ಜಾನುಪುರ/ದಿಯೊರಿಯಾ (ಉತ್ತರ ಪ್ರದೇಶ): ಲವ್ ಜಿಹಾದ್ ತಡೆಯಲು ಉತ್ತರ ಪ್ರದೇಶ ಕಾನೂನು ಜಾರಿಗೆ ತರುತ್ತದೆ. ನಮ್ಮ ಹೆಣ್ಣುಮಕ್ಕಳನ್ನು ಗೌರವಿಸದೇ ಇರುವವರಿಗೆ 'ರಾಮ ನಾಮ ಸತ್ಯ ಹೈ' ಎನ್ನುವ ಚರಣಗೀತೆ ಹಾಡಲಾಗುವುದು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಎಚ್ಚರಿಕೆ ನೀಡಿದ್ದಾರೆ.
'ವಿವಾಹದ ಏಕೈಕ ಉದ್ದೇಶಕ್ಕಾಗಿ ಮಾಡಲಾಗುವ ಮತಾಂತರ ಮಾನ್ಯವಲ್ಲ,' ಎಂಬ ಅಲಹಾಬಾದ್ ಹೈಕೋರ್ಟ್ ತೀರ್ಪು ಸ್ವಾಗತಿಸಿದ ಸಿಎಂ ಯೋಗಿ ಆದಿತ್ಯನಾಥ್, 'ಲವ್ ಜಿಹಾದ್'ನಲ್ಲಿ ಭಾಗಿಯಾಗಿರುವವರ ಚಿತ್ರಗಳ ಪೋಸ್ಟರ್ಗಳನ್ನು ಸಮಾಜದಲ್ಲಿ ಹಾಕಲಾಗುವುದು,' ಎಂದು ಎಚ್ಚರಿಕೆಯನ್ನೂ ನೀಡಿದರು.
'ಲವ್ ಜಿಹಾದ್ ವಿರುದ್ಧ ನಾವು ಪರಿಣಾಮಕಾರಿ ಕಾನೂನನ್ನು ತರುತ್ತೇವೆ. ತಮ್ಮ ನಿಜವಾದ ಹೆಸರುಗಳು ಮತ್ತು ಗುರುತು ಮರೆಮಾಚಿ ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳ ಗೌರವ ಮತ್ತು ಘನತೆಯೊಂದಿಗೆ ಆಟವಾಡುವವರಿಗೆ ಇದು ನನ್ನ ಎಚ್ಚರಿಕೆ. ಅವರು ತಮ್ಮನ್ನು ತಿದ್ದಿಕೊಳ್ಳದೇ ಹೋದರೆ, ಅವರಿಗೆ ‘ರಾಮ್ ನಾಮ್ ಸತ್ಯ ಹೇ’ ಚರಣಗೀತೆ ಹಾಡಲಾಗುತ್ತದೆ ಎಂದು ಎಚ್ಚರಿಸಿದರು.
ಮಲ್ಹಾನಿ ಮತ್ತು ದಿಯೊರಿಯಾ ಕ್ಷೇತ್ರಗಳ ಉಪಚುನಾವಣೆ ಪ್ರಚಾರದಲ್ಲಿ ತೊಡಗಿದ್ದ ಅವರು, ಭಾಷಣದ ವೇಳೆ ಈ ವಿಚಾರ ಪ್ರಸ್ತಾಪಿಸಿದರು.