ರಾಮನಗರ: ‘ಕೃಷಿ ಸಚಿವ ಚಲುವರಾಯಸ್ವಾಮಿ ಅವರ ವಿರುದ್ಧ ಲಂಚದ ಆರೋಪ ಮಾಡಿರುವವರು ಸಾಕ್ಷ್ಯ ನೀಡಬೇಕು. ಸುಮ್ಮನೆ ಆರೋಪ ಮಾಡಿ ಸುಮ್ಮನಾಗುವುದು ಸುಲಭ. ಅದನ್ನು ನಿರೂಪಿಸುವ ಸಾಕ್ಷ್ಯ ಒದಗಿಸಬೇಕು’ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದರು.
ಬಿಡದಿಯಲ್ಲಿ ಬುಧವಾರ ಈ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ‘ತಮ್ಮ ವಿರುದ್ಧದ ಆರೋಪದಲ್ಲಿ ಹುರುಳಿಲ್ಲ ಎಂದು ಚಲುವರಾಯಸ್ವಾಮಿ ಅವರು ಅಧಿವೇಶನದಲ್ಲೇ ಹೇಳಿದ್ದಾರೆ. ಆರೋಪ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ ತನಿಖೆಗೆ ಆದೇಶಿಸಿದ್ದಾರೆ’ ಎಂದರು.
‘ಎಚ್.ಡಿ.ಕುಮಾರಸ್ವಾಮಿ ಅವರು ಆರೋಪಗಳನ್ನು ಮಾಡುವುದರಲ್ಲಿ ನಿಸ್ಸೀಮರು. ಅವರು ಎಂದಾದರೂ ಸಾಬೀತು ಮಾಡಿದ್ದಾರಾ? ತಮ್ಮ ಪೆನ್ ಡ್ರೈವ್ನಲ್ಲಿ ಏನಿದೆ ಎಂಬುದನ್ನು ಇದುವರೆಗೆ ತೋರಿಸಿಲ್ಲ. ಸಿದ್ದರಾಮಯ್ಯ ಅವರನ್ನು ಲಜ್ಜೆಗೆಟ್ಟ ಸಿಎಂ ಎಂದಿರುವುದು ಅವರ ಸಂಸ್ಕೃತಿಯನ್ನು ತೋರಿಸುತ್ತದೆ’ ಎಂದು ವಾಗ್ದಾಳಿ ನಡೆಸಿದರು.
‘ಹಿಂದಿನ ಬಿಜೆಪಿ ಸರ್ಕಾರ 40 ಪರ್ಸೆಂಟ್ ಪಡೆಯುತ್ತಿದೆ ಎಂದು ಹೇಳಿದ್ದು ಗುತ್ತಿಗೆದಾರರೇ ಹೊರತು ನಾವಲ್ಲ. ಆಗ ಅಧಿಕಾರದಲ್ಲಿದ್ದ ಬಿಜೆಪಿಯವರು ಆರೋಪದ ಕುರಿತು ತನಿಖೆ ಮಾಡಬಹುದಾಗಿತ್ತು. ಆದರೆ, ಮಾಡಲಿಲ್ಲ. ನಮ್ಮ ಸರ್ಕಾರ ಆ ಕುರಿತು ತನಿಖೆಗೆ ನಿರ್ಣಯಿಸಿದ್ದು, ಕಾನೂನು ಕ್ರಮ ಕೈಗೊಳ್ಳುತ್ತೇವೆ’ ಎಂದರು.