೋ ದೊಡ್ಡದೋ, ಪ್ರತ್ಯಕ್ಷವೋ ಪರೋಕ್ಷವೋ, ನಮ್ಮ ನಿಯಂತ್ರಣದಲ್ಲಿ ಇದೆಯೋ ಇಲ್ಲವೋ, ಅದು ಆಗುತ್ತಲೇ ಇರುತ್ತದೆ. ಬದುಕಿನ ಬದಲಾವಣೆಗಳ ಜೊತೆಗೆ ಎಷ್ಟು ಬೇಗ, ಎಷ್ಟು ಚೆನ್ನಾಗಿ ಸಮತೋಲನ ಸಾಧಿಸಬಲ್ಲೆವು ಎಂಬುದರ ಮೇಲೆ ಮನಸ್ಸಿನ ಪಕ್ವತೆ ನಿರ್ಧಾರವಾಗುತ್ತದೆ. ನಾವಿಂದು ಯಾವ ಪರಿಸ್ಥಿತಿಗೆ ಚೆನ್ನಾಗಿ ಹೊಂದಿಕೊಂಡು ‘ಇದು ಬದಲಾಗಬಾರದು’ ಎಂದು ಬಯಸುತ್ತೇವೆಯೋ, ಅದು ಮೊದಲಿನಿಂದಲೂ ಹಾಗೆಯೇ ಇರಲಿಲ್ಲ; ಬದಲಿಗೆ, ‘ಯಾವ್ಯಾವುದೋ ಸ್ಥಿತ್ಯಂತರಗಳ ಮೂಲಕ ಹಾದು ಅದು ಇಂದು ಈ ಹಂತವನ್ನು ತಲುಪಿದೆ’ ಎಂಬ ಅರಿವನ್ನು ಬೆಳೆಸಿಕೊಂಡರೆ ಬದಲಾವಣೆಗಳನ್ನು ಸ್ವೀಕರಿಸುವುದು ಸುಲಭವಾಗುತ್ತದೆ.

ಬದಲಾವಣೆಗೆ ಅನೇಕ ರೀತಿಯ ಸ್ಪಂದನಗಳಿವೆ. ಕೆಲವರು ಅದನ್ನು ಸವಾಲಿನ ರೂಪದಲ್ಲಿ ತೆಗೆದುಕೊಳ್ಳುತ್ತಾರೆ. ಇನ್ನು ಕೆಲವರಿಗೆ ಅದೊಂದು ಕುತೂಹಲ. ಹಲವರಿಗೆ ಅದರ ಬಗ್ಗೆ ಹಿಂಜರಿಕೆ. ಮತ್ತಷ್ಟು ಮಂದಿಗೆ ಅದರ ಕುರಿತಾಗಿ ಭೀತಿ. ಇನ್ನಷ್ಟು ಮಂದಿಗೆ ಸಮಾಜದ ಪ್ರತಿಕ್ರಿಯೆಯ ಬಗ್ಗೆ ಭಯ. ಅನೇಕರಿಗೆ ಭವಿಷ್ಯದ ಚಿಂತೆ. ಹೀಗೆ, ಬದಲಾವಣೆ ಹಲವರಲ್ಲಿ ಹಲವಾರು ಪ್ರತಿಸ್ಪಂದನಗಳನ್ನು ಉಂಟುಮಾಡಬಲ್ಲದು. ಈ ಪೈಕಿ ಬದಲಾವಣೆಗಳನ್ನು ಹೊಸ ಅನುಭವದಂತೆ ಭಾವಿಸುವವರು ಅದರ ನಿರ್ವಹಣೆಯಲ್ಲಿ ಹೆಚ್ಚು ಸಫಲರಾಗುತ್ತಾರೆ ಎಂದು ಹೇಳಲಾಗಿದೆ.
ಬದಲಾವಣೆ ಕಡ್ಡಾಯವಾದಾಗ ಅದನ್ನು ಹೇಗಾದರೂ ನಿಭಾಯಿಸಲೇ ಬೇಕಾಗುತ್ತದೆ. ಅಂತಹ ಸಂದರ್ಭಗಳಲ್ಲಿ ಭಾವನೆಗಳನ್ನು, ಅನುಭವಗಳನ್ನು, ಸವಾಲುಗಳನ್ನು, ಕಾರ್ಯಸೂಚಿಗಳನ್ನು ಬರೆಯುವುದು ಒಳಿತೆಂದು ತಜ್ಞರ ಅಭಿಮತ. ಒಂದೆಡೆ ಕ್ರಮಬದ್ಧವಾಗಿ ಇವುಗಳನ್ನು ದಾಖಲಿಸುವುದು ಹೆಚ್ಚು ವಿಶ್ವಾಸವನ್ನು ನೀಡುತ್ತದೆ; ಮುಂದಿನ ಬಾರಿ ಬದಲಾವಣೆಗಳನ್ನು ಎದುರಿಸುವಾಗ ಸಹಾಯಕಾರಿಯಾಗುತ್ತದೆ. ಮನಸ್ಸಿನ ಅಮೂರ್ತ ಭಾವಗಳು ಲಿಖಿತರೂಪಕ್ಕೆ ಬಂದಾಗ ಹೆಚ್ಚು ಸ್ಪಷ್ಟವಾಗುತ್ತವೆ. ಆಗ ಅವುಗಳ ಪರಿಹಾರೋಪಾಯಗಳನ್ನು ಚೆನ್ನಾಗಿ ಮಾಡಬಹುದು.

ಕೆಲವು ಬದಲಾವಣೆಗಳು ಬಹಳ ಪ್ರಭಾವ ಬೀರಿದರೂ, ನಮ್ಮ ನಿಯಂತ್ರಣಕ್ಕೆ ಮೀರಿದವು. ದಶಕಗಳ ಗೆಳೆಯನ ಮರಣ, ಹಲವಾರು ವರ್ಷಗಳ ಉದ್ಯೋಗವನ್ನು ಏಕಾಏಕಿ ಕಳೆದುಕೊಳ್ಳುವುದು, ವಸತಿಯ ಬದಲಾವಣೆ ಮೊದಲಾದುವುಗಳು ನಮ್ಮನ್ನು ಬಹುವಾಗಿ ಬಾಧಿಸಿದರೂ, ಅವುಗಳ ಮೇಲೆ ನಮ್ಮ ಹತೋಟಿ ಇರುವುದಿಲ್ಲ. ಅಂತಹ ಸಂದರ್ಭಗಳಲ್ಲಿ ಹೊಸ ಪರಿಸ್ಥಿತಿಯನ್ನು ಸಾಧ್ಯವಾದಷ್ಟೂ ಬೇಗನೆ ಒಪ್ಪಿಕೊಳ್ಳಬೇಕಾಗುತ್ತದೆ. ನಿರಾಶೆ ಮತ್ತು ಋಣಾತ್ಮಕ ಚಿಂತನೆಗಳು ಮನಸ್ಸನ್ನು ಕುಗ್ಗಿಸುತ್ತವೆ. ಹೊಸ ಸಂದರ್ಭಕ್ಕೆ ಅನುಗುಣವಾಗಿ ಏನೆಲ್ಲಾ ಮಾಡಬಹುದು ಎನ್ನುವ ನಿಟ್ಟಿನಲ್ಲಿ ಧನಾತ್ಮಕ ಚಿಂತನೆ ಸಹಾಯಕ. ಈ ದಿಶೆಯಲ್ಲಿ ತಾಳ್ಮೆ, ಸೂಕ್ಷ್ಮವಾದ ಗಮನಿಸುವಿಕೆ, ಎಚ್ಚರಗಳು ಬಹಳ ಮುಖ್ಯ. ಬದಲಾವಣೆಯನ್ನು ಒಪ್ಪುವ ದಿಕ್ಕಿನಲ್ಲಿ ಹೊಸದೊಂದು ಕಲಿಕೆ ಅಗತ್ಯ ಎಂದಾಗ, ಅದನ್ನು ಶೀಘ್ರವಾಗಿ ಮಾಡುವುದು ಹೆಚ್ಚು ಅನುಕೂಲಕಾರಿ. ಇದರಿಂದ ಬದಲಾವಣೆಯತ್ತ ಹೆಚ್ಚಿನ ಜ್ಞಾನ ಒದಗುತ್ತದೆ; ಅದನ್ನು ನಿಭಾಯಿಸುವ ವಿಶ್ವಾಸ ಮೂಡುತ್ತದೆ.

