ಕೋಯಿಕ್ಕೋಡ್: ಆಗಸ್ಟ್ 7ರ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮಹಿಳೆಯೊಬ್ಬರು ಭಾನುವಾರ ರಾತ್ರಿ ಇಲ್ಲಿನ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು, ವಿಮಾನ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 21ಕ್ಕೆ ಏರಿದೆ.
ಮೃತಪಟ್ಟ ಮಹಿಳೆಯ ಹೆಸರು ಮಂಜುಳಾ ಕುಮಾರಿ(37). ತಮ್ಮ ಪತಿಯನ್ನು ಭೇಟಿಯಾಗಿ ಬರುವುದಕ್ಕಾಗಿ ಈ ವರ್ಷದ ಆರಂಭದಲ್ಲಿ ದುಬೈಗೆ ತೆರೆಳಿದ್ದರು. ಲಾಕ್ಡೌನ್ ಕಾರಣದಿಂದಾಗಿ ಅಲ್ಲೇ ಉಳಿದಿದ್ದರು.
ಕೋಯಿಕ್ಕೋಡ್ನ ವಿಮಾನ ನಿಲ್ದಾಣದಲ್ಲಿ ಇಳಿಯುವ ವೇಳೆ ಅಪಘಾತಕ್ಕೀಡಾದ ಆ ವಿಮಾನದಲ್ಲಿ 190 ಮಂದಿ ಪ್ರಯಾಣಿಕರಿದ್ದರು. ಅಪಘಾತದಲ್ಲಿ 18 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದರು. ಹಲವರು ಗಾಯಗೊಂಡಿದ್ದರು. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಚಿಕಿತ್ಸೆಪಡೆಯುತ್ತಿದ್ದ 53 ವರ್ಷ ವ್ಯಕ್ತಿಯೊಬ್ಬರು ಹಾಗೂ 68 ವರ್ಷದ ಮತ್ತೊಬ್ಬರು ಇದೇ ತಿಂಗಳಲ್ಲಿ ಸಾವನ್ನಪ್ಪಿದ್ದರು.