ನವದೆಹಲಿ: ‘ಕೆ. ಚಂದ್ರಶೇಖರ್ ರಾವ್ ನೇತೃತ್ವದ ಬಿಆರ್ಎಸ್ ಸರ್ಕಾರವು ಯುವಜನರ ಕನಸುಗಳು ಮತ್ತು ಆಶೋತ್ತರಗಳನ್ನು ಕೊಂದಿದೆ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಶನಿವಾರ ಹೇಳಿದರು.
ತೆಲಂಗಾಣ ರಾಜ್ಯ ಲೋಕಸೇವಾ ಆಯೋಗ (ಟಿಎಸ್ಪಿಎಸ್ಸಿ) ಪರೀಕ್ಷೆಗೆ ತಯಾರಾಗುತ್ತಿದ್ದ 23 ವರ್ಷ ವಯಸ್ಸಿನ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಶುಕ್ರವಾರ ನಡೆದಿದೆ. ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅವರು ಬಿಆರ್ಎಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಕಳೆದ 10 ವರ್ಷಗಳಲ್ಲಿ ಬಿಜೆಪಿ ರಿಶ್ತೇದಾರ್ (ಸಂಬಂಧಿ) ಸಮಿತಿಯಾದ ಬಿಆರ್ಎಸ್ ಮತ್ತು ಬಿಜೆಪಿ ತಮ್ಮ ಅಸಮರ್ಥತೆಯಿಂದ ರಾಜ್ಯವನ್ನು ಹಾಳುಮಾಡಿದೆ. ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರ ರಚಿಸಿದರೆ, ಉದ್ಯೋಗ ಕ್ಯಾಲೆಂಡರ್ಅನ್ನು ಬಿಡುಗಡೆ ಮಾಡಲಿದೆ. ಯುಪಿಎಸ್ಸಿ ಪರೀಕ್ಷೆ ಮಾದರಿಯಲ್ಲಿ ಟಿಎಸ್ಪಿಎಸ್ಪಿ ಪರೀಕ್ಷೆಯನ್ನು ನಡೆಸಿ, ಒಂದು ವರ್ಷದಲ್ಲಿ 2 ಲಕ್ಷ ಉದ್ಯೋಗಗಳನ್ನು ಭರ್ತಿ ಮಾಡುತ್ತದೆ ಎಂದರು.
ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆಗೆ ಕಾಂಗ್ರೆಸ್ನ ಇತರ ನಾಯಕರೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ರಾಜ್ಯದ ಲೋಕಸೇವಾ ಆಯೋಗದ ಪರೀಕ್ಷೆಯನ್ನು ಪದೇಪದೆ ಮುಂದೂಡಿದ್ದಕ್ಕೆ ಮನನೊಂದು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಯುವತಿ ಆತ್ಮಹತ್ಯೆ ಮಾಡಿಕೊಂಡ ವಿಷಯ ಕೇಳಿ ತೀವ್ರವಾಗಿ ನೋವುಂಟಾಯಿತು’ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ತೆಲಂಗಾಣದ ಯುವಜನರು ನಿರುದ್ಯೋಗದಿಂದ ಪ್ರಯಾಸಪಡುತ್ತಿದ್ದಾರೆ. ಕಠಿಣ ಶ್ರಮದ ಹೊರತಾಗಿಯೂ ಅವರ ಭವಿಷ್ಯವು ಕತ್ತಲೆಯಲ್ಲಿದೆ. ಇಂಥ ಪರಿಸ್ಥಿತಿಯನ್ನು ಬದಲಾಯಿಸಲು ನಾವು ದೃಢನಿಶ್ಚಯ ಮಾಡಬೇಕು’ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಂಧಿ ಅವರು ಹೇಳಿದ್ದಾರೆ.