ನವದೆಹಲಿ: ಜಂತರ್ಮಂತರ್ನಲ್ಲಿ ನಡೆದ ಪ್ರತಿಭಟನೆಯ ವೇಳೆ ಮುಸ್ಲಿಂ ವಿರೋಧಿ ಘೋಷಣೆಗಳನ್ನು ಕೂಗಿದ ಆರೋಪದ ಮೇಲೆ ಬಿಜೆಪಿ ನಾಯಕ ಅಶ್ವಿನಿ ಉಪಾಧ್ಯಾಯ ಮತ್ತು ಇತರ ಐವರನ್ನು ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ವಿನೋದ್ ಶರ್ಮಾ, ದೀಪಕ್ ಸಿಂಗ್, ವಿನೀತ್ ಕ್ರಾಂತಿ, ಪ್ರೀತ್ ಸಿಂಗ್ ಹಾಗೂ ದೀಪಕ್ ಉಳಿದ ಐವರು ಬಂಧಿತರು.
ʼಭಾನುