ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೃತ್‌ಪಾಲ್‌ನನ್ನು ಅಕ್ರಮವಾಗಿ ಬಂಧನದಲ್ಲಿ ಇರಿಸಲಾಗಿದೆ: ಇಮಾನ್‌ ಸಿಂಗ್‌ ಆರೋಪ

Last Updated 20 ಮಾರ್ಚ್ 2023, 2:35 IST
ಅಕ್ಷರ ಗಾತ್ರ

ಚಂಡೀಗಡ: ಸಿಖ್‌ ಮೂಲಭೂತವಾದಿ ಧರ್ಮ ಪ್ರಚಾರಕ ಅಮೃತ್‌ಪಾಲ್‌ನನ್ನು ಅಕ್ರಮವಾಗಿ ಬಂಧನದಲ್ಲಿ ಇರಿಸಲಾಗಿದೆ ಎಂದು ಅಮೃತ್‌ಪಾಲ್‌ನ ಕಾನೂನು ಸಲಹೆಗಾರ ಇಮಾನ್‌ ಸಿಂಗ್‌ ಖಾರಾ ಎಂಬುವರು ನ್ಯಾಯಾಲಯಕ್ಕೆ ಹೇಬಿಯಸ್‌ ಕಾರ್ಪಸ್‌ ಅರ್ಜಿ ಸಲ್ಲಿಸಿದ್ದಾರೆ.

ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ಗೆ ಇಮಾನ್‌ ಸಿಂಗ್‌ ಖಾರಾ ಭಾನುವಾರ ಹೇಬಿಯಸ್‌ ಕಾರ್ಪಸ್‌ ಅರ್ಜಿ ಸಲ್ಲಿಸಿದ್ದಾರೆ. ಅಮೃತ್‌ಪಾಲ್‌ನನ್ನು ಅಕ್ರಮವಾಗಿ ಬಂಧನದಲ್ಲಿ ಇರಿಸಲಾಗಿದೆ ಎಂದು ಆರೋಪಿಸಿರುವ ಅವರು ಆತನನ್ನು ಕೂಡಲೇ ಬಿಡುಗಡೆಗೊಳಿಸಬೇಕು ಎಂದು ಕೋರಿದ್ದಾರೆ. ಈ ಕುರಿತು ನ್ಯಾಯಾಲಯವು ಪಂಜಾಬ್‌ ಸರ್ಕಾರಕ್ಕೆ ನೋಟಿಸ್‌ ಜಾರಿಗೊಳಿಸಿದ್ದು, ಇದೇ 21ರೊಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಸೂಚಿಸಿದೆ.

ಅಮೃತ್‌ಪಾಲ್‌ ಸಿಂಗ್ ಇನ್ನೂ ತಲೆಮರೆಸಿಕೊಂಡಿದ್ದು, ಆತನಿಗಾಗಿ ಶೋಧ ಮುಂದುವರಿಸಿರುವ ಪೊಲೀಸರು ಭಾನುವಾರ ಮತ್ತೆ 34 ಬೆಂಬಲಿಗರನ್ನು ಬಂಧಿಸಿದ್ದಾರೆ. ಇಲ್ಲಿಯವರೆಗೂ ನೂರಕ್ಕೂ ಹೆಚ್ಚು ಜನರ ಬಂಧನವಾಗಿದೆ. ಇವರು ‘ವಾರಿಸ್‌ ಪಂಜಾಬ್‌ ದೇ’ (ಡಬ್ಲ್ಯುಪಿಡಿ) ಸಂಘಟನೆಗಾಗಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಭಾನುವಾರ ತಡ ರಾತ್ರಿ ಅಮೃತ್‌ಪಾಲ್‌ ಸಿಂಗ್ ಚಿಕ್ಕಪ್ಪ ಹರ್ಜಿತ್‌ ಸಿಂಗ್‌, ಕಾರು ಚಾಲಕ ಹರ್ಪಿತ್‌ ಸಿಂಗ್‌ ಮೆಹ್ತಾಪುರ ಪೊಲೀಸರಿಗೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅದೇ ದಿನ ಜಲಂಧರ್‌ ಜಿಲ್ಲೆಯಲ್ಲಿ ಆತನ ಬೆಂಗಾವಲು ವಾಹನ ಪತ್ತೆಯಾಗಿದ್ದು, ಅದರಲ್ಲಿ ರೈಫಲ್‌, ಮದ್ದುಗುಂಡುಗಳು ದೊರೆತಿದ್ದು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ರಾಜ್ಯದಲ್ಲಿ ಕೋಮು ಸಂಘರ್ಷ ಹರಡಲು ಯತ್ನಿಸಿದ್ದ ಆರೋಪದಡಿ, ಖಾಲಿಸ್ತಾನ ಪರ ಸಹಾನೂಭೂತಿ ಹೊಂದಿರುವ ಸಿಖ್‌ ಮೂಲಭೂತ ವಾದಿ ಪತ್ತೆಗೆ ಶನಿವಾರ (ಮಾ.18) ಪೊಲೀಸರು ಶೋಧಕಾರ್ಯ ನಡೆಸಿದ್ದರು. ಆತನ ಸಂಘಟನೆ ಜೊತೆಗಿದ್ದ 78 ಸದಸ್ಯರನ್ನು ಬಂಧಿಸಿದ್ದರು. ಆತ ಪಲಾಯನ ಮಾಡಿದ್ದ. ಈತನ ಪತ್ತೆಗೆ ರಾಜ್ಯವ್ಯಾಪಿ ಶೋಧ ಕಾರ್ಯಾಚರಣೆ ನಡೆದಿತ್ತು.

ಅಮೃತ್‌ಪಾಲ್‌ ವಿರುದ್ಧ ಹಲವು ಕ್ರಿಮಿನಲ್ ಪ್ರಕರಣ ದಾಖಲಾಗಿವೆ. ಆತನ ನೇತೃತ್ವದ ‘ವಾರಿಸ್‌ ಪಂಜಾಬ್‌ ದೇ’ (ಡಬ್ಲ್ಯುಪಿಡಿ) ಸಂಘಟನೆಗೆ ಸೇರಿದ ಶಕ್ತಿಗಳು ಕೋಮುಸೌಹಾರ್ದಕ್ಕೆ ಧಕ್ಕೆ ತರಲು ಯತ್ನಿಸಿದ್ದ ನಾಲ್ಕು ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಜ್ನಲಾ ಪೊಲೀಸ್‌ ಠಾಣೆ ಮೇಲಿನ ದಾಳಿ ಪ್ರಕರಣದ ಸಂಬಂಧ ಡಬ್ಲ್ಯುಪಿಡಿ ಶಕ್ತಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಅಕ್ರಮ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಸಂಬಂಧ ಅಮೃತ್‌ಪಾಲ್‌ ಸಿಂಗ್ ಮತ್ತು ಆತನ ಏಳು ಸಹಚರರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ಅಮೃತಸರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸತಿಂದರ್‌ ಸಿಂಗ್ ತಿಳಿಸಿದ್ದಾರೆ.

ಅಮೃತ್‌ಪಾಲ್‌ನ ಹುಟ್ಟೂರು ಅಮೃತಸರದ ಜಲ್ಲೂಪುರ್‌ ಖೇರಾ ಗ್ರಾಮದಲ್ಲಿ ಭದ್ರತೆ ಬಿಗಿಗೊಳಿಸಲಾಗಿದೆ. ಅಲ್ಲಿ, ಅಮೃತ್‌ಪಾಲ್‌ ಸಿಂಗ್‌ನ ತಂದೆ ತರ್ಸೆಮ್‌ ಸಿಂಗ್‌ ಮತ್ತು ಆತನ ಪುತ್ರನನ್ನು ಪೊಲೀಸರು ಬಂಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT