ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೊಜ್ಜು ಅಳಿಯಲಿ ‘ಸಕ್ಕರೆ’ ಕರಗಲಿ

Last Updated 8 ನವೆಂಬರ್ 2021, 19:30 IST
ಅಕ್ಷರ ಗಾತ್ರ

ಈಗ ಏಳೆಂಟು ವರ್ಷಗಳಿಂದ ಮಧುಮೇಹದಿಂದ ಬಳಲುತ್ತಿರುವ ಹಿರಿಯ ಸ್ನೇಹಿತೆ ಆತಂಕದಿಂದ ಕರೆ ಮಾಡಿದ್ದರು. ನಡೆದ್ದದ್ದಿಷ್ಟೆ: ಆಕೆ ಈ ಬಾರಿ ವೈದ್ಯರ ಬಳಿ ತಪಾಸಣೆಗೆ ಹೋದಾಗ ರಕ್ತದ ಸಕ್ಕರೆ ಅಂಶವು ನಿಯಂತ್ರಣಕ್ಕೆ ಬರುತ್ತಿಲ್ಲವೆಂದೂ, ಇನ್‍ಸುಲಿನ್ ಚುಚ್ಚುಮದ್ದು ಬೇಕಾಗಬಹುದು ಎಂದೂ, ದೇಹತೂಕದ ಜೊತೆಗೆ ಹೊಟ್ಟೆಯ ಸುತ್ತಳತೆಯನ್ನು ಕಡಿಮೆ ಮಾಡಿಕೊಳ್ಳಲೇಬೇಕು ಎಂದು ವೈದ್ಯರು ಹೇಳಿದ್ದು ಅವರ ಆತಂಕಕ್ಕೆ ಕಾರಣವಾಗಿತ್ತು. ಬೇರೆ ದಾರಿಯಿಲ್ಲದೆ ಯೋಗತರಗತಿಗೆ ಸೇರಿ, ನಿಯಮಿತವಾಗಿ ಯೋಗಾಭ್ಯಾಸವನ್ನು ಶುರು ಮಾಡಿದ್ದರು. ಪರಿಣಾಮವಾಗಿ ಆಕೆಯ ದೇಹತೂಕದ ಜೊತೆಯಲ್ಲಿ ಒಂದಿಷ್ಟು ಹೊಟ್ಟೆಯ ಸುತ್ತಳತೆಯೂ ಕಡಿಮೆಯಾಗಿತ್ತು. ಈ ಬಾರಿ ವೈದ್ಯರಲ್ಲಿ ಹೋದಾಗ ಸಕ್ಕರೆ ಅಂಶ ಸ್ವಲ್ಪ ಮಟ್ಟಿನ ನಿಯಂತ್ರಣದಲ್ಲಿದ್ದುದು ನಿಜಕ್ಕೂ ಆಕೆಗೆ ಸಮಾಧಾನ ತಂದಿತ್ತು.

ಹೌದು, ಅಧಿಕ ದೇಹತೂಕ, ಅದರಲ್ಲಿಯೂ ಹೆಚ್ಚಾದ ಹೊಟ್ಟೆಯ ಅಥವಾ ಸೊಂಟದ ಸುತ್ತಳತೆ ಒಳ್ಳೆಯದಲ್ಲ. ಪುರುಷರಲ್ಲಿ ನಲವತ್ತು ಇಂಚುಗಳಿಗಿಂತ ಹಾಗೂ ಮಹಿಳೆಯರಲ್ಲಿ ಮೂವತ್ತೈದು ಇಂಚಿಗಿಂತಲೂ ಹೆಚ್ಚಾದ ಸೊಂಟದ ಸುತ್ತಳತೆಯು ಬಹು ಅಪಾಯಕಾರಿ. ಇದು ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳನ್ನು ಆಹ್ವಾನಿಸುತ್ತದೆ. ಈ ಮೂರು ಸಮಸ್ಯೆಗಳು ಚಯಾಪಚಯ ಕ್ರಿಯೆಗೆ ಸಂಬಂಧಿಸಿದ ಕಾಯಿಲೆಗಳಲ್ಲಿ (ಮೆಟಬಾಲಿಕ್ ಸಿಂಡ್ರೋಮ್) ಮುಖ್ಯವಾದುವು ಎಂದು ತಜ್ಞರು ಗುರುತಿಸುತ್ತಾರೆ.

ಶರೀರದ ಮಧ್ಯಭಾಗದಲ್ಲಿ ಶೇಖರವಾಗುವ ಈ ಕೊಬ್ಬಿನಾಂಶ ಬಹಳ ಅಪಾಯ. ಏಕೆಂದರೆ ಇದು ಯಕೃತ್ತು, ಮೇದೋಜೀರಕ ಗ್ರಂಥಿ ಮುಂತಾದ ಮುಖ್ಯ ಅಂಗಾಂಗಗಳ ಸುತ್ತಲೂ ಶೇಖರವಾಗಿರುತ್ತದೆ. ಇದು ಈ ಅಂಗಾಂಗಗಳ ಕಾರ್ಯಕ್ಷಮತೆಯನ್ನು ಕುಂಠಿತಗೊಳಿಸುತ್ತದೆ. ಅಲ್ಲದೆ, ಈ ಕೊಬ್ಬಿನಾಂಶವು ಒಂದು ಬಗೆಯ ಉರಿಯೂತ ಪ್ರಕ್ರಿಯೆಗೆ ಕಾರಣವಾಗಿ ಅಪಾಯಕರ ಪರಿಣಾಮಗಳನ್ನುಂಟುಮಾಡುತ್ತದೆ. ಒಂದು ಅಧ್ಯಯನದ ಪ್ರಕಾರ ವಿಶ್ವದಲ್ಲಿ ಯಕೃತ್ತಿನ ವೈಫಲ್ಯಕ್ಕೆ ಅದನ್ನು ಆವರಿಸುವ ಕೊಬ್ಬಿನಾಂಶವೇ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ. ಅಷ್ಟೇ ಏಕೆ, ಕೋವಿಡ್ ಕೂಡ ಬೊಜ್ಜು ಇದ್ದವರಲ್ಲಿ ಮಾರಣಾಂತಿಕವಾಗಿದ್ದನ್ನು ನಾವಿಲ್ಲಿ ಸ್ಮರಿಸಬಹುದು.

ಗಮನದಲ್ಲಿರಲಿ

ಮಧುಮೇಹ ಬರುವ ಮೊದಲೇ ಎಚ್ಚರವಹಿಸಿ: ವ್ಯಕ್ತಿಗೆ ಮಧುಮೇಹದ ಯಾವುದೇ ಗುಣಲಕ್ಷಣಗಳಿರದೆ, ಆತನ ರಕ್ತದ ಸಕ್ಕರೆ ಅಂಶವು ಸಾಮಾನ್ಯಕ್ಕಿಂತಲೂ ಸ್ವಲ್ಪ ಹೆಚ್ಚಿದ್ದು, ಆದರೆ ಮಧುಮೇಹ ಎಂದು ಪರಿಗಣಿಸಲು ಬೇಕಾದ ಪ್ರಮಾಣಕ್ಕಿಂತಲೂ ಕಡಿಮೆ ಇದ್ದಾಗ ಅಂತಹ ಸ್ಥಿತಿಯನ್ನು ಮಧುಮೇಹದ ಪೂರ್ವಸ್ಥಿತಿ (ಪ್ರಿ ಡಯಾಬಿಟಿಸ್ ) ಎನ್ನಬಹುದು. ಇಂತಹ ವ್ಯಕ್ತಿ ಸಾಮಾನ್ಯವಾಗಿ ಅತಿಯಾದ ದೇಹತೂಕ, ಹೆಚ್ಚಾದ ಸೊಂಟದ ಸುತ್ತಳತೆ, ರಕ್ತದಲ್ಲಿ ಹೆಚ್ಚಾದ ಕೊಬ್ಬಿನ ಅಂಶ, ಅಧಿಕ ರಕ್ತದೊತ್ತಡವನ್ನು ಹೊಂದಿರುತ್ತಾರೆ. ಈ ಸಮಸ್ಯೆಯಿಂದ ಬಳಲುವ ಶೇ. 50ರಷ್ಟು ಜನರು ಮುಂದಿನ ಹತ್ತು ವರ್ಷಗಳಲ್ಲಿ ಮಧುಮೇಹದಿಂದ ಬಳಲಬಹುದು. ಇನ್ನು ಕೆಲವರು ಮುಂದಿನ ಮೂರು ವರ್ಷಗಳಲ್ಲಿಯೇ ಮಧುಮೇಹಕ್ಕೆ ತುತ್ತಾಗಬಹುದು. ಆದರೆ, ನಿಯಮಿತವಾದ ನಡಿಗೆ ಮತ್ತು ಹೊಟ್ಟೆಯ ಸ್ನಾಯುಗಳಿಗೆ ಸೂಕ್ತ ವ್ಯಾಯಾಮವನ್ನು ಮಾಡಿ ತಮ್ಮ ಸಕ್ಕರೆ ಅಂಶವನ್ನು ನಿಯಂತ್ರಿಸಿ ಮಧುಮೇಹದಿಂದ ದೂರ ಉಳಿದಂತವರೂ ನಮ್ಮೊಂದಿಗಿದ್ದಾರೆ.

ಸಕ್ಕರೆಯ ಅಂಶದ ಮಟ್ಟವನ್ನು ನಿಯಂತ್ರಿಸಿ: ಈಗಾಗಲೇ ಮಧುಮೇಹದಿಂದ ಬಳಲುವವರು ಹೊಟ್ಟೆಯ ಸ್ನಾಯುಗಳಿಗೆ ಸೂಕ್ತ ವ್ಯಾಯಾಮಗಳನ್ನು ಮಾಡಿ, ಸೊಂಟದ ಸುತ್ತಳತೆಯನ್ನು ಕಡಿಮೆ ಮಾಡಿಕೊಳ್ಳಬೇಕು. ಇದರಿಂದ ರಕ್ತದ ಸಕ್ಕರೆ ಅಂಶವನ್ನು ಸುಲಭವಾಗಿ ನಿಯಂತ್ರಿಸುವುದು ಸಾಧ್ಯ. ಹೆಚ್ಚು ಮಾತ್ರೆಗಳು ಮತ್ತು ಇನ್‍ಸುಲಿನ್ ಬಳಸದೆ ಕಾಯಿಲೆಯನ್ನು ಹತೋಟಿಯಲ್ಲಿಡುವುದು ಸಾಧ್ಯ.

ಅಧಿಕ ರಕ್ತದೊತ್ತಡ ಬೇಡ: ನಿಯಮಿತ ವ್ಯಾಯಾಮವು ಹೊಟ್ಟೆಯ ಕೊಬ್ಬನ್ನು ಕರಗಿಸಿ ರಕ್ತದೊತ್ತಡವನ್ನು ನಿಯಂತ್ರಿಸಲೂ ಸಹಕಾರಿಯಾಗಬಲ್ಲದು.

ಹೃದಯವೂ ಕ್ಷೇಮ: ರಕ್ತದೊತ್ತಡ ಮತ್ತು ಸಕ್ಕರೆ ಅಂಶದ ನಿಯಂತ್ರಣದಿಂದ ಹೃದಯಾಘಾತದ ಸಂಭವವೂ ಕಡಿಮೆಯಾಗುತ್ತದೆ.

ಜೀವನಶೈಲಿ ಬದಲಾಗಲಿ

*ಸಾತ್ವಿಕ ಹಾಗೂ ಪೌಷ್ಟಿಕ ಆಹಾರ ನಿಮ್ಮದಾಗಿರಲಿ.

*ಅತಿಯಾದ ಸಿಹಿ ಪದಾರ್ಥಗಳು, ಇಂಗಾಲಯುಕ್ತ ಪಾನೀಯಗಳು, ಅತಿಯಾದ ಉಪ್ಪಿನ ಅಂಶ, ಸಂಸ್ಕರಿಸಿದ ಆಹಾರ, ಹಾಗೂ ಅತಿಯಾದ ಎಣ್ಣೆಯ ಅಂಶವಿರುವ ಆಹಾರ ಪದಾರ್ಥಗಳು ಬೇಡ.

*ನಿಯಮಿತವಾದ ವ್ಯಾಯಾಮವನ್ನು ರೂಢಿಸಿಕೊಳ್ಳಿ. ದಿನಕ್ಕೆ ಕನಿಷ್ಠ ನಲವತ್ತೈದು ನಿಮಿಷಗಳ ವ್ಯಾಯಾಮ ಸೂಕ್ತ. ಬೊಜ್ಜು ಕರಗಿಸುವ ಕಸರತ್ತೂ ನಿಮ್ಮ ವ್ಯಾಯಾಮದ ಭಾಗವಾಗಿರಲಿ.

*ನಿಮ್ಮ ಎತ್ತರ ಮತ್ತು ವಯಸ್ಸಿಗೆ ಸೂಕ್ತವಾದ ದೇಹತೂಕಕ್ಕಾಗಿ ಶ್ರಮಿಸಿ.

*ಇಪ್ಪತ್ತರ ಹರೆಯದಿಂದಲೇ ಬೊಜ್ಜು ಬರದಂತೆ ಕಾಳಜಿವಹಿಸಿ.

*ಮಹಿಳೆಯರು ಪ್ರಸವದ ಬಳಿಕ ಕಡ್ಡಾಯವಾಗಿ ವ್ಯಾಯಾಮ ಮಾಡಿ, ಮೊದಲಿನ ದೇಹತೂಕವನ್ನು ಕಾಪಾಡಿಕೊಳ್ಳಿ.

*ಮದ್ಯಪಾನ ಮತ್ತು ಧೂಮಪಾನವನ್ನು ವರ್ಜಿಸಿ.

*ಕನಿಷ್ಠ ವರ್ಷಕ್ಕೊಮ್ಮೆ ತಪ್ಪದೆ ವೈದ್ಯರಲ್ಲಿ ತೆರಳಿ, ನಿಮ್ಮ ರಕ್ತದೊತ್ತಡ, ದೇಹತೂಕ ಮತ್ತು ರಕ್ತದ ಸಕ್ಕರೆ ಅಂಶದ ಪರೀಕ್ಷೆ ಮಾಡಿಸಿಕೊಳ್ಳಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT