ತುಮಕೂರು: ಜಿಲ್ಲೆಯಲ್ಲಿ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚುತ್ತಲೇ ಸಾಗಿದ್ದು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸೈಬರ್ ಬಲೆಗೆ ಬಿದ್ದು, ಲಕ್ಷಾಂತರ ರೂಪಾಯಿ ಕಳೆದುಕೊಳ್ಳುತ್ತಿದ್ದಾರೆ.
ನಗರದ ಚಿಕ್ಕಪೇಟೆಯ ಪಿ.ಜೆ.ಪವಿತ್ರಾ ನಾಗು ಎಂಬ ಯುವತಿಗೆ ಸೈಬರ್ ಕಳ್ಳರು ₹9.26 ಲಕ್ಷ ವಂಚಿಸಿದ್ದಾರೆ. ಪವಿತ್ರಾ ಅವರನ್ನು ವಾಟ್ಸ್ ಆ್ಯಪ್ ಮುಖಾಂತರ ಪರಿಚಯಿಸಿಕೊಂಡು, ಗೂಗಲ್ ಪ್ರಮೋಷನ್ನಿಂದ ಚಾಟಿಂಗ್ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ಲಿಂಕ್ ಕಳುಹಿಸಿ ಜಾಹೀರಾತುಗಳಿಗೆ ರೇಟಿಂಗ್ ನೀಡಿದರೆ ಹಣ ಕೊಡುವುದಾಗಿ ನಂಬಿಸಿದ್ದಾರೆ. 5 ಸ್ಟಾರ್ ರೇಟಿಂಗ್ ನೀಡಿದ ನಂತರ ಅವರ ಬ್ಯಾಂಕ್ ವಿವರ ಪಡೆದು ₹203 ಜಮಾ ಮಾಡಿದ್ದಾರೆ.
ನಂತರ ಟೆಲಿಗ್ರಾಂ ಮೂಲಕ ಲಿಂಕ್ ಕಳುಹಿಸಿ ರೇಟಿಂಗ್ ನೀಡಿ, ಸ್ಕ್ರೀನ್ ಶಾರ್ಟ್ ಕಳುಹಿಸಿದರೆ ಆಯಾ ದಿನದ ಲಾಭವನ್ನು ಅಂದೇ ವರ್ಗಾವಣೆ ಮಾಡಲಾಗುವುದು ಎಂದು ಹೇಳಿದ್ದಾರೆ. ಟಾಸ್ಕ್ ಮೇಲೆ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಗಳಿಸಬಹುದು ಎಂದೂ ತಿಳಿಸಿದ್ದಾರೆ.
ಇದನ್ನು ನಂಬಿ ಸೈಬರ್ ವಂಚಕರು ಹೇಳಿದ ವಿವಿಧ ಯುಪಿಐ ಐಡಿ ಮತ್ತು ಬ್ಯಾಂಕ್ ಖಾತೆಗಳಿಗೆ ಪವಿತ್ರಾ ತಮ್ಮ ಖಾತೆ ಮತ್ತು ಅವರ ತಾಯಿ, ಸ್ನೇಹಿತರ ಖಾತೆಗಳಿಂದ ಫೆ. 26ರಿಂದ 29ರ ವರೆಗೆ ಒಟ್ಟು ₹9,26,923 ವರ್ಗಾವಣೆ ಮಾಡಿದ್ದಾರೆ. ಆದರೆ ಅವರಿಗೆ ಯಾವುದೇ ಹಣ ಹಿಂದಿರುಗಿಸಿಲ್ಲ.
‘ಹಣ ವರ್ಗಾವಣೆ ಮಾಡಿಸಿಕೊಂಡು ವಾಪಸ್ ಕೊಡದೆ ವಂಚಿಸಿದವರ ವಿರುದ್ಧ ಕ್ರಮಕೈಗೊಳ್ಳಬೇಕು’ ಎಂದು ಕೋರಿ ಪವಿತ್ರಾ ಸೈಬರ್ ಠಾಣೆಗೆ ದೂರು ನೀಡಿದ್ದಾರೆ.