ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೋರೋಗಕ್ಕೆ ಮದ್ದಿಲ್ಲವೇ?

Published 4 ಸೆಪ್ಟೆಂಬರ್ 2023, 23:30 IST
Last Updated 4 ಸೆಪ್ಟೆಂಬರ್ 2023, 23:30 IST
ಅಕ್ಷರ ಗಾತ್ರ

ಮೊನ್ನೆ ಅಜ್ಜಿ ಯಾರದ್ದೊ ಬಗ್ಗೆ ಮಾತನಾಡುತ್ತ ‘ಅವಳಿಗೆ ಏನೂ ಆಗಿಲ್ಲ, ಮನೋರೋಗ. ಮನೋರೋಗಕ್ಕೆ ಮದ್ದಿಲ್ಲ’ ಎಂದರು. ಅಷ್ಟರಲ್ಲಿ ಆಯುರ್ವೇದ ಪಂಡಿತ ತಾತ ಬಂದು ವಿಷಯ ಏನೆಂದು ಕೇಳಿ ತಿಳಿದು ‘ಎಲ್ಲಾ ಮನೋರೋಗಕ್ಕೂ ಮದ್ದಿಲ್ಲಾಂತ ಅಲ್ಲ, ಶಾರೀರಕ ಬದಲಾವಣೆಗಳಿಂದ ಮನಸ್ಸಿನ ಮೇಲೆ ಆಗುವ ಪರಿಣಾಮಗಳಿಂದ ಆಗೋ ಮನೋ ವಿಕಾರಗಳಿಗೆ ಮದ್ದಿದೆ. ಆದರೆ ನಮ್ಮ ರಾಗದ್ವೇಷಗಳಿಂದ ಬರುವ ಮನೋ ವಿಕೃತಿಗಳನ್ನು ನಾವೇ ಪ್ರಯತ್ನಪೂರ್ವಕವಾಗಿ ಸರಿ ಮಾಡ್ಕೋ ಬೇಕೇ ಹೊರತು ಔಷಧಗಳಿಂದ ಸರಿ ಮಾಡಕ್ಕೆ ಆಗಲ್ಲ‘ ಎಂದು ವಿವರಿಸಿದರು.

ತಾತ ಮುಂದುವರೆದು ಹೇಳಿದರು: ‘ನೋಡು ಮಗು ಯಾವುದೇ ಸಮಸ್ಯೆಗಾದರೂ ಪರಿಹಾರ ಇರತ್ತೆ. ಸಮಸ್ಯೇನ ಸಮಸ್ಯೆ ಅಂತ ತೊಗೊಂಡು ಬಗೆಹರಿಸಿಕೋ ಬೇಕು. ಅದನ್ನೇ ಒಂದು ಪ್ರಮಾದ ಅಂತ ಮಾಡಬಾರದು. ನಮ್ಮ ಅಶಿಸ್ತು, ವಿವೇಚನೆ ಇಲ್ಲದ ಜೀವನಶೈಲಿ, ಆಹಾರಸೇವನೆಗಳು ಎಷ್ಟೋ ರೋಗಗಳಿಗೆ ಕಾರಣ ಆಗತ್ತೆ; ಹಾಗೆ ಮನಸ್ಸಿನ ಮೇಲೂ ತನ್ನ ಪರಿಣಾಮವನ್ನ ತೋರಿಸುತ್ತದೆ. ಕೆಲವು ರೋಗಗಳ ಲಕ್ಷಣಗಳಾಗಿ, ಬಸುರಿ, ಬಾಣಂತನದಲ್ಲಿ ಆಗುವ ಕೆಲವು ಶಾರೀರಿಕ ಮತ್ತು ದೈನಂದಿನ ಚಟುವಟಿಕೆಗಳ, ಹಲವಾರು ಸಾಮಾಜಿಕ ಪರಿಸ್ಥಿತಿಗಳ ಕಾರಣದಿಂದ, ಅಥವಾ ಆಪಘಾತ, ಅಭಿಘಾತಗಳಿಂದಾಗಿ ಮನೋ ವಿಕೃತಿಗಳಂತೆ ತೋರುವ ಅನೇಕ ಲಕ್ಷಣಗಳು ಉತ್ಪತ್ತಿಯಾಗುತ್ತವೆ. ಆಗ ಶಾರೀರಿಕ ರೋಗಕ್ಕೆ ಚಿಕಿತ್ಸೆ ಮಾಡಿದ ಹಾಗೆ ಮನಸ್ಸಿಗೂ ಚಿಕಿತ್ಸೆ ಮಾಡಬಹುದು.ಆದರೆ ಮನಸ್ಸಿನ ಭಾವನೆಗಳೇ ರೋಗಕ್ಕೆ ಕಾರಣ ಆಗಿದ್ದರೆ, ಅದರ ಪರಿಹಾರ ನಮ್ಮಲ್ಲೇ ಇದೆ.

‘ವಸ್ತುಗಳ ಮೇಲೆ ಅತಿಯಾದ ಆಸೆ, ಅದನ್ನ ಪಡೆದುಕೊಳ್ಳಲೇಬೇಕೆಂಬ ಎಂಬ ಹಠ, ಸಿಗದಿದ್ದಾಗ ಆಗುವ ಹತಾಶೆ–ನಿರಾಸೆಗಳು,  ಸಿಗದಿದ್ದರೆ ಎಂಬ ಭಯ, ಸಿಕ್ಕಿದ್ದನ್ನು ಕಳೆದುಕೊಂಡರೆ ಎಂಬ ಭಯ, ಮುಂದೇನಾಗುವುದೋ ಎಂಬ ಭಯ – ಹೀಗೆ ಅನೇಕ ಸಂಗತಿಗಳು ನಮ್ಮನ್ನು ಕಾಡುತ್ತವೆ. ಇಂಥವು ಯಾವ ಕೆಲಸದಲ್ಲೂ ಉತ್ಸಾಹವಿರದಂತೆ ಮಾಡುತ್ತವೆ. ಎಲ್ಲಕ್ಕಿಂತ ಮುಖ್ಯವಾಗಿ ಮನಸ್ಸಿನ ಆಯಾಸ. ದೇಹಕ್ಕೆ ದಣಿವಾಗಿರದಿದ್ದರೂ ಮನಸ್ಸಿಗಾಗುವ ದಣಿವನ್ನು ದಣಿವು ಎಂದು ಪರಿಗಣಿಸಿ ಕೆಲಸಮಾಡದೆ ಕುಳಿತುಕೊಳ್ಳುವ ಮನೋಭಾವನೆಯೂ ನಿಯಂತ್ರಿಸಬೇಕಾದದ್ದೇ. ಇವುಗಳು ನಿಯಂತ್ರಣ ತಪ್ಪಿದರೆ ಉನ್ಮಾದವೇ ಮೊದಲಾದ ರೋಗಗಳಿಗೆ ಕಾರಣವಾಗಬಹುದು.

‘ಈ ಮನೋಭಾವಗಳು ನಮ್ಮನ್ನು ಕಾಡದಿರಬೇಕೆಂದರೆ ಬಾಲ್ಯದಿಂದಲೇ ನಾವು ಕೆಲವೊಂದು ಸ್ವಭಾವಗಳನ್ನು ಬೆಳೆಸಿಕೊಳ್ಳಬೇಕು. ಅನ್ಯರ ಬಗ್ಗೆ ಅಹಿತಕರವಾದ ಭಾವನೆಗಳನ್ನು ಇಟ್ಟುಕೊಳ್ಳದಿರುವುದು; ವಾಸ್ತವಿಕತೆಯನ್ನು ಅರಿತು ನಡೆಯುವುದು; ನಮ್ಮ ಯೋಗ್ಯತೆಯನ್ನು ಅರಿತು ಆಸಕ್ತಿಯನ್ನು ಬೆಳೆಸಿಕೊಳ್ಳುವುದು; ಜೀವನದಲ್ಲಿ ಸಾಧಿಸಬೇಕಾದ ಗುರಿಯತ್ತ ದೃಷ್ಟಿಯನ್ನಿಟ್ಟು, ವಿವೇಚನೆಯಿಂದ ಹಂತಹಂತವಾಗಿ ಸಾಧಿಸುವ ಸ್ವಭಾವ; ತನ್ನ ಮತ್ತು ತನ್ನ ಪರಿಸರದಲ್ಲಿ ನಡೆಯುವ ಒಪ್ಪು ತಪ್ಪುಗಳನ್ನು ವಿವೇಚಿಸಿ, ಮುನ್ನಡೆಯುವ ಸ್ವಭಾವ; ಜೊತೆಗೆ, ನಮ್ಮ ನಿತ್ಯಕರ್ಮ, ದೈನಂದಿನ ಚಟುವಟಿಕೆಗಳನ್ನು ನಮ್ಮ ಶಕ್ತಿಗನುಗುಣವಾಗಿ ರೂಪಿಕೊಂಡು ಶಿಸ್ತಿನ ಜೀವನ ನಡೆಸುವುದು, ಸಮಾಜದ, ಪರಿಸರದ, ಜೊತೆಗಾರರ ಅಭಿವೃದ್ಧಿಯನ್ನು ನೋಡಿ ಅಸೂಯೆಪಡದೆ ಆನಂದಿಸುವುದು –ಇಂಥ ಭಾವಗಳನ್ನು ಪ್ರಯತ್ನಪೂರ್ವಕವಾಗಿ ರೂಢಿಸಿಕೊಂಡರೆ ಮನೋವಿಕೃತಿಗಳು ನಮ್ಮತ್ತ ಸುಳಿಯಲಾರವು.

‘ಎಂದರೆ ಕಾಯಿಕ, ವಾಚಿಕ, ಮಾನಸಿಕ ಶುಭ್ರತೆಯು ಮನೋವಿಕಾರವನ್ನು ತಡೆಯಲು ಅತ್ಯಗತ್ಯ. ಶುಚಿ–ರುಚಿಯಾದ ಆಹಾರವನ್ನು, ಹಿತ ಮಿತವಾಗಿ ಸೇವಿಸುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು. ಮಾದಕದ್ರವ್ಯಗಳ ಸೇವನೆ, ಮಾದಕತೆಯನ್ನು ಉತ್ಪನ್ನಮಾಡುವ ಪರಿಸರದಲ್ಲಿರುವುದು, ಅತಿಯಾದ ತಂಪುಪಾನೀಯ ಅಥವಾ ಉದ್ರೇಕಗೊಳಿಸುವ ಆಹಾರ ಸೇವನೆ– ಇಂಥವು ಯಾರನ್ನೂ ಸಾಮಾನ್ಯ ಸ್ಥಿತಿಯಿಂದ ವ್ಯಾಧಿಯ ಸ್ಥಿತಿಗೆ ಕೊಂಡೋಯ್ಯಬಲ್ಲವು. ಒರಟುಮಾತು, ಪರಿಸರವನ್ನು ಎದುರಿಸಲಾಗದೆ ಸುಳ್ಳಾಡುವುದು – ಇವು ವ್ಯಾಧಿಯತ್ತ ಹೊರಳಿಸಿದರೆ, ಶಾಂತವಾದ, ಹಿತವಾದ, ಅಭಿವೃದ್ಧಿಯ ಮಾತುಗಳು ಮನಸ್ಸನ್ನು ಶಾಂತಗೊಳಿಸುತ್ತವೆ. ಮನಸ್ಸನ್ನು ಶಾಂತಗೊಳಿಸಿ, ಬುದ್ಧಿವಿಕಾಸಕ್ಕೆ ಕಾರಣವಾಗುವ ವಿಷಯಗಳ ಅಧ್ಯಯನ, ಅನುಷ್ಠಾನಗಳಿಂದ ಮನೊವಿಕಾರಗಳು ದೂರವಾಗುತ್ತವೆ. ಜೊತೆಗೆ ನಿಯಮಿತ ವ್ಯಾಯಮ ನಮ್ಮ ಮನಸ್ಸನ್ನು ತಿಳಿಯಾಗಿಸುತ್ತದೆ.


ಇದನ್ನೇ ಯೋಗಶಾಸ್ತ್ರ ಅಹಿಂಸಾ, ಸತ್ಯ, ಅಸ್ತೇಯ, ಬ್ರಹ್ಮಚರ್ಯಾ, ಅಪರಿಗ್ರಹ, ದಯೆ, ಆರ್ಜವ, ಕ್ಷಮೆ, ಧೃತಿ, ಮಿತಾಹಾರ, ಶೌಚ, ಸಂತೋಷ, ಸ್ವಾಧ್ಯಾಯ, ಈಶ್ವರಪ್ರಣಿಧಾನ – ಎಂದು ಹೇಳಿರುವುದು. ಇವುಗಳನ್ನು ಶಿಸ್ತಿನಿಂದ ಪಾಲಿಸಿದಾಗಲೂ ಕೆಲವೊಮ್ಮೆ ಮನಸ್ಸು ಸ್ತಿಮಿತಕ್ಕೆ ಬಾರದಿದ್ದರೆ, ತಿಳಿದವರು, ಮನಸ್ಸಿಗೆ ಹಿತ ನೀಡುವವರೊಡನೆ ಬೆರೆತು ಭಾವನೆಗಳನ್ನು ಹಂಚಿಕೊಳ್ಳಬೇಕು. ನಿತ್ಯ ಎಣ್ಣೆಯನ್ನು ಹಚ್ಚಿಕೊಂಡು ಸ್ನಾನ ಮಾಡುವುದು, ತುಪ್ಪವನ್ನು ನಿತ್ಯಾಹಾರದಲ್ಲಿ ಸೇವಿಸುವುದು, ನೆತ್ತಿಗೆ ಮತ್ತು ಅಂಗಾಲಿಗೆ ಮಲಗುವಾಗ ತುಪ್ಪ ಹಚ್ಚಿಕೊಳ್ಳುವುದು, ತಂಪಾದ ವಾತಾವರಣದಲ್ಲಿ ನಡೆದಾಡುವುದು, ಮನೆಕೆಲಸಗಳನ್ನು, ಇತರೆ ಕೆಲಸಗಳನ್ನು ಕರ್ತವ್ಯವೆಂದು ಮಾಡುವುದು ಮನೋವಿಕಾರಗಳಿಂದ ಹೊರಬರಲು ಕಾರಣವಾಗುತ್ತದೆ. ತನ್ನನ್ನು ತಾನು ನಿಯಂತ್ರಿಸಿಕೊಳ್ಳುವವನು ಎಂದಿಗೂ ಮನೋವಿಕೃತಿಯಿಂದ ಬಳಲಲಾರ’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT