ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮಮಯವಾದ ಅಯೋಧ್ಯೆ

Published 27 ಡಿಸೆಂಬರ್ 2023, 22:07 IST
Last Updated 27 ಡಿಸೆಂಬರ್ 2023, 22:07 IST
ಅಕ್ಷರ ಗಾತ್ರ

ಅಯೋಧ್ಯೆ: ‘ಒಂದು ದಿನ ಬೆಳಿಗ್ಗೆ ಬಂದು ನನ್ನ ಕ್ಲಿನಿಕ್‌ನ ಬಾಗಿಲು ತೆರೆಯುವುದಕ್ಕೆ ಮುಂದಡಿ ಇಡುತ್ತಿದ್ದೇನಷ್ಟೆ, ನನಗೆ ಆಶ್ಚರ್ಯ ಕಾದಿತ್ತು. ನನ್ನ ಅಂಗಡಿಯ ರೋಲಿಂಗ್‌ ಶೆಟರ್‌ನಲ್ಲಿ ಹನುಮದೇವನ ಚಿತ್ರ ಬಿಡಿಸಲಾಗಿತ್ತು. ಹನುಮಗಿರಿಯಲ್ಲಿಯೇ ಬೆಳೆದ ನನಗೆ ಇದು ಬಹಳ ಸಂತಸ ತಂದಿತ್ತು’. ಹೀಗೆನ್ನುತ್ತಾ ತಮ್ಮ ಹಣೆಯ ಮೇಲಿದ್ದ ‘ಜೈ ಶ್ರೀರಾಮ್‌’ ಎನ್ನುವ ಗಂಧದ ಮುದ್ರೆಯನ್ನು ತೋರಿಸಿದರು ಡಾ. ಸುನೀಲ್‌ ಕುಮಾರ್‌ ತೋಮರ್‌.

ರಾಮಮಂದಿರದ ಉದ್ಘಾಟನೆ ದಿನ ಸಮೀಪಿಸುತ್ತಿದ್ದಂತೆ ಇಡೀ ಅಯೋಧ್ಯೆಯು ರಾಮಮಯವಾಗಿ ಸಿಂಗಾರಗೊಳ್ಳುತ್ತಿದೆ. ಇದಕ್ಕಾಗಿ ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರ, ಲೋಕೋಪಯೋಗಿ ಇಲಾಖೆ ರಾತ್ರಿ ಹಗಲು ಶ್ರಮಿಸುತ್ತಿವೆ. ಕಳೆದ ಎರಡು ವರ್ಷಗಳಿಂದ ಅಯೋಧ್ಯೆಯನ್ನು ಮರುಅಭಿವೃದ್ಧಿಪಡಿಸುವ ಕಾರ್ಯವು ಸಾಗುತ್ತಲೇ ಇದೆ. ದೇವಸ್ಥಾನಕ್ಕೇ ಸೇರುವ ಕೆಲವು ಮಾರ್ಗಗಳ ಹೆಸರನ್ನು ರಾಮಪಥ, ಭಕ್ತಿಪಥ, ಧರ್ಮಪಥ ಹಾಗೂ ಶ್ರೀರಾಮಜನ್ಮಭೂಮಿ ಪಥ ಎಂದು ಬದಲಿಸಲಾಗಿದೆ. ಇಲ್ಲಿನ ಪ್ರತಿ ದೇವಸ್ಥಾನದಲ್ಲಿಯೂ ‘ಸೀತಾರಾಮ’ ಭಜನೆಯು ಮಾರ್ದನಿಸುತ್ತಿದೆ.

ದೇವಸ್ಥಾನವನ್ನು ಸೇರುವ ಎಲ್ಲ ಮಾರ್ಗಗಳಲ್ಲೂ ಇರುವ ಪ್ರತೀ ಅಂಗಡಿಗಳ ಶೆಟರ್‌ಗಳ ಮೇಲೆ ಹಿಂದಿಯಲ್ಲಿ ‘ಜೈ ಶ್ರೀರಾಮ’ ಎಂಬ ಬರವಣಿಗೆಯೊಂದಿಗೆ ರಾಮಮಂದಿರದ ಚಿತ್ರ, ಸ್ವಸ್ತಿಕ್‌ ಚಿಹ್ನೆ, ಶಂಖ, ಗಧೆ, ಹಾರಾಡುತ್ತಿರುವ ಕೇಸರಿ ಧ್ವಜದ ಚಿತ್ರ, ಸೂರ್ಯ, ಬಿಲ್ಲು–ಬಾಣ ಹಾಗೂ ತಿಲಕದ ಚಿತ್ರಗಳನ್ನು ಬಿಡಿಸಲಾಗುತ್ತಿದೆ. ಪ್ರತಿ ಅಂಗಡಿಗಳ ಹೆಸರಿನ ಬೋರ್ಡ್‌ಗಳು ಒಂದೇ ವಿನ್ಯಾಸದಲ್ಲಿ ಇರುವಂತೆ ನೋಡಿಕೊಳ್ಳಲಾಗಿದೆ. ಈ ಬೋರ್ಡ್‌ನಲ್ಲಿ ಅಂಗಡಿಯ ಹೆಸರಿನೊಂದಿಗೆ ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರದ ಲೋಗೊ ಇರುವಂತೆಯೂ ಮಾಡಲಾಗಿದೆ.

ಮಮತಾ ಗೈರು: ‘ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮಂದಿರದ ಉದ್ಘಾಟನಾ ಕಾರ್ಯಕ್ರಮಕ್ಕೆ ಗೈರಾಗಲಿದ್ದಾರೆ. ಮುಖ್ಯಮಂತ್ರಿಯೂ ಸೇರಿದಂತೆ ರಾಜ್ಯ ಸರ್ಕಾರದ ಯಾವ ಪ್ರತಿನಿಧಿಯೂ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ’ ಎಂದು ಟಿಎಂಸಿ ಪಕ್ಷದ ಮೂಲಗಳು ತಿಳಿಸಿವೆ.

ಅಯೋಧ್ಯೆಯ ರಾಮಮಂದಿರಕ್ಕೆ ಸೇರುವ ಧರ್ಮಪಥ ರಸ್ತೆಯ ಉದ್ದಕ್ಕೂ ‘ಸೂರ್ಯಸ್ತಂಭ’ವನ್ನು ಅಳವಡಿಸಲಾಗುತ್ತಿದೆ. ಒಂದೊಂದು ಕಂಬದ ಮೇಲೆ ಸೂರ್ಯನನ್ನೇ ಹೋಲುವ ಸೂರ್ಯನಂತೆಯೇ ಬೆಳಗುವ ಆಕೃತಿಯನ್ನು ಅಳವಡಿಸಲಾಗುವುದು. ಪ್ರತಿ ಕಂಬದ ಮೇಲೂ ಗಧೆಯ ಅಚ್ಚನ್ನು ಹಾಕಲಾಗಿದೆ. ಜೊತೆಗೆ ‘ಜೈ ಶ್ರೀರಾಮ್‌’ ಎಂದೂ ಅಚ್ಚು ಹಾಕಲಾಗಿದೆ. ‘ಪ್ರಧಾನಿ ಮೋದಿ ಅವರು ಡಿ.30ಕ್ಕೆ ಅಯೋಧ್ಯೆಯ ಭೇಟಿ ನೀಡಲಿದ್ದಾರೆ. ಈ ವೇಳೆ ಇದೇ ರಸ್ತೆಯಲ್ಲಿ ಅವರು ರೋಡ್‌ಶೋ ನಡೆಸಲಿದ್ದಾರೆ. ಆದ್ದರಿಂದ ಡಿ.29ರ ಒಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ –ಪಿಟಿಐ ಚಿತ್ರ
ಅಯೋಧ್ಯೆಯ ರಾಮಮಂದಿರಕ್ಕೆ ಸೇರುವ ಧರ್ಮಪಥ ರಸ್ತೆಯ ಉದ್ದಕ್ಕೂ ‘ಸೂರ್ಯಸ್ತಂಭ’ವನ್ನು ಅಳವಡಿಸಲಾಗುತ್ತಿದೆ. ಒಂದೊಂದು ಕಂಬದ ಮೇಲೆ ಸೂರ್ಯನನ್ನೇ ಹೋಲುವ ಸೂರ್ಯನಂತೆಯೇ ಬೆಳಗುವ ಆಕೃತಿಯನ್ನು ಅಳವಡಿಸಲಾಗುವುದು. ಪ್ರತಿ ಕಂಬದ ಮೇಲೂ ಗಧೆಯ ಅಚ್ಚನ್ನು ಹಾಕಲಾಗಿದೆ. ಜೊತೆಗೆ ‘ಜೈ ಶ್ರೀರಾಮ್‌’ ಎಂದೂ ಅಚ್ಚು ಹಾಕಲಾಗಿದೆ. ‘ಪ್ರಧಾನಿ ಮೋದಿ ಅವರು ಡಿ.30ಕ್ಕೆ ಅಯೋಧ್ಯೆಯ ಭೇಟಿ ನೀಡಲಿದ್ದಾರೆ. ಈ ವೇಳೆ ಇದೇ ರಸ್ತೆಯಲ್ಲಿ ಅವರು ರೋಡ್‌ಶೋ ನಡೆಸಲಿದ್ದಾರೆ. ಆದ್ದರಿಂದ ಡಿ.29ರ ಒಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ –ಪಿಟಿಐ ಚಿತ್ರ
ಅಯೋಧ್ಯೆಯ ಬೀದಿ ಬೀದಿಗಳ ಅಂಗಡಿಗಳ ರೋಲಿಂಗ್‌ ಶೆಟರ್‌ಗಳ ಮೇಲೆ ಬಿಡಿಸಲಾಗಿರುವ ಚಿತ್ರಗಳು –ಪಿಟಿಐ ಚಿತ್ರ
ಅಯೋಧ್ಯೆಯ ಬೀದಿ ಬೀದಿಗಳ ಅಂಗಡಿಗಳ ರೋಲಿಂಗ್‌ ಶೆಟರ್‌ಗಳ ಮೇಲೆ ಬಿಡಿಸಲಾಗಿರುವ ಚಿತ್ರಗಳು –ಪಿಟಿಐ ಚಿತ್ರ
ಅಯೋಧ್ಯೆಯ ರಾಮಪಥದ ಅಂಗಡಿಗಳ ಮೇಲೆ ಬಿಡಿಸಲಾಗುತ್ತಿರುವ ಎಲ್ಲ ಕಲಾತ್ಮಕ ಕೆಲಸಗಳನ್ನು ಸರ್ಕಾರ ನಿಯೋಜಿಸಿದ ‘ಕಲಾವಿದರೇ’ ಮಾಡುತ್ತಿದ್ದಾರೆ
ರಾಮ್‌ ಬಾಬು, ಸಿಹಿತಿನಿಸು ಅಂಗಡಿಯ ಕೆಲಸಗಾರ 
ರಾಮದೇವರ ಮಂದಿರದ ಕಾಮಗಾರಿಯ ಭಾಗವಾಗಿರುವುದು ನಮಗೆ ಹೆಮ್ಮೆ. ಭಾರಿ ಗಾತ್ರದ ವಸ್ತುಗಳನ್ನು ಎತ್ತಿ ದಣಿದರೆ ನಾವೆಲ್ಲರೂ ‘ಜೈ ಶ್ರೀರಾಮ್‌’ ‘ಜೈ ಹನುಮಾನ್‌’ ಎಂದು ಜಪಿಸುತ್ತೇವೆ
ಸೋನು ಶರ್ಮಾ, ಕಾರ್ಮಿಕ

‘ಸೂಚನಾಫಲಕ: ಕನ್ನಡದಲ್ಲಿ ಯಾಕಿಲ್ಲ?’

‘ಭಕ್ತರಿಗಾಗಿ ಸೂಚನಾ ಫಲಕಗಳನ್ನು ಅಳವಡಿಸಲಾಗುವುದು. ದೇಶದ ಬೇರೆ ಬೇರೆ ಭಾಗಗಳಿಂದ ಭಕ್ತರು ಇಲ್ಲಿಗೆ ಬರುವುದರಿಂದ ಬೇರೆ ಬೇರೆ ಭಾಷೆಗಳಲ್ಲಿ ಫಲಕಗಳು ಇರಲಿವೆ. ದಕ್ಷಿಣ ಭಾಗದಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರಲಿದ್ದಾರೆ. ಆದ್ದರಿಂದ ಆ ಭಾಗದಲ್ಲಿ ಹೆಚ್ಚಿನ ಜನರು ಮಾತನಾಡುವ ತೆಲುಗು ಹಾಗೂ ತಮಿಳು ಭಾಷೆಗಳಲ್ಲೂ ಫಲಕಗಳು ಇರಲಿವೆ’ ಎಂದು ಎಡಿಜಿಪಿ ಪೀಯೂಷ್‌ ಮೋರ್ಡಿಯಾ ಅವರು ತಿಳಿಸಿದ್ದಾರೆ. ಈ ಬಗ್ಗೆ ಕರ್ನಾಟಕದ ಜನರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಡಿ.22ರಂದು ಈ ಕುರಿತು ಉದ್ಯಮಿ ಮೋಹನ್‌ದಾಸ್ ಪೈ ಅವರು ತಮ್ಮ ‘ಎಕ್ಸ್‌’ ಖಾತೆಯಲ್ಲಿ ಬರೆದುಕೊಂಡಿದ್ದರು. ‘ಫಲಕಗಳು ಕನ್ನಡ ಹಾಗೂ ಮಲೆಯಾಳದಲ್ಲಿಯೂ ಇರಬೇಕು’ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್‌ ಪ್ರಧಾನಿ ನರೇಂದ್ರ ಮೋದಿ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್‌ ಜೋಷಿ ಸಂಸದರಾದ ತೇಜಸ್ವಿ ಸೂರ್ಯ ಹಾಗೂ ಪಿ.ಸಿ. ಮೋಹನ್‌ ಅವರನ್ನು ಟ್ಯಾಗ್‌ ಮಾಡಿ ಟ್ವೀಟ್‌ ಮಾಡಿದ್ದರು. ‘ದಕ್ಷಿಣ ಭಾರತ ಎಂದರೆ ಬರೀ ತಮಿಳು ಅಥವಾ ತೆಲುಗು ಅಲ್ಲ. ಕನ್ನಡಿಗರೂ ದಕ್ಷಿಣ ಭಾರತದ ಪ್ರಮುಖ ಭಾಗವೇ ಆಗಿದ್ದಾರೆ. ಕಲೆ ವಿಷಯಗಳಲ್ಲಿ ಮತ್ತು ಆರ್ಥಿಕವಾಗಿ ಕರ್ನಾಟಕವು ಈ ದೇಶಕ್ಕೆ ಮಹತ್ತರವಾದ ಕೊಡುಗೆ ನೀಡಿದೆ’ ಎಂದು ‘ಎಕ್ಸ್‌’ ಬಳಕೆದಾರರೊಬ್ಬರು ಮೋಹನ್‌ದಾಸ್‌ ಪೈ ಅವರ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಮುಸ್ಲಿಂ ದರ್ಜಿ ಸಿದ್ಧಪಡಿಸಿದ ಹನುಮಧ್ವಜ

ರಾಮಮಂದಿರದ ಉದ್ಘಾಟನೆಯ ದಿನದಂದು ಮಂದಿರದಿಂದ 100 ಅಡಿ ಎತ್ತರದ ಕಂಬದ ಮೇಲೆ ಹಾರಿಸುವ ಹನುಮದೇವರ ಧ್ವಜವನ್ನು ಸಿದ್ಧಪಡಿಸಿದ್ದು 55 ವರ್ಷದ ಗುಲಾಮ್‌ ಜಿಲಾನಿ ಎಂಬ ಮುಸ್ಲಿಂ ದರ್ಜಿ. ‘ನಾನು ಸಿದ್ಧಪಡಿಸಿದ ಧ್ವಜವು 100 ಕೋಟಿ ಜನರ ಕನಸಾಗಿರುವ ಐತಿಹಾಸಿಕ ರಾಮಮಂದಿರದಲ್ಲಿ ಹಾರಾಡಲಿದೆ ಎನ್ನುವುದೇ ನನಗೆ ಹೆಮ್ಮೆಯ ಸಂಗತಿ. ನನಗೆ ಅವಕಾಶ ಸಿಕ್ಕರೆ ಖಂಡಿತ ಅಯೋಧ್ಯೆಗೆ ಹೋಗಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತೇನೆ’ ಎಂದರು ಜಿಲಾನಿ. ‘ಧ್ವಜವು 40 ಅಡಿ ಅಗಲ ಇರಲಿದೆ. ಧ್ವಜದ ಒಂದು ಬದಿಯಲ್ಲಿ ಹನುಮದೇವರ ಚಿತ್ರ ಇರಲಿದೆ. ರಾಮ ಹಾಗೂ ಲಕ್ಷ್ಮಣನನ್ನು ತನ್ನ ಬಾಹುಗಳಲ್ಲಿ ಹೊತ್ತ ಹನುಮನ ಚಿತ್ರವು ಇನ್ನೊಂದು ಬದಿಯಲ್ಲಿ ಇರಲಿದೆ. 150 ಮೀಟರ್‌ ಬಟ್ಟೆಯಿಂದ ಧ್ವಜವನ್ನು ಸಿದ್ಧಪಡಿಸಲಾಗಿದೆ. ಧ್ವಜದ ಮೌಲ್ಯವು 21 ಸಾವಿರ. ಇದನ್ನು 10 ದಿನಗಳಲ್ಲಿ ಪೂರ್ಣಗೊಳಿಸಲಾಗಿದೆ’ ಎಂದು ವೀರ ವಸ್ತ್ರಾಲಯ ಮಳಿಗೆಯ ದೇವೇಂದ್ರ ಜೈನ್‌ ಮಾಹಿತಿ ನೀಡಿದರು. ಜಿಲಾನಿ ಅವರು ಇದೇ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT