‘ಸೂಕ್ಷ್ಮ ಪ್ರಜ್ಞೆ: ಸಮಾಜದ ಹೊಣೆ’
‘ಪುರುಷ ಪ್ರಧಾನ ಸಮಾಜದಲ್ಲಿ ಅಪರಾಧಿ ಯಾರೆಂದು ಗೊತ್ತಿದ್ದರೂ ವಿಕೃತಿಗೆ ಬಲಿಪಶುಗಳಾದ ಮಹಿಳೆಯರನ್ನು ತಪ್ಪಿತಸ್ಥರನ್ನಾಗಿ ನೋಡಲಾಗುತ್ತಿದೆ. ಹೆಣ್ಣು ಎಷ್ಟೆಲ್ಲ ಸಂಕೋಲೆಗಳಲ್ಲಿ ಸಿಲುಕಿ ನರಳುತ್ತಾಳೆ. ಕುಟುಂಬ, ಸಂಬಂಧಗಳ ಸೂಕ್ಷ್ಮ ಎಳೆ, ರಾಜಕೀಯ, ಸಾಮಾಜಿಕ ಸಂಗತಿಗಳು ಅವಳನ್ನು ಗಾಸಿಗೊಳಿಸುತ್ತಿವೆ. ದಿನಕ್ಕೊಂದು ಅಪಮಾನ ಆಕೆಯನ್ನು ಮೌನವಾಗಿಸಿದೆ. ಸಂತ್ರಸ್ತ ಮಹಿಳೆಯರನ್ನು ಯಾವ ಕಾರ್ಯಕ್ರಮಗಳಿಗೂ ಕರೆಯಬಾರದೆಂಬ ಅಘೋಷಿತ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ. ಯಾರ ತಪ್ಪಿಗೆ ಯಾರಿಗೆ ಶಿಕ್ಷೆ? ಅಪರಾಧಿಗೆ ಕೊಡಬೇಕಾದ ಶಿಕ್ಷೆಯನ್ನು ಸಂತ್ರಸ್ತರಿಗೆ ನೀಡುವುದೇ ಅಪರಾಧ. ಕೆಲವು ರಾಜಕೀಯ ನಾಯಕರೇ ಸಂತ್ರಸ್ತ ಮಹಿಳೆಯರ ಕುರಿತು ವಿಧ ವಿಧದ ದೋಷಾರೋಪಣೆ ಮಾಡುತ್ತ, ಅವರು ಪ್ರಕರಣ ದಾಖಲಿಸದಂತೆ ತಡೆಯುತ್ತಿರುವುದೂ ಅಕ್ಷಮ್ಯ. ಈ ಬಗ್ಗೆಯೂ ಕಾನೂನು ಕ್ರಮ ಜರುಗಿಸಬೇಕು’ ಎನ್ನುತ್ತಾರೆ ಹೋರಾಟಗಾರ್ತಿ ರೂಪ ಹಾಸನ. ಸಂತ್ರಸ್ತ ಮಹಿಳೆ ದಿಟ್ಟತನದಿಂದ ಮುಂದೆ ಬಂದು ದೂರು ನೀಡುವ ವಾತಾವರಣ ಸೃಷ್ಟಿಸಿ, ನಿಜವಾದ ಅಪರಾಧಿಗೆ ಶಿಕ್ಷೆ ಕೊಡಿಸಬೇಕಾಗಿರುವುದು ಸಮಾಜದ ಹೊಣೆ ಎಂಬ ಸೂಕ್ಷ್ಮ ಪ್ರಜ್ಞೆ ಮೂಡಿಸಬೇಕಾಗಿದೆ ಎಂಬುದು ಅವರ ಆಗ್ರಹ.