ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಂಗತ್ಯದಲ್ಲಿ ಮುನಿಸು ಎಂಬ ಸಿಂಡ್ರೋಮ್‌

Last Updated 28 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ಮುನಿಸು ಎಂಬುದು ವೈವಾಹಿಕ ಬದುಕಿನಲ್ಲಿ ಸಾಮಾನ್ಯ; ಅದು ಸಂಗಾತಿಗಳ ನಡುವಿನ ಪ್ರೇಮದ ಮೇಲೆ ಭಾರಿ ಹೊಡೆತವನ್ನೇ ನೀಡುತ್ತದೆ. ಪರಸ್ಪರರ ಮೇಲೆ ದೂರುವ ದಂಪತಿ, ಮದುವೆಯ ನಂತರ ಪ್ರೀತಿ– ಪ್ರೇಮವೇ ನಮ್ಮ ನಡುವಿನಿಂದ ಮಾಯವಾಗಿಬಿಟ್ಟಿದೆ ಎಂದುಕೊಳ್ಳುವವರು ಈ ಮುನಿಸೆಂಬ ಸಿಂಡ್ರೋಮ್‌ನಿಂದ ನರಳುತ್ತಿದ್ದಾರೆ ಎಂಬುದು ನಿಶ್ಚಿತ. ದಾಂಪತ್ಯದಲ್ಲಿ ಮುನಿಸನ್ನು ದೂರ ಮಾಡಿ, ಬಿರುಕನ್ನು ಮುಚ್ಚುವುದು ಹೇಗೆ?

ಗಂಡು– ಹೆಣ್ಣಿನ ನಡುವಿನ ಸಂಬಂಧ ಎಂಬುದು ಒಂದು ಸುಂದರ ಕಾವ್ಯವಿದ್ದಂತೆ, ಆದರೆ ಹುಷಾರಾಗಿ ನಿಭಾಯಿಸಿದರೆ ಮಾತ್ರ ಈ ಕಾವ್ಯದ ರಸಾನುಭವದಲ್ಲಿ ತೇಲಾಡಬಹುದು. ಇಲ್ಲದಿದ್ದರೆ ಅದು ನಿಮ್ಮ ಮನಸ್ಸನ್ನು ಘಾಸಿಗೊಳಿಸಬಲ್ಲದು, ಯಾತನೆಯನ್ನುಂಟು ಮಾಡಬಹುದು, ಹೃದಯವನ್ನು ಚೂರು ಚೂರು ಮಾಡಬಹುದು.

ದಾಂಪತ್ಯ ಎಂಬುದು ಅತ್ಯಂತ ನಾಜೂಕು. ಕೆಲವೊಮ್ಮೆ ಅಪಾಯದ ಕಂದಕದಲ್ಲಿ ಬೀಳಿಸಬಹುದು. ಆದರೂ ನೀವು ಈ ಸಾಹಚರ್ಯವೆಂಬ ಬಂಧನದಿಂದ ಪಾರಾಗುವುದು ಸಾಧ್ಯವಿಲ್ಲ. ಸದೃಢವಾದ ಸಂಬಂಧ ಒಂದು ಅಪೂರ್ವವಾದ ವರವಿದ್ದಂತೆ. ಆದರೆ ಚಾತುರ್ಯದಿಂದ ನಿರ್ವಹಿಸದಿದ್ದರೆ ಅದು ಮುಳುಗುವ ಹಡಗೂ ಆಗಬಹುದು.

ಹೌದು, ಪ್ರತಿಯೊಂದು ಸಂಬಂಧದಲ್ಲೂ ಒಂದಲ್ಲ ಒಂದು ಸಂದರ್ಭದಲ್ಲಿ ಬಿರುಕು ಮೂಡಬಹುದು; ಏಳುಬೀಳುಗಳು ಘಟಿಸುತ್ತ ಹೋಗಬಹುದು. ಹಾಗಾದರೆ ಗಂಡು– ಹೆಣ್ಣಿನ ನಡುವಿನ ಬಾಂಧವ್ಯಕ್ಕೆ, ಪ್ರೀತಿಗೆ ಹೊಡೆತ ನೀಡುವುದು ಸಾಮಾನ್ಯವಾಗಿ ಲೈಂಗಿಕ ವಿಷಯವೇ ಅಥವಾ ಹಣಕಾಸಿನ ವಿಷಯವೇ ಎಂದು ಹುಡುಕುತ್ತ ಹೋದರೆ ಕಂಡುಬರುವ ಪ್ರಮುಖ ಕಾರಣ ಮುನಿಸು.

ಈ ಮುನಿಸಿನ ಆರಂಭ ಎಲ್ಲಿದೆ ಎಂದು ಹೇಳುವುದು ಕಷ್ಟ. ಅದು ಸಣ್ಣಪುಟ್ಟ ಕಾರಣಗಳಿಗೂ ಉದ್ಭವವಾಗಬಹುದು. ಬೆಳಿಗ್ಗೆ ಎದ್ದ ಪತಿ ತನಗೆ ‘ಗುಡ್‌ ಮಾರ್ನಿಂಗ್‌’ ಹೇಳಲು ಮರೆತ ಎಂಬ ಕ್ಷುಲ್ಲಕ ಕಾರಣದಿಂದಲೂ ಸಿಟ್ಟಿನ ಭಾವನೆ ತಲೆಯೊಳಗೆ ಕೊತಕೊತ ಕುದಿಯಲು ಶುರುವಾಗಬಹುದು. ಹಲವು ಬಾರಿ ನಿರಾಸೆ, ವಿನಾಕಾರಣ ನಕಾರಾತ್ಮಕ ಭಾವನೆಗಳು ಮನಸ್ಸಿನೊಳಗೇ ಬೆಳೆಯುತ್ತ ಹೋಗಿ ಅದಕ್ಕೊಂದು ಪರಿಹಾರ ಕಾಣದೇ ಮುನಿಸಿನ ರೂಪದಲ್ಲಿ ಸ್ಫೋಟವಾಗಬಹುದು.

ಇರಿ, ಹತಾಶರಾಗಬೇಡಿ. ಇದಕ್ಕೆ ಸರಳವಾದ ಮದ್ದಿದೆ. ಸುಲಭವಾಗಿ ಇಂತಹ ಮುನಿಸು ಸೃಷ್ಟಿಸುವ ಬಿರುಕಿಗೆ ತೇಪೆ ಹಚ್ಚಬಹುದು; ಕೋಪಾಗ್ನಿ ದೊಡ್ಡ ಬೆಂಕಿಯಾಗುವ ಮೊದಲೇ ಉಫ್‌ ಎಂದು ಆರಿಸಬಹುದು.

ಬಾಂಧವ್ಯ ಅರಳಲು ಸಂಗಾತಿಗಳಿಬ್ಬರೂ ಮನಸ್ಸು ಮಾಡಬೇಕು. ಹೇಗೆ ಎರಡು ಕೈ ಸೇರಿದರೆ ಚಪ್ಪಾಳೆ ಹುಟ್ಟುತ್ತದೋ, ಎರಡು ನಾಲಿಗೆಗಳು ಹೇಗೆ ಬೇಕೋ ಹಾಗೆ ಹೊರಳಿದರೆ ಜಗಳ ತಾರಕಕ್ಕೇರುವುದೋ ಹಾಗೇ ಎರಡು ಮನಸ್ಸುಗಳು ಸಂಬಂಧ ಸುಧಾರಿಸಲು ಒಮ್ಮತಕ್ಕೆ ಬರಬೇಕು. ಬಹು ಮುಖ್ಯವಾದ ಅಂಶಗಳೆಂದರೆ ಸಮಸ್ಯೆಗಳ ಮೂಲವನ್ನು ಅರಿತುಕೊಳ್ಳಬೇಕಾಗುತ್ತದೆ; ಪರಸ್ಪರ ಕ್ರಿಯೆಗಳನ್ನು ಸರಿಪಡಿಸಿ, ಪ್ರತಿಕ್ರಿಯೆಗಳಲ್ಲಿ ಬದಲಾವಣೆ ಮೂಡಿಸಬೇಕಾಗುತ್ತದೆ.

ಹಾಗಾದರೆ ಮುನಿಸನ್ನು ಗುರುತಿಸುವುದು ಹೇಗೆ?
ಮುನಿಸೆಂಬುದು ಮನಸ್ಸಿನೊಳಗೇ ಅವಿತು ನೋವುಂಟು ಮಾಡುವ ಗಾಯ. ಮಾತಿನ ಮೂಲಕ ಹೊರಬರದು; ಇದು ಇತರರ ಕಣ್ಣಿಗೆ ಕಾಣದು. ಹೀಗಾಗಿ ಸಂಗಾತಿಗಳು ಪರಸ್ಪರ ಇದರ ಮೇಲೆ ಕಣ್ಣಿಟ್ಟಿರಬೇಕು.

* ತೀವ್ರವಾದ ಆದರೆ ಹೊರಗೆ ಪ್ರಕಟಿಸಲು ಅಸಾಧ್ಯವಾದ ಸಿಟ್ಟು.

* ಗಮನ ನೀಡದ, ಅನುನಯಿಸದ ಸಂಗಾತಿ.

* ಪದೆ ಪದೆ ಆಗುವ ಜಗಳ.

* ಪ್ರೀತಿಯ, ತಾದ್ಯಾತ್ಮದ ಕೊರತೆ.

* ನಕಾರಾತ್ಮಕ, ಆಕ್ರಮಣಕಾರಿ ಮನೋಭಾವ.

ಮುನಿಸು ಮಾಯವಾದರೆ ಪ್ರೇಮಕ್ಕೆ ಒಂದಿಷ್ಟು ಆಕರ್ಷಣೆ ಸೇರಿಸಿ
ಮುನಿಸನ್ನು ಕಡಿಮೆ ಮಾಡಲು ಪ್ರೀತಿಯೆಂಬ ಆಯುಧವನ್ನು ಹರಿತಗೊಳಿಸಿ. ಸಂಗಾತಿಯ ಭಾವನೆಗಳನ್ನು ಅರ್ಥೈಸಿಕೊಳ್ಳಲು ಮುಂದಾಗಿ. ಹೌದು, ಬಹುತೇಕ ದಂಪತಿ ಪರಸ್ಪರರ ಮುನಿಸಿನ ಮೂಲವನ್ನು ಪತ್ತೆ ಮಾಡಲು ವಿಫಲರಾಗುತ್ತಾರೆ. ಆದರೆ ಮರಳಿ ಯತ್ನವ ಮಾಡಿದರೆ ಇದನ್ನು ಹುಡುಕುವುದು ಕಷ್ಟವೇನಲ್ಲ. ಕಾರಣ ಪತ್ತೆಯಾಗಿಬಿಟ್ಟಿರೆ ಅದರ ಬಗ್ಗೆ ಮಾತನಾಡಿ. ಮೌನವಾಗಿದ್ದುಬಿಟ್ಟರೆ ಸಮಸ್ಯೆಗಳು ಒಳಗೊಳಗೇ ಬೆಳೆದು ನಿಮ್ಮನ್ನೇ ಮುಗಿಸಲು ಕಾಯುತ್ತವೆ. ಸಮಸ್ಯೆ ಪರಿಹರಿಸಲು ಎಲ್ಲಾ ರೀತಿಯಿಂದಲೂ ಯತ್ನಿಸಿ. ಒಂದಿಷ್ಟು ಓಲೈಕೆ, ಒಂದಿಷ್ಟು ನಿರೀಕ್ಷೆಗಳು, ಒಂದಿಷ್ಟು ಹಾರೈಕೆಗಳು ನಿಮಗೆ ಫಲ ಕೊಡದೇ ಬಿಡದು.

ಇನ್ನೊಬ್ಬರ ಭಾವನೆಗಳನ್ನು ಗ್ರಹಿಸುವ ಶಕ್ತಿಯಿದ್ದರೆ ಸಾಕು, ಆ ವ್ಯಕ್ತಿಯ ಗುಣ, ಅವಗುಣಗಳನ್ನು ಅರಿತು ಪರಿಸ್ಥಿತಿಯನ್ನು ನಿಭಾಯಿಸಬಹುದು. ಬದುಕಿನಲ್ಲಾದ ಕೆಲವು ಅನುಭವಗಳು, ಎದುರಿಸಿದ ಪರಿಸ್ಥಿತಿಗಳು ದಾಂಪತ್ಯದಲ್ಲಿನ ಮುನಿಸನ್ನು ಪರಿಹರಿಸಲು ಮಾರ್ಗದರ್ಶಿಯಿದ್ದಂತೆ.

ಹೆಣ್ಣಿನ ಜೊತೆಗಿನ ಪ್ರೇಮವಂಚಿತ ವ್ಯಕ್ತಿ ಅಧಿಕಾರದ ಪ್ರವೃತ್ತಿ ತೋರಿಸಬಹುದು. ಹಾಗೆಯೇ, ಪುರುಷನಿಂದ ಮೋಸ ಹೋದ ಯುವತಿ ಅನುಮಾನದ ಸ್ವಭಾವ ಹೊಂದಿರಬಹುದು. ಇವು ಸದ್ಯದ ದಾಂಪತ್ಯದಿಂದ ಬೆಳೆಸಿಕೊಂಡ ಗುಣಗಳೇನಲ್ಲ, ಹಿಂದಿನ ಅನುಭವಗಳಿಂದ ಬಂದಿದ್ದು. ಇದನ್ನು ಅರಿತುಕೊಂಡು ಸಂವಹನ ನಡೆಸಿ, ತಪ್ಪು ಭಾವನೆಗಳನ್ನು ದೂರ ಮಾಡಬಹುದು.

ಕ್ಷಮಿಸಿಬಿಡಿ, ಮರೆತುಬಿಡಿ
ಹೆಚ್ಚಿನ ಬಾರಿ ಹಳೆಯ ಸಂಗತಿಗಳನ್ನೆಲ್ಲ ಕೆದಕಿ ಶುರುವಾಗುವ ವಾದವಿವಾದಗಳು ತಾರಕಕ್ಕೇರಿ ಜಗಳಕ್ಕೆ ತಿರುಗಬಹುದು. ಹಿಂದೆ ನಡೆದ ಘಟನೆಗಳನ್ನು ಮರೆಯದೇ ಆಗಾಗ ಕೆಣಕಿದರೆ ಇಂತಹ ಸಂದರ್ಭ ಎದುರಾಗುತ್ತದೆ. ಹಗೆತನವನ್ನು ಮುಂದುವರಿಸುವುದು, ಕ್ಷಮಿಸದಿರುವುದು, ಮರೆಯದೇ ಆಗಾಗ ಕೆಣಕುವುದು ಇದಕ್ಕೆಲ್ಲ ಕಾರಣ. ಆರೋಗ್ಯಕರ ಸಂಭಾಷಣೆ ನಡೆಸಿ. ಹೃದಯದಾಳದಿಂದ ಮಾತನಾಡಿ. ಕೆಲವೊಮ್ಮೆ ಮನಃಪೂರ್ತಿ ಅಳುವುದು ಕೂಡ ಸಮಸ್ಯೆಯನ್ನು ನಿವಾರಿಸುತ್ತದೆ.

ಸಂಬಂಧದಲ್ಲಿ ಸಂವಹನ ಎನ್ನುವುದು ಮುಖ್ಯ. ಒಬ್ಬ ಸಂಗಾತಿ ಮಾತನಾಡಿದರೆ, ಇನ್ನೊಬ್ಬರು ಕಿವಿಗೊಡುವುದು ಉತ್ತಮ. ಹೆದರದೆ, ಯಾವುದೇ ಹಿಂಜರಿಕೆ ಇಲ್ಲದೇ ಮಾತನಾಡುವಂತಹ ಪೂರಕ ವಾತಾವರಣವನ್ನು ಸೃಷ್ಟಿಸಿಕೊಳ್ಳಬೇಕು.

ಪರಿಸ್ಥಿತಿ ಕೈ ಮೀರುವ ಮುನ್ನವೇ ಕ್ಷಮಾಪಣೆ ಕೇಳಿ. ಆರೋಗ್ಯಕರವಾದ, ಖುಷಿಯಿಂದ ಕೂಡಿದ ಸಂಬಂಧದಲ್ಲಿ ಅಹಂಕಾರಕ್ಕೆ ಜಾಗವಿರುವುದಿಲ್ಲ. ಮಾನವ ಸಹಜ ತಪ್ಪುಗಳಾಗುತ್ತವೆ ಎಂದು ಒಪ್ಪಿಕೊಂಡು, ಕ್ಷಮಾಪಣೆ ಕೋರಿ ಸರಿಪಡಿಸಿಕೊಳ್ಳುವುದು ಒಳಿತು. ಒಂದು ‘ಸ್ಸಾರಿ’ ಎನ್ನುವ ಶಬ್ದ ಎಲ್ಲವನ್ನೂ ಸಹಜ ಸ್ಥಿತಿಗೆ ತಂದುಬಿಡುತ್ತದೆ.

ಪ್ರಾಮಾಣಿಕತೆ ಇರಲಿ. ಎಲ್ಲರೂ ನೂರಕ್ಕೆ ನೂರು ಸರಿಯಾದ ವ್ಯಕ್ತಿ ಎಂದೆನಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಪ್ರಾಮಾಣಿಕತೆ ಇದ್ದರೆ ಎಲ್ಲವೂ ಸರಿಹೋಗಬಹುದು. ಸುಳ್ಳಿನ ಮೇಲೆ ಸಂಬಂಧ ಹೆಚ್ಚು ದಿನ ನಿಲ್ಲುವುದಿಲ್ಲ. ಜೀವನಪರ್ಯಂತ ಬಾಳುವ ದಾಂಪತ್ಯಕ್ಕೆ ಸುಳ್ಳಿನ ಪರದೆ ಖಂಡಿತ ಶೋಭೆ ತರಲಾರದು.

ಸ್ಸಾರಿ, ಥ್ಯಾಂಕ್‌ ಯೂ, ಪ್ಲೀಸ್‌ ಎಂಬ ಶಬ್ದಗಳು ಉದ್ದುದ್ದ ವಾಕ್ಯಗಳಿಗಿಂತ ಉತ್ತಮ. ನೀವು ನಿಮ್ಮ ಸಂಗಾತಿಯ ಬಗ್ಗೆ ಎಷ್ಟು ಕಾಳಜಿ ವಹಿಸುತ್ತೀರಿ, ಅವರ ನಡೆಯನ್ನು ಗೌರವಿಸುತ್ತೀರಿ ಎಂಬುದರ ದ್ಯೋತಕ.

ಮುನಿಸು ಕೊನೆಗೊಂಡಾಗ ಸಂಗಾತಿಗೆ ಹೃದಯಪೂರ್ವಕವಾಗಿ ಮುತ್ತಿಕ್ಕಿ. ಸಂಗಾತಿಯೊಂದಿಗಿನ ಮಿಲನಕ್ಕೂ ಸಾವಿರಾರು ತಪ್ಪುಗಳನ್ನು ಮರೆಸುವ ಶಕ್ತಿಯಿದೆ.

ಮುನಿಸಿಗೆ ಕಾರಣಗಳನ್ನು ಗುರುತಿಸಿ
*ಸ್ವಾರ್ಥ– ಸಂಗಾತಿಗಳಲ್ಲಿ ಒಬ್ಬರು ಸ್ವಾರ್ಥಿಯಾದರೂ ಇನ್ನೊಬ್ಬರಿಗೆ ಸಿಟ್ಟು ಬರಬಹುದು.

*ಈಡೇರದ ನಿರೀಕ್ಷೆಗಳು– ದಾಂಪತ್ಯದಲ್ಲಿ ಮಂದಿಗೆ ನಿರೀಕ್ಷೆಗಳು ಆಕಾಶದಷ್ಟು. ನಿರೀಕ್ಷೆ ಗಗನ ಕುಸುಮವಾದಾಗ ಸಹಜವಾಗಿಯೇ ಮುನಿಸಿನ ಚಿಪ್ಪಿನೊಳಗೆ ಮುದುಡಿಕೊಳ್ಳುತ್ತಾರೆ.

*ನಿರ್ಲಕ್ಷ್ಯ– ಕಿವಿ ಎನ್ನುವುದು ಹೃದಯದ ಮಾರ್ಗವನ್ನು ತೆರೆಯುವುದಂತೆ. ಆದರೆ ಸಂಗಾತಿಯ ಮಾತಿಗೆ, ಭಾವನೆಗೆ ಓಗೊಡದಿದ್ದರೆ, ಅವರ ಬಯಕೆಗಳನ್ನು ನಿರ್ಲಕ್ಷಿಸಿದರೆ ಸೀದಾ ಕೋಪಗೃಹದ ಬಾಗಿಲು ತೆರೆದುಕೊಳ್ಳುವುದು!

*ಕ್ಷಮಾಗುಣದ ಕೊರತೆ– ಹಿಂದೆ ನಡೆದ ಯಾವುದೋ ಘಟನೆಯನ್ನು ಕ್ಷಮಿಸದೆ, ಮರೆಯದೆ ಹಗೆಯಿಟ್ಟುಕೊಳ್ಳುವುದು.

*ಇನ್ನೊಬ್ಬರ ಭಾವನೆಗಳಿಗೆ ಬೆಲೆ ಕೊಡದಿರುವುದು– ಇದು ಸಂಬಂಧದಲ್ಲಿ ಪ್ರಣಯದ ಕಿಡಿಯನ್ನೇ ಆರಿಸಿಬಿಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT