ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಮತ್ತು ಹೃದಯದ ಆರೋಗ್ಯ

Last Updated 28 ಸೆಪ್ಟೆಂಬರ್ 2020, 20:25 IST
ಅಕ್ಷರ ಗಾತ್ರ

ಕೋವಿಡ್- 19 ಎಂಬ ಭೀಕರ ಕಾಯಿಲೆ ಜಗತ್ತಿನ ಎಲ್ಲ ಕಡೆ ಹರಡಿದೆ. ಇದಕ್ಕೆ ಕಾರಣ ಸಾರ್ಸ್‌ ಕೋವ್‌2 ಎಂಬ ವೈರಸ್ ಎಂಬುದು ಗೊತ್ತೇ ಇದೆ. ಈ ವೈರಸ್ ಮುಖ್ಯವಾಗಿ ಶ್ವಾಸಕೋಶದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಜೊತೆಗೆ ಈ ವೈರಸ್ ಹೃದಯಕ್ಕೆ ತೊಂದರೆ ಉಂಟು ಮಾಡುತ್ತದೆ ಎಂಬುದೂ ಪತ್ತೆಯಾಗಿದೆ.

ಹೃದಯದ ಜೀವಕಣಗಳಿಗೆ ಹಾನಿ ಉಂಟಾದಾಗ ಟ್ರೊಪೊನಿಸ್ ಎಂಬ ಅಂಶವು ರಕ್ತದಲ್ಲಿ ಪತ್ತೆಯಾಗುತ್ತದೆ. ಈ ಟ್ರೊಪೊನಿಸ್ ಎಂಬ ಪ್ರೊಟೀನ್ ಆರೋಗ್ಯವಂತರ ರಕ್ತದಲ್ಲಿ ಕಂಡುಬರುವುದಿಲ್ಲ.

l ಕೋವಿಡ್- 19ನಿಂದ ಬಳಲುತ್ತಿರುವ ರೋಗಿಗಳಲ್ಲಿ ಹೃದಯದ ಯಾವುದೇ ತೊಂದರೆ ಇಲ್ಲದಿದ್ದಾಗಲೂ, ಈ ಟ್ರೊಪೊನಿಸ್ ರಕ್ತದಲ್ಲಿ ಪತ್ತೆಯಾಗಿದ್ದು, ಅಂತಹವರಲ್ಲಿ ಕೋವಿಡ್ ರೋಗ ತೀವ್ರತರವಾಗಿರುತ್ತದೆ. ಇವರಿಗೆ ಹೆಚ್ಚಿನ ನಿಗಾ ವಹಿಸಿ ಚಿಕಿತ್ಸೆ ನೀಡಬೇಕಾಗಿರುತ್ತದೆ.

l ಕೋವಿಡ್ ರೋಗಿಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆಯಲ್ಲಿ ಏರುಪೇರಾಗುತ್ತದೆ. ಹೃದಯದ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟಿ ಹೃದಯಾಘಾತ ಉಂಟಾಗಿರುವುದು ವರದಿಯಾಗಿದೆ.

l ಹೃದಯದ ಜೀವಕಣಗಳ ಮೇಲೆ, ಕೊರೊನಾ ವೈರಸ್ ನೇರವಾಗಿ ಲಗ್ಗೆಯಿಟ್ಟು ‘ಮಯಾಕಾರ್ಡೈಟಿಸ್’ ಎಂಬ ತೊಂದರೆಯುಂಟಾಗಿ ಹೃದಯ ವೈಫಲ್ಯತೆ ಉಂಟು ಮಾಡಿರುವುದೂ ವರದಿಯಾಗಿದೆ.

l ನಮ್ಮ ದೇಹದಲ್ಲಿ ಹೊರಗಿನ ಬ್ಯಾಕ್ಟೀರಿಯಾ, ವೈರಸ್ ಹೊಡೆದೋಡಿಸಲು ಗಾಯ ವಾಸಿಮಾಡಲು ಹಾಗೂ ಕ್ಯಾನ್ಸರ್ ಕಣಗಳನ್ನು ಕೊಲ್ಲಲು ಇರುವ ರಕ್ಷಣಾ ಪಡೆಗೆ ಇಮ್ಯುನಿಟಿ ಎನ್ನುತ್ತೇವೆ. ಈ ರಕ್ಷಣಾ ಪಡೆಯ ಹತೋಟಿ ತಪ್ಪಿದರೆ ಆ ಪಡೆಯು ನಮ್ಮ ಅಂಗಾಂಗಗಳ ಮೇಲೆ ಅಡ್ಡ ಪರಿಣಾಮ ಬೀರಿ ಗಾಸಿ ಉಂಟು ಮಾಡುತ್ತವೆ. ಆಗ ಕೊರೊನಾ ಕಾಯಿಲೆಗಿಂತಲೂ ಹೆಚ್ಚಿನ ಹಾನಿಯನ್ನು ನಮ್ಮ ಸ್ವಂತ ಇಮ್ಯುನಿಟಿಯೇ ನಮ್ಮ ದೇಹದ ಮೇಲೆ ಮಾಡುತ್ತದೆ. ಇಂತಹ ಸಂದರ್ಭದಲ್ಲಿ ನಾವು ಸ್ಟೀರಾಯ್ಡ್‌ ಅನ್ನು ಬಳಸಿ ಇಮ್ಯುನಿಟಿಯನ್ನು ಹತೋಟಿಗೆ ತರುತ್ತೇವೆ. ಕೊರೊನಾ ಕಾಯಿಲೆಯಲ್ಲಿಯೂ ಇದೇ ರೀತಿಯ ಇಮ್ಯುನಿಟಿಯಿಂದ ಹೃದಯವೂ ಹಾನಿಗೆ ಒಳಗಾಗಬಹುದಾಗಿದೆ (ಸ್ಟ್ರೆಸ್‌ ಕಾರ್ಡಿಯೊಮಯೋಪಥಿ).

l ಹೃದಯದ ಬಡಿತದ ಏರುಪೇರು ಕೂಡ ಕೊರೊನಾ ಕಾಯಿಲೆಯಲ್ಲಿ ಕಂಡುಬಂದಿದೆ.

l ಕಾಲುಗಳ ರಕ್ತನಾಳ ಹಾಗೂ ಶ್ವಾಸಕೋಶದ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವುದರಿಂದ ಉಂಟಾಗುವ ಹಲವು ಕಾಯಿಲೆಗಳು ಕಂಡುಬಂದಿವೆ.

ಈ ಮೊದಲು ಹೃದಯದ ತೊಂದರೆ ಇಲ್ಲದಿದ್ದರೂ ಕೊರೊನಾ ಇಂತಹ ಹೃದಯ ತೊಂದರೆಗಳನ್ನು ಉಂಟು ಮಾಡಬಹುದು. ಹೃದ್ರೋಗ ಇರುವವರಲ್ಲಿ ಕೊರೊನಾ ಇನ್ನೂ ತೀವ್ರತರದ ಕಾಯಿಲೆ ಉಂಟುಮಾಡಬಹುದು. ಈ ತೊಂದರೆಗಳಲ್ಲಿ ಹಲವು ಕೊರೊನಾ ಚಿಕಿತ್ಸೆಯಿಂದ ಸಂಪೂರ್ಣ ಗುಣಮುಖವಾದರೂ, ಕೆಲವು ಸಂದರ್ಭಗಳಲ್ಲಿ ದೀರ್ಘಕಾಲದ ಹೃದಯದ ಸಮಸ್ಯೆ ಉಂಟಾಗಬಹುದು (ಹೃದಯಾಘಾತ, ಹೃದಯದ ವೈಫಲ್ಯ ಮುಂತಾದವು). ಸದ್ಯಕ್ಕೆ ಅಂತಹವರ ಸಂಖ್ಯೆ ಹೆಚ್ಚಿಲ್ಲದಿರುವುದು ಸಮಾಧಾನಕರ ಸಂಗತಿ.

ಹೃದ್ರೋಗಿಗಳು ತಮಗೆ ತಿಳಿಸಲಾದ ಔಷಧ, ಆಹಾರ ಮತ್ತು ಜೀವನಶೈಲಿಯಲ್ಲಿನ ಬದಲಾವಣೆಗಳನ್ನು ಚಾಚೂ ತಪ್ಪದಂತೆ ಪಾಲಿಸಬೇಕು. ತಂಬಾಕಿನಿಂದ ದೂರ ಇರಬೇಕು. ವೈದ್ಯರು ಹೇಳಿದಂತೆ ವ್ಯಾಯಾಮ, ವೇಗವಾಗಿ ನಡೆಯುವುದನ್ನು ಮುಂದುವರಿಸಬೇಕು.

ಹಣ್ಣು, ತರಕಾರಿ ಸೇವಿಸಿ

ಒತ್ತಡದಿಂದ ಅಥವಾ ಆಗಾಗ ಏನಾದರೂ ತಿನ್ನುತ್ತಿರುವುದು ಮನೆಯಿಂದಲೇ ಕೆಲಸ ಮಾಡುವ ಅವಧಿಯಲ್ಲಿ ಅಭ್ಯಾಸವಾಗಬಹುದು. ಅದೇ ವೇಳೆಯಲ್ಲಿ ಸಿಹಿ ಅಂಶವಿರುವ ಪಾನೀಯಗಳು, ಆಹಾರವು ನಿಮಗೆ ತ್ವರಿತಗತಿಯಲ್ಲಿ ಶಕ್ತಿಯನ್ನು ನೀಡಬಲ್ಲದು. ಆದರೆ ಇದು, ನಿಮ್ಮಲ್ಲಿ ಬೊಜ್ಜಿನ ಅಂಶ ಹೆಚ್ಚುವ ಹಾಗೂ ಹೃದಯ ಸಂಬಂಧಿ ಸಮಸ್ಯೆಗಳನ್ನು ಜಾಸ್ತಿ ಮಾಡುವ ಅಪಾಯವೂ ಇರುತ್ತದೆ. ಇದರ ಬದಲಾಗಿ, ನಿಮ್ಮ ಫ್ರಿಜ್‌ನಲ್ಲಿ ಹಣ್ಣುಗಳು ಮತ್ತು ತರಕಾರಿಗಳನ್ನು ಸಂಗ್ರಹಿಸಿಡಿ. ಊಟದ ನಡುವೆ ಹಣ್ಣು, ಶಕ್ತಿ ನೀಡುವ ನಟ್ಸ್ ಸೇವಿಸಿ.

(ಲೇಖಕ: ಹಿರಿಯ ಸಲಹೆಗಾರರು, ವಯಸ್ಕರ ಹೃದ್ರೋಗ ವಿಭಾಗ, ನಾರಾಯಣ ಹೆಲ್ತ್ ಸಿಟಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT