ಈ ಫಲಿತಾಂಶವು ಕಮಲನಾಥ್, ಅಶೋಕ್ ಗೆಹಲೋತ್, ಭೂಪೇಶ್ ಬಘೆಲ್, ಎ. ರೇವಂತ್ ರೆಡ್ಡಿ (ಎಲ್ಲ ಕಾಂಗ್ರೆಸ್ ನಾಯಕರು), ಶಿವರಾಜ ಸಿಂಗ್ ಚೌಹಾಣ್, ನರೇಂದ್ರ ಸಿಂಗ್ ತೋಮರ್, ವಸುಂಧರಾ ರಾಜೇ ಸಿಂಧಿಯಾ, ರಮಣ್ ಸಿಂಗ್ (ಎಲ್ಲ ಬಿಜೆಪಿ ನಾಯಕರು) ಹಾಗೂ ಕೆ.ಚಂದ್ರಶೇಖರ್ ರಾವ್ (ಬಿಆರ್ಎಸ್) ಅವರ ವರ್ಚಸ್ಸು ಎಷ್ಟಿದೆ ಎಂಬುದನ್ನು ತೋರಿಸಿಕೊಡಲಿದೆ.
ನಾಲ್ಕು ರಾಜ್ಯಗಳ 638 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 7,643 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಅವರ ಭವಿಷ್ಯ ಭಾನುವಾರ ನಿರ್ಧಾರ ವಾಗಲಿದೆ. ಮತ ಎಣಿಕೆ ಬೆಳಿಗ್ಗೆ 8 ಗಂಟೆಗೆ ಆರಂಭವಾಗಲಿದೆ.
ಈ ರಾಜ್ಯಗಳು ಒಟ್ಟಾಗಿ 82 ಲೋಕಸಭಾ ಸ್ಥಾನಗಳನ್ನು ಹೊಂದಿವೆ. ಈ ಕ್ಷೇತ್ರಗಳ ಪೈಕಿ, 2019ರ ಚುನಾವಣೆಯಲ್ಲಿ ಬಿಜೆಪಿ 66 ಸ್ಥಾನಗಳನ್ನು ಮತ್ತು ಕಾಂಗ್ರೆಸ್ 6 ಸ್ಥಾನಗಳನ್ನು ಜಯಿಸಿದ್ದವು. ಉಳಿದ ಸ್ಥಾನಗಳು ಪ್ರಾದೇಶಿಕ ಪಕ್ಷಗಳ ಪಾಲಾಗಿದ್ದವು.
ಐದು ರಾಜ್ಯಗಳ ಮತದಾನ ಪ್ರಕ್ರಿಯೆ ಮುಗಿದ ಬೆನ್ನಲ್ಲೇ, ವಿವಿಧ ವಿದ್ಯುನ್ಮಾನ ಮಾಧ್ಯಮಗಳು ನಡೆಸಿದ ಮತಗಟ್ಟೆ ಸಮೀಕ್ಷೆ ಪ್ರಕಟವಾಗಿದೆ. ತೆಲಂಗಾಣ ಹಾಗೂ ಛತ್ತೀಸಗಢ ರಾಜ್ಯಗಳ ಮತದಾರರು ಕಾಂಗ್ರೆಸ್ ಪಕ್ಷವನ್ನು ಗದ್ದುಗೆಯ ಸನಿಹಕ್ಕೆ ಕರೆದೊಯ್ಯುವ ಸಾಧ್ಯತೆ ಇದೆ ಎಂದು ಬಹುತೇಕ ಮತಗಟ್ಟೆ ಸಮೀಕ್ಷೆಗಳು ಹೇಳಿವೆ. ‘ಕೈ’ ಪಾಳಯದ ಪ್ರಬಲ ಸ್ಪರ್ಧೆಯ ನಡುವೆಯೂ ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ ಬಿಜೆಪಿಯು ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಸಮೀಕ್ಷೆಗಳು ‘ಭವಿಷ್ಯ’ ನುಡಿದಿವೆ.
ಮಧ್ಯಪ್ರದೇಶದಲ್ಲಿ ಪ್ರಸ್ತುತ ಬಿಜೆಪಿ ಅಧಿಕಾರದಲ್ಲಿದ್ದರೆ, ಕಾಂಗ್ರೆಸ್ ಪಕ್ಷವು ರಾಜಸ್ಥಾನ ಮತ್ತು ಛತ್ತೀಸ್ಗಢದಲ್ಲಿ ಆಡಳಿತ ನಡೆಸುತ್ತಿದೆ. ತೆಲಂಗಾಣದಲ್ಲಿ ಬಿಆರ್ಎಸ್ 10 ವರ್ಷಗಳಿಂದ ಅಧಿಕಾರದಲ್ಲಿದೆ.
‘ತೆಲಂಗಾಣ ವಿಧಾನಸಭೆಗೆ ನಡೆದ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ರಾಜ್ಯದ ಕಾಂಗ್ರೆಸ್ ನಾಯಕರು ಹೈದರಾಬಾದ್ಗೆ ತೆರಳಿದ್ದಾರೆ. ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಲ್ಲದೆ, ಸಚಿವರಾದ ಎನ್.ಎಸ್. ಬೋಸರಾಜು, ಡಾ.ಎಂ.ಸಿ ಸುಧಾಕರ್, ಶಾಸಕರಾದ ಕೆ.ವೈ. ನಂಜೇಗೌಡ, ಪ್ರದೀಪ್ ಈಶ್ವರ್ ಈ ಹೈಕಮಾಂಡ್ ಸೂಚನೆ ನೀಡಿರುವ ಕಾರಣ ಈಗಾಗಲೇ ಹೈದರಾಬಾದ್ಗೆ ತೆರಳಿದ್ದಾರೆ.