ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಚಲನವಲನದ ಮೇಲೆ ಈಗಲೂ ನಿರ್ಬಂಧ ಹೇರಲಾಗಿದೆ ಎಂದು ಆಮ್ ಆದ್ಮಿ ಪಕ್ಷ (ಎಎಪಿ) ಬುಧವಾರ ಆರೋಪಿಸಿದೆ.
ಗೃಹ ಸಚಿವ ಅಮಿತ್ ಶಾ ಆಣತಿ ಮೇರೆಗೆ ಕೇಜ್ರಿವಾಲ್ ಅವರ ನಿವಾಸದ ಮುಖ್ಯದ್ವಾರವನ್ನು ಬಂದ್ ಮಾಡಲಾಗಿದೆ ಎಂದೂ ಎಎಪಿ ಆರೋಪಿಸಿದೆ. ಆದರೆ ಈ ಆರೋಪಗಳನ್ನು ದೆಹಲಿ ಪೊಲೀಸರು ನಿರಾಕರಿಸಿದ್ದಾರೆ.
‘ಸಭೆಯೊಂದರಲ್ಲಿ ಪಾಲ್ಗೊಳ್ಳುವ ಸಲುವಾಗಿ ಮುಖ್ಯಮಂತ್ರಿ ಕೇಜ್ರೀವಾಲ್ 11ಕ್ಕೆ ಮನೆಯಿಂದ ತೆರಳಿದ್ದಾರೆ’ ಎಂದೂ ಪೊಲೀಸರು ಹೇಳಿದ್ದಾರೆ.
ನೂತನ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟಿಸುತ್ತಿರುವ ರೈತರನ್ನು ಕೇಜ್ರಿವಾಲ್ ಅವರು ಭೇಟಿ ಮಾಡಿದ ನಂತರ, ಅವರನ್ನು ಪೊಲೀಸರು ಗೃಹಬಂಧನಲ್ಲಿ ಇರಿಸಿದ್ದರು ಎಂದು ಎಎಪಿ ಮಂಗಳವಾರ ಆರೋಪಿಸಿತ್ತು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ವಕ್ತಾರ ರಾಘವ್ ಛಡ್ಡಾ, ‘ಮುಖ್ಯಮಂತ್ರಿ ಕೇಜ್ರಿವಾಲ್ ನಿವಾಸ ಸುತ್ತ ಅಘೋಷಿತ ತುರ್ತು ಪರಿಸ್ಥಿತಿಯನ್ನು ಹೇರಿದಂಥ ವಾತಾವರಣ ಇದೆ’ ಎಂದು ದೂರಿದರು.
‘ಕ್ರೀಡಾಂಗಣಗಳನ್ನು ರೈತರನ್ನು ಕೂಡಿ ಹಾಕುವ ಸಲುವಾಗಿ ಬಂದೀಖಾನೆಗಳನ್ನಾಗಿ ಪರಿವರ್ತಿಸಲು ನಮ್ಮ ಸರ್ಕಾರ ಅನುಮತಿ ನೀಡಲಿಲ್ಲ. ಇದೇ ಕಾರಣಕ್ಕೆ ತುರ್ತು ಪರಿಸ್ಥಿತಿಯಂಥ ವಾತಾವರಣ ಸೃಷ್ಟಿಸಲಾಗಿದೆ’ ಎಂದೂ ದೂರಿದರು.