ಬಂದರು ವಿವಾದ: ಕೇರಳದ ಪೊಲೀಸ್ ಠಾಣೆ ಮೇಲೆ ಸ್ಥಳೀಯರ ದಾಳಿ

ವಿಝಿಞಾಂ(ಕೇರಳ): ಅದಾನಿ ಸಮೂಹದ ವಿಝಿಞಾಂ ಅಂತರರಾಷ್ಟ್ರೀಯ ಬಂದರು ಸಂಸ್ಥೆ ವಿರುದ್ಧ ಸಿಡಿದೆದ್ದಿರುವ ಮೀನುಗಾರರು ಭಾನುವಾರ ರಾತ್ರಿ ಸ್ಥಳೀಯ ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿದ್ದು, ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಶನಿವಾರ ರಾತ್ರಿಯ ಗಲಭೆಗೆ ಸಂಬಂಧಿಸಿದಂತೆ ವಶಕ್ಕೆ ಪಡೆದಿರುವ ಐವರು ಮೀನುಗಾರರ ಬಿಡುಗಡೆಗೆ ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
2015 ರಿಂದ ನಿರ್ಮಾಣ ಹಂತದಲ್ಲಿರುವ ₹7,500 ಕೋಟಿ ಬಂದರು ಪೂರ್ಣಗೊಳಿಸುವಂತೆ ಒತ್ತಾಯಿಸುತ್ತಿದ್ದ ಸ್ಥಳೀಯ ಹಿಂದೂ ಗುಂಪುಗಳೊಂದಿಗೆ ಮೀನುಗಾರರು ವಾಗ್ವಾದಕ್ಕಿಳಿದು, ಪ್ರತಿಭಟನೆ ಹಿಂಸಾಚಾರದ ರೂಪ ತಳೆದಿತ್ತು.
ವಿಝಿಞಾಂ ಪ್ರಾಂತ್ಯದಲ್ಲಿ ನಡೆದ ಈ ಗಲಭೆಯಲ್ಲಿ 30ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದು, ಹಲವು ವಾಹನಗಳು ಹಾನಿಗೊಂಡಿದ್ದವು. ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದ ಗುಂಪು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿ, ಅಶ್ರವಾಯು ಪ್ರಯೋಗಿಸಿದ್ದರು. ಸದ್ಯ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದು, ಪ್ರತಿಭಟನಾ ಸ್ಥಳದ ಸುತ್ತಲೂ ಪೊಲೀಸ್ ಬಿಗಿಬಂದೋಬಸ್ತ್ ಏರ್ಪಡಿಸಲಾಗಿದೆ.
ಶನಿವಾರದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ತಿರುವನಂತಪುರಂ ಆರ್ಚ್ಬಿಷಪ್ ಥಾಮಸ್ ನೆಟ್ಟೊ, ಸಹಾಯಕ ಬಿಷಪ್ ಆರ್ ಕ್ರಿಸ್ಟುದಾಸ್ ಮತ್ತು ಆರ್ಚ್ಡಯಾಸಿಸ್ನ ಹಲವಾರು ಪಾದ್ರಿಗಳ ವಿರುದ್ಧ ಪ್ರಕರಣ ದಾಖಲಿಸಿ, ಐವರು ಮೀನುಗಾರರನ್ನು ವಶಕ್ಕೆ ಪಡೆದಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.