ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವು ಕಡಿತ: ಜನರು ಏನು ಮಾಡಬಹುದು ಮತ್ತು ಮುಂಜಾಗ್ರತಾ ಕ್ರಮಗಳೇನು?

Last Updated 15 ಮಾರ್ಚ್ 2021, 15:05 IST
ಅಕ್ಷರ ಗಾತ್ರ

ಹಾವುಗಳೆಂದರೆ ಎಂತಹವರಿಗೂ ಭಯವಾಗುವುದು ಸಹಜ. ಅದು ಒಂದು ವಿಷಜಂತುವೆಂದೇ ಪ್ರಸಿದ್ಧ. ಹಾವುಗಳು ಹಳ್ಳಿಗಾಡುಗಳಲ್ಲದೆ ನಗರ ಪ್ರದೇಶದಲ್ಲೂ ಕಾಣಸಿಗುವುದು ಸಹಜ. ಸುತ್ತಮುತ್ತಲಿನ ಕಾಡುಮೇಡುಗಳನ್ನು ನಾಶ ಮಾಡುವುದರಿಂದ ಹಾವುಗಳು ಸಹ ತಮ್ಮ ಸಹಜ ವಾಸ ಸ್ಥಳಗಳನ್ನು ಕಳೆದುಕೊಂಡು ನಗರ ಪ್ರದೇಶಗಳಿಗೆ ನುಗ್ಗುವುದುಂಟು.

ಪ್ರಪಂಚದಲ್ಲಿ ಸುಮಾರು 2000 ರೀತಿಯ ಹಾವುಗಳಿದ್ದು ಭಾರತದಲ್ಲಿ 300 ಪ್ರಭೇದಗಳನ್ನು ಕಾಣಬಹುದು ಅದರಲ್ಲಿಯೂ 50 ಪ್ರಭೇದಗಳು ವಿಷಕಾರಕವಾಗಿರುತ್ತವೆ. ಸಾಮಾನ್ಯವಾಗಿ ಭಾರತದಲ್ಲಿ ಅದರಲ್ಲೂ ದಕ್ಷಿಣ ಭಾರತದಲ್ಲಿ ನಾಗರಹಾವು, ಕಟ್ಟು ಹಾವು, ಕಾಳಿಂಗಸರ್ಪ, ಕೊಳಕಮಂಡಲ ಸಾಮಾನ್ಯ.

ಹಾವುಗಳು ಕಡಿದೊಡನೆ ಹಲವು ಬಾರಿ ಹಾವು ವಿಷಕಾರಿಯಲ್ಲದಿದ್ದರೂ ವ್ಯಕ್ತಿಯು ಆತಂಕದಿಂದ ಮಾನಸಿಕವಾಗಿ ಕುಗ್ಗಿ ಪ್ರಾಣ ಕಳೆದುಕೊಳ್ಳುವುದುಂಟು. ಹಾವು ಕಡಿತವಾದೊಡನೆ ಸಾಮಾನ್ಯವಾಗಿ ಮಾಡಬಹುದಾದ್ದೇನು ಹಾಗೂ ಏನನ್ನು ಮಾಡಬಾರದು ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಹಾವು ಕಡಿತ ಹೇಗೆ ಕಾಣಿಸಿಕೊಳ್ಳಬಹುದು?

ಹಾವು ಕಡಿತದ ರೋಗಲಕ್ಷಣಗಳ ತೀವ್ರತೆಯು ಯಾವ ಹಾವಿನ ಪ್ರಭೇದ, ಎಷ್ಟು ವಿಷ ಶರೀರವನ್ನು ಒಳ ಹೊಕ್ಕಿದೆ, ಯಾವ ಜಾಗಕ್ಕೆ ಕಡಿತ ಉಟಾಗಿದೆ, ಒಮ್ಮೆ ಕಚ್ಚಿದೆಯೋ ಅಥವಾ ಹಲವಾರು ಬಾರಿ ಕಚ್ಚಿದೆಯೋ, ಕಚ್ಚಿದ ನಂತರ ಎಷ್ಟು ಸಮಯ ಕಳೆದಿದೆ ಎಂಬ ಎಲ್ಲ ಮಾಹಿತಿಗಳ ಮೇಲೆ ನಿರ್ಧಾರವಾಗುತ್ತದೆ.

ಸಾಮಾನ್ಯವಾಗಿ ಹಾವು ಕಡಿತ ಹೊಲಗದ್ದೆಗಳಲ್ಲಿ ಕೆಲಸ ಮಾಡುವ ರೈತಾಪಿ ಜನರಲ್ಲಿ ಸಾಮಾನ್ಯವಾಗಿ ನೆಲದಲ್ಲಿ ಮಲಗುವ ಅಭ್ಯಾಸವಿರುವವರಲ್ಲಿ, ಬರಿಗಾಲಿನಲ್ಲಿ ನಡೆಯುವವರಲ್ಲಿ, ಪೊದೆಗಿಡಗಳಿಗೆ ನೀರೆರೆಯುಲು ಹೋದಾಗ ಉಂಟಾಗಬಹುದಾಗಿದೆ.

ಸಾಮಾನ್ಯವಾಗಿ ಹಾವು ಕಡಿತಕ್ಕೆ ಒಳಗಾದವರಲ್ಲಿ ಸುಸ್ತು, ದುರ್ಬಲತೆ, ರಕ್ತಸ್ರಾವ, ಉರಿ, ಊತ, ಮಾಂಸಖಂಡಗಳ ದೌರ್ಬಲ್ಯ ಉಂಟಾಗಬಹುದಾಗಿದೆ.

ಹಾವು ಕಡಿತಕ್ಕೆ ಒಳಗಾದ ವ್ಯಕ್ತಿಯ ಜೊತೆಯಲ್ಲಿರುವವರು ರೋಗಿಗೆ ಮಾನಸಿಕ ಧೈರ್ಯ ತುಂಬುವುದು ಅತಿಮುಖ್ಯ. 70% ವಿಷಕಾರಿಯಲ್ಲದ ಹಾವುಗಳಿರುತ್ತವೆ.

ಹಾವು ಕಡಿತದ ಗಾಯ ಗುರುತಿಸುವುದು ಬಹಳ ಮುಖ್ಯ.

ಕಡಿತಕ್ಕೊಳಗಾದ ಅಂಗವನ್ನು ನಿಶ್ಚಲಗೊಳಿಸುವುದು ಅತಿ ಮುಖ್ಯ. ಮುರಿದ ಮೂಳೆಯನ್ನು ಅಥವಾ ಫ್ರಾಕ್ಚರ್ ಅನ್ನು ಹೇಗೆ ನಿಶ್ಚಲಗೊಳಿಸಲಾಗುತ್ತದೆ ಹಾಗೆ ನಿಶ್ಚಲಗೊಳಿಸುವುದು ಮುಖ್ಯ. ಅದನ್ನು ಮಾಡಲು ಬ್ಯಾಂಡೇಡ್ ಮುಂತಾದವುಗಳನ್ನು ಬಳಸಬಹುದು.

ರಕ್ತ ಸಂಚಲನವನ್ನು ಕಡಿಮೆ ಮಾಡುವುದು ಅಥವಾ ದಾರ ಕಟ್ಟುವುದು ಇದನ್ನು ಮಾಡಬಾರದು.

ರೋಗಿಯನ್ನು ಎಡ ಮಗ್ಗಲಿಗೆ ಮಲಗಿಸುವುದರಿಂದ ಉಸಿರಾಟದ ತೊಂದರೆಯಾಗುವುದನ್ನು ತಪ್ಪಿಸಬಹುದು.

ಹಾವು ಕಡಿತಕ್ಕೆ ಒಳಗಾದ ವ್ಯಕ್ತಿಯು ಓಡುವುದು, ತಾವೇ ಸ್ವತಃ ವಾಹನ ಚಲಾಯಿಸುವುದು ಅಪಾಯಕಾರಿ.

ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ಆಸ್ಪತ್ರೆಗೆ ರೋಗಿಯನ್ನು ಕರೆದೊಯ್ಯುವುದು ಅತಿಮುಖ್ಯ.

ಕಾಲಿಗೆ ಹಾಕಿರುವ ಚಪ್ಪಲಿ, ಷೂ, ಉಂಗುರ, ಕೈಯಲ್ಲಿನ ವಾಚ್, ಆಭರಣಗಳು, ಬಿಗಿಯಾದ ಬಟ್ಟೆಗಳನ್ನು ತೆಗೆಯುವುದು ಉತ್ತಮ.

ಯಾವುದನ್ನು ಮಾಡಬಾರದು:

ಕಡಿದ ಹಾವನ್ನು ಸಾಯಿಸಲು ಹೋಗುವುದು ಅಪಾಯಕಾರಿ.

ಗಿಡಮೂಲಿಕೆ ಔಷಧಿಗಳ ಲೇಪನ ಹಾನಿಕಾರಕ.

ಗಾಯವನ್ನು ತೊಳೆಯುವುದು, ಉಜ್ಜುವುದು ಹಾನಿಕಾರಕ.

ಹಾವು ಕಡಿದ ಜಾಗಕ್ಕೆ ನೇರವಾಗಿ ಔಷಧಿಗಳನ್ನು ಹಚ್ಚುವುದು ಅಪಾಯಕಾರಿ.

ದಾರದಿಂದ ಕಟ್ಟುವುದು ಬಹಳ ಪ್ರಚಲಿತ ಆದರೆ ಇದರಿಂದ ಕಾವು ಕಡಿತಕ್ಕೆ ಒಳಗಾದ ಅಂಗವು ರಕ್ತಸಂಚಲನದಿಂದ ಕುಂಟಿತವಾಗಿ ಕೊಳೆತು ಹೋಗುವ ಸಾಧ್ಯತೆ ಹೆಚ್ಚು.

ರೋಗಿಯನ್ನು 30 ನಿಮಿಷದಿಂದ ಮೂರು ಗಂಟೆಯ ಒಳಗಾಗಿ ಆಸ್ಪತ್ರೆಗೆ ಕೊಂಡೊಯ್ಯಬಹುದಾಗಿದ್ದರೆ ಮಾತ್ರ ಬ್ಯಾಂಡೇಜನ್ನು ಕಟ್ಟಬಹುದಾಗಿದೆ.

ಪ್ರಾಥಮಿಕ ಆಸ್ಪತ್ರೆಗಳಲ್ಲಿ ಮಾಡಬಹುದಾದ್ದೇನು ?

ಯಾವುದೇ ರೋಗಲಕ್ಷಣಗಳಿಲ್ಲದಿದ್ದರೆ 24 ಗಂಟೆಗಳ ಕಾಲ ವೀಕ್ಷಣೆಯಲ್ಲಿಡಬಹುದು.

ರೋಗಲಕ್ಷಣಗಳನ್ನು ಗುರುತಿಸುವುದು ಅತಿ ಮುಖ್ಯ.

ಉಸಿರಾಟದ ತೊಂದರೆ, ನರದೌರ್ಬಲ್ಯ, ಬೆಂಡಾಗುವುದು, ರಕ್ತದೊತ್ತಡದಲ್ಲಿ ಏರುಪೇರು, ಉರಿ, ಊತ, ಉಷ್ಟಾಂಶದಲ್ಲಿ ಏರುಪೇರು, ಕಣ್ಣುಗಳ ರೆಪ್ಪೆ ಮುಚ್ಛಲ್ಪಡುವುದು (Ptosis) ಮುಂತಾದವು ಕಂಡುಬಂದಲ್ಲಿ ಆ್ಯಂಟಿ ಸ್ನೇಕ್ ವೀನೋಮ್ (ASV) ಎಂಬ ಔಷಧಿಯನ್ನು ಯಾವುದೇ ಅಡ್ಡ ಪರಿಣಾಮಗಳು ಆಗದಂತೆ ಮುಂಜಾಗರೂಕಾ ಕ್ರಮಗಳೊಂದಿಗೆ ಕೊಟ್ಟು ತುರ್ತು ನಿಗಾ ಘಟಕಕ್ಕೆ ವರ್ಗಾಯಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT