ಭೋಪಾಲ್: ರಾಮ ನವಮಿ ವೇಳೆ ಕೋಮುಗಲಭೆ ನಡೆದಿದ್ದಮಧ್ಯಪ್ರದೇಶದ ಖರ್ಗೋನ್ನಲ್ಲಿ ಸೋಮವಾರ ಹಾಗೂ ಮಂಗಳವಾರ ಕರ್ಪ್ಯೂ ಘೋಷಿಸಲಾಗಿದೆ. ಈ ಎರಡೂ ದಿನಗಳಂದು ಈದ್ ಆಚರಣೆ ನಡೆಯಲಿದ್ದು, ಸಂಪೂರ್ಣ ಕರ್ಪ್ಯೂ ಜಾರಿಗೊಳಿಸಿ ಅಲ್ಲಿನ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
‘ಮೇ 2 ಮತ್ತು ಮೇ 3 ರಂದು ಖರ್ಗೋನ್ನಲ್ಲಿ ಸಂಪೂರ್ಣ ಕರ್ಫ್ಯೂ ವಿಧಿಸಲಾಗುವುದು. ಈದ್ ಪ್ರಾರ್ಥನೆಗಳನ್ನು ಮನೆಯಲ್ಲಿಯೇ ಸಲ್ಲಿಸಬೇಕು’ ಎಂದು ಖರ್ಗೋನ್ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಸಮರ್ ಸಿಂಗ್ ಹೇಳಿದ್ದಾರೆ.
ಈ ದಿನಗಳಲ್ಲಿ, ಅಂಗಡಿಗಳು ತೆರೆದಿರುತ್ತವೆ ಮತ್ತು ಪರೀಕ್ಷೆಗೆ ಹೋಗುವ ವಿದ್ಯಾರ್ಥಿಗಳಿಗೆ ಪಾಸ್ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.
ಇದಲ್ಲದೇ, ಅಕ್ಷಯ ತೃತೀಯ ಮತ್ತು ಪರಶುರಾಮ ಜಯಂತಿಯಂದು ಜಿಲ್ಲೆಯಲ್ಲಿ ಯಾವುದೇ ಕಾರ್ಯಕ್ರಮವನ್ನು ಆಯೋಜಿಸಲು ಅನುಮತಿ ಇಲ್ಲವೆಂದು ಎಂದು ಸಮರ್ ಸಿಂಗ್ ತಿಳಿಸಿದ್ದಾರೆ.
ಕಳೆದ ತಿಂಗಳು ರಾಮ ನವಮಿ ಮೆರವಣಿಗೆಯ ವೇಳೆ ಕಲ್ಲು ತೂರಾಟ ನಡೆದಿತ್ತು ಹಾಗೂ ವಾಹನಗಳಿಗೆ ಬೆಂಕಿ ಹಚ್ಚಲಾಗಿತ್ತು. ಹಿಂಸಾಚಾರಕ್ಕೆ ಸಂಬಂಧಿಸಿದಂತೆ 100ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿತ್ತು.