ಜೈಪುರ: ರಾಜಸ್ಥಾನದಲ್ಲಿ ಅಶೋಕ್ ಗೆಹ್ಲೋಟ್ ಸರ್ಕಾರವನ್ನು ಬೆಂಬಲಿಸಲು ಭಾರತೀಯ ಟ್ರೈಬಲ್ ಪಾರ್ಟಿಯ (ಬಿಟಿಬಿ) ಇಬ್ಬರು ಶಾಸಕರು ತಲಾ ₹10 ಕೋಟಿ ಪಡೆದಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಮಹೇಂದ್ರಜೀತ್ ಸಿಂಗ್ ಮಾಳವೀಯ ದೂರಿರುವ ವಿಡಿಯೊ ಅನ್ನು ಬಿಜೆಪಿ ರಾಜಸ್ಥಾನ ಘಟಕದ ಅಧ್ಯಕ್ಷ ಸತೀಶ್ ಪೂನಿಯಾ ಬಿಡುಗಡೆ ಮಾಡಿದ್ದಾರೆ.
ಮಾಳವೀಯ ಅವರು ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡುತ್ತಾ, ಈ ಇಬ್ಬರು ಶಾಸಕರು ರಾಜ್ಯಸಭೆ ಚುನಾವಣೆಯಲ್ಲಿ ಬೆಂಬಲಿಸಲು ತಲಾ ₹ 5 ಕೋಟಿ ಮತ್ತು ರಾಜಕೀಯ ಬಿಕ್ಕಟ್ಟಿನ ಸಂದರ್ಭದಲ್ಲಿ ಸರ್ಕಾರವನ್ನು ಬೆಂಬಲಿಸಲು ತಲಾ ₹ 5 ಕೋಟಿ ಪಡೆದಿದ್ದಾರೆ ಎಂದು ಆರೋಪಿಸಿರುವುದು ವಿಡಿಯೊದಲ್ಲಿದೆ.
ವಿಡಿಯೊ ಬಿಡುಗಡೆ ಮಾಡಿರುವ ಪೂನಿಯಾ ಅವರು, ‘ಶಾಸಕರ ಖರೀದಿ’ಯ ಈ ಪ್ರಕರಣ ಕುರಿತು ಹೆಚ್ಚಿನ ವಿವರಣೆ ನೀಡಬೇಕು ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರಿಗೆ ಮನವಿ ಮಾಡಿದ್ದಾರೆ.
ಈ ಕುರಿತು ತಾನು ಎತ್ತಿರುವ ಪ್ರಶ್ನೆಗಳನ್ನು ಕಾಂಗ್ರೆಸ್ ಮುಖಂಡರು ದೃಢಪಡಿಸಿದ್ದಾರೆ ಎಂದು ಪೂನಿಯಾ ತಿಳಿಸಿದ್ದಾರೆ. ಕಳೆದ ಜೂನ್ ತಿಂಗಳಲ್ಲಿ ರಾಜ್ಯಸಭೆ ಚುನಾವಣೆ ಸಂದರ್ಭ ಹಾಗೂ ಸಚಿನ್ ಪೈಲಟ್ ನೇತೃತ್ವದಲ್ಲಿ ಶಾಸಕರು ಬಂಡಾಯ ಎದ್ದಿದ್ದಾಗ ಮೂಡಿದ್ದ ರಾಜಕೀಯ ಬಿಕ್ಕಟ್ಟಿನ ಸಂದರ್ಭದಲ್ಲಿ ಈ ಶಾಸಕರನ್ನು ಹೋಟೆಲ್ನಲ್ಲಿ ಇರಿಸಲಾಗಿತ್ತು.
ಈ ಎರಡೂ ಸಂದರ್ಭದಲ್ಲಿ ಬಿಟಿಬಿ ಶಾಸಕರು ಗೆಹ್ಲೋಟ್ ಸರ್ಕಾರವನ್ನು ಬೆಂಬಲಿಸಿದ್ದರು. ಮಾಳವೀಯ ಅವರು ಬಡಿದೊರ (ಬನ್ಸ್ವಾರಾ) ಕ್ಷೇತ್ರ ಪ್ರತಿನಿಧಿಸುತ್ತಿದ್ದಾರೆ. ಬಿಟಿಬಿ ಶಾಸಕರಾದ ರಾಮಪ್ರಸಾದ್ ದಿಂಡೋರ (ಸಾಗ್ವಾರಾ) ಮತ್ತು ರಾಜಕುಮಾರ್ ರೋಟ್ (ಚೊರಸಿ) ಅವರು ಈ ಕುರಿತ ಪ್ರತಿಕ್ರಿಯೆಗೆ ಲಭ್ಯರಾಗಲಿಲ್ಲ.