ನಾಗಪುರ, ಮಹಾರಾಷ್ಟ್ರ: ಹತ್ಯೆಗಳು, ಬೆಂಕಿ ಹಚ್ಚುವಿಕೆ ಹಾಗೂ ಅನೇಕ ಎನ್ಕೌಂಟರ್ಗಳಲ್ಲಿ ಭಾಗಿಯಾಗಿದ್ದ ಇಬ್ಬರು ನಕ್ಸಲರು ಮಹಾರಾಷ್ಟ್ರದ ಗಡ್ಚಿರೋಲಿ ಪೊಲೀಸರಿಗೆ ಶರಣಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಮ್ಸಿಂಗ್ ಸಿಂಗ್ ಅಲಿಯಾಸ್ ಸೀತಾರಾಮ್ ಬಕ್ಕಾ ಅತ್ರಮ್ (63) ಹಾಗೂ ಮಾಧುರಿ ಅಲಿಯಾಸ್ ಭುರಿ ಅಲಿಯಾಸ್ ಸುಮನ್ ರಾಜು ಮತ್ತಾಮಿ (34) ಎಂಬುವವರು ಶರಣಾದ ನಕ್ಸಲರು. ಇವರಿಬ್ಬರನ್ನು ಹಿಡಿದುಕೊಟ್ಟವರಿಗೆ ₹12 ಲಕ್ಷ ಬಹುಮಾನ ನೀಡಲಾಗುವುದು ಎಂದು ಅಲ್ಲಿನ ಸರ್ಕಾರ ಘೋಷಿಸಿತ್ತು.
ನಕ್ಸಲರ ಶರಣಾಗತಿಯ ಬಗ್ಗೆ ಮಾಹಿತಿ ನೀಡಿರುವ ಪೊಲೀಸ್ ವರಿಷ್ಠಾಧಿಕಾರಿ ಅಂಕಿತ್ ಗೋಯಲ್, ‘ಬಂಡುಕೋರ ನಕ್ಸಲರು ಹಿಂಸಾಚಾರದಿಂದ ಬೇಸತ್ತಿದ್ದಾರೆ. ಅನೇಕ ನಕ್ಸಲರು ರಾಜ್ಯ ಸರ್ಕಾರದ ಶರಣಾಗತಿ ನೀತಿಯೆಡೆಗೆ ಆಕರ್ಷಿತರಾಗಿದ್ದಾರೆ’ ಎಂದು ತಿಳಿಸಿದರು.
2019ರಿಂದ ಇಲ್ಲಿಯವರೆಗೆ ಗೋಯಲ್ ಅವರ ಮುಂದೆ 49 ನಕ್ಸಲರು ಶರಣಾಗಿದ್ದಾರೆ. ಗೋಯಲ್ ಅವರು ನಕ್ಸಲರಿಗೆ ತಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸಲು ಮತ್ತು ಸಮಾಜದ ಮುಖ್ಯವಾಹಿನಿಗೆ ಬರಲು ಸಿದ್ಧವಿರುವವರಿಗೆ ಅಗತ್ಯವಾದ ನೆರವು ನೀಡಲಾಗುವುದು ಎಂದು ಭರವಸೆ ನೀಡಿದ್ದರು.