ಕೆಲವು ಬದಲಾವಣೆಗಳು ಸಮಯವನ್ನು ನೀಡುತ್ತವೆ; ಕೆಲವು ಹಠಾತ್ತಾಗಿ ಆಗುತ್ತವೆ. ಆದರೆ, ಯಾವುದೇ ಬದಲಾವಣೆಗೂ ಹೊಂದಿಕೊಳ್ಳಲು ಸಮಯ ಹಿಡಿಯುತ್ತದೆ. ದೊಡ್ಡಮೊತ್ತದ ಲಾಟರಿ ಬಹುಮಾನ ಗೆದ್ದ ಅನೇಕರು ಅದರಿಂದಾಗುವ ಬದಲಾವಣೆಗಳನ್ನು ನಿರ್ವಹಿಸಲಾಗದೆ ಬಹಳಷ್ಟು ಹಣವನ್ನು ಕಳೆದುಕೊಳ್ಳುತ್ತಾರೆ. ಹೊಸ ಪರಿಸ್ಥಿತಿಯ ಹೊಂದಾಣಿಕೆಗೆ ಸಮಯ ನೀಡಬೇಕು; ಈ ಸಮಯದಲ್ಲಿ ಬಲವಾದ ವಿವೇಚನೆ ಇರಬೇಕು. ಭವಿಷ್ಯದ ಕನಸುಗಳಿಗಿಂತ ವರ್ತಮಾನದ ವಾಸ್ತವವನ್ನು ಸರಿಯಾಗಿ ಗುರುತಿಸಬೇಕು. ದೊಡ್ದ ಬದಲಾವಣೆಗಳಿಗೆ ಹೊಂದಿಕೊಳ್ಳಲು ಸಣ್ಣ ಬದಲಾವಣೆಗಳನ್ನು ಕಾಲಾನುಸಾರ ಮಾಡುತ್ತಾ ಹೋಗಬೇಕು. ಅನೇಕ ಸಣ್ಣ ಬದಲಾವಣೆಗಳು ಒಗ್ಗೂಡಿ ದೊಡ್ದ ಸ್ಥಿತ್ಯಂತರವನ್ನು ನಿರ್ವಹಿಸಲು ನೆರವಾಗುತ್ತವೆ.

ಬದಲಾವಣೆಯ ಹಾದಿ ಒಮ್ಮುಖವಲ್ಲ. ಅಂದರೆ, ಆರಂಭಿಕ ಸಾಫಲ್ಯ-ವೈಫಲ್ಯಗಳು ನಮ್ಮ ಅಂತಿಮ ಗುರಿಯಲ್ಲ. ಕೆಲವೊಮ್ಮೆ ಒಂದಡಿ ಮುಂದಿಟ್ಟ ಮೇಲೆ ಎರಡಡಿ ಹಿಂದೆ ಹಾಕಬೇಕಾಗಬಹುದು. ಇದು ಸಹಜವಾದ ಪ್ರಕ್ರಿಯೆ. ಅಂತಹ ಸಂದರ್ಭಗಳಲ್ಲಿ ಧೃತಿಗೆಡುವ ಅಗತ್ಯವಿಲ್ಲ. ಬದಲಾವಣೆಯ ಹಾದಿಯಲ್ಲಿ ತೀರಾ ಕಠಿಣವಾದ ಆತ್ಮವಿಮರ್ಶೆ ಬೇಕಿಲ್ಲ. ಪರಿಸ್ಥಿತಿ ಹತೋಟಿಯಲ್ಲಿಲ್ಲ ಎನಿಸಿದಾಗ ಅಪರೂಪಕ್ಕೆ ಕಾಣುವ ಕಣ್ಣೀರಿನ ಹನಿಗಳು ದೌರ್ಬಲ್ಯದ ಸಂಕೇತವಲ್ಲ. ಮಾರ್ಗದಲ್ಲಿ ಅಡೆತಡೆಗಳು ಇದ್ದರೂ ಗಮ್ಯದ ಕಡೆಗಿನ ಗಮನ ಚಂಚಲವಾಗಬಾರದು. ಪ್ರಯತ್ನ ಸಾಕಷ್ಟಿದ್ದೂ ಸ್ವಲ್ಪವೇ ಪ್ರಗತಿಯಾದರೂ ಸರಿಯೇ, ಆತ್ಮವಿಶ್ವಾಸ ಕುಂದಬಾರದು.

ಬದಲಾವಣೆಯನ್ನು ನಿರ್ವಹಿಸುವಾಗ ಆದ್ಯತೆಗಳನ್ನು ಸ್ಪಷ್ಟಪಡಿಸಬೇಕು. ನೌಕರಿಯಲ್ಲಿ ಬದಲಾವಣೆಯಾದಾಗ, ಅದಕ್ಕೆ ಸಂಬಂಧಿಸಿದ ಕೆಲಸಗಳನ್ನು ಆಯಾ ಸಮಯದಲ್ಲಿ ಅಚ್ಚುಕಟ್ಟಾಗಿ ಮುಗಿಸುವ ಸಾಮರ್ಥ್ಯವನ್ನು ಗಳಿಸಿಕೊಳ್ಳುವುದು ಆದ್ಯತೆಯಾಗುತ್ತದೆ. ಕಚೇರಿಯಲ್ಲಿನ ಇತರರ ಜೊತೆಗೆ ಸಾಮಾಜಿಕ ಸಂಬಂಧ ಏರ್ಪಡುವುದು ನಂತರದ ಆದ್ಯತೆ. ಹೀಗೆ ಪ್ರತಿಯೊಂದು ಬದಲಾವಣೆಯೂ ಬಯಸುವ ಕರ್ತವ್ಯಗಳನ್ನು ಆದ್ಯತಾನುಸಾರ ನಿರ್ವಹಿಸುವುದು ಸಾಫಲ್ಯದ ಹಾದಿ. ಹೊಸ ದಾರಿಯಲ್ಲಿ ದೊರಕುವ ಸಣ್ಣಸಣ್ಣ ಅವಕಾಶಗಳನ್ನು ಸದುಪಯೋಗ ಮಾಡಿಕೊಂಡು ಮನಸ್ಸಿನ ವಿಶ್ವಾಸವನ್ನು ಹೆಚ್ಚಿಸಿಕೊಳ್ಳುವುದು ದೀರ್ಘಕಾಲಿಕವಾಗಿ ಲಾಭದಾಯಕ. ಹೊಸ ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತಿದೆಯೆಂಬ ನಂಬಿಕೆಯೇ ನಾವು ಬೆಳೆಯಲು ಅನುಕೂಲ.

ಬದಲಾವಣೆಯ ವೇಳೆ ನಿರ್ಧಾರಗಳನ್ನು ಕೈಗೊಳ್ಳುವಾಗ ಎಚ್ಚರವಿರಬೇಕು. ‘ಏನನ್ನಾದರೂ ಕಳೆದುಕೊಂಡೇವು’ ಎಂಬ ಭೀತಿಯಲ್ಲಿ, ಯಾರನ್ನೋ ಮೆಚ್ಚಿಸಬೇಕೆನ್ನುವ ದುಡುಕಿನಲ್ಲಿ, ಪರಿಸ್ಥಿತಿ ನಮ್ಮ ಕೈಮೀರುತ್ತಿದೆ ಎನ್ನುವ ಸಿಟ್ಟಿನಲ್ಲಿ ಮಾಡುವ ನಿರ್ಧಾರಗಳು ಬಹುತೇಕ ತಪ್ಪಾಗುತ್ತವೆ. ಇಂತಹ ವೇಳೆಯಲ್ಲಿ ನಮ್ಮ ಆಯ್ಕೆಗಳನ್ನು ಒಂದೆಡೆ ಬರೆದಿಟ್ಟುಕೊಂಡು, ಆ ಪಟ್ಟಿಯನ್ನು ಕೂಲಂಕಷವಾಗಿ ಪರಿಶೀಲಿಸುವುದು ಒಳ್ಳೆಯ ನಡೆ.

ಬದಲಾವಣೆಯ ಸಮಯದಲ್ಲಿ ನಮಗೆ ಬೆಂಬಲವಾಗಿ ನಿಂತವರಿಗೆ ಕೃತಜ್ಞರಾಗಿರಬೇಕು. ಉದ್ಯೋಗದಲ್ಲಿ ಬದಲಾವಣೆಗಳಾದಾಗ ಕೌಟುಂಬಿಕ ಬೆಂಬಲ ನೆರವಾಗುತ್ತದೆ. ನಾವು ಚೆನ್ನಾಗಿ ನಂಬುವ, ತೀರಾ ಆತ್ಮೀಯರಾದ ಕೆಲವರಲ್ಲಿ ಮಾತ್ರವೇ ನಮ್ಮ ದುಗುಡಗಳನ್ನು ಹಂಚಿಕೊಳ್ಳಬೇಕು. ಕೆಲವು ಬಾರಿ ಇಂತಹ ಮಾತುಕತೆಗಳು ನಮಗೇ ಅರಿವಿಲ್ಲದ ಮಾರ್ಗೋಪಾಯಗಳನ್ನು ತೋರುತ್ತವೆ. ನಮ್ಮ ಭೀತಿಗಳನ್ನು ಊರಿಗೆಲ್ಲಾ ಸಾರಬಾರದು. ಬದಲಾವಣೆಯ ಒತ್ತಡಗಳನ್ನು ಸಹಿಸುವ ಕಲೆಗಾರಿಕೆಯನ್ನು ಬೆಳೆಸಿಕೊಳ್ಳಬೇಕು. ಈ ವಿಷಯದಲ್ಲಿ ಮಾನಸಿಕ ತಜ್ಞರು ನೆರವಾಗಬಲ್ಲರು. ಯಾವುದೇ ದಾರಿ ತೋಚುತ್ತಿಲ್ಲವೆನಿಸಿದಾಗ ನಿಸ್ಸಂಕೋಚವಾಗಿ ಮಾನಸಿಕ ತಜ್ಞರನ್ನು ಭೇಟಿಯಾಗಿ ಸಮಯೋಚಿತ ಪರಿಹಾರಗಳನ್ನು ಕಂಡುಕೊಳ್ಳಬಹುದು.⇒v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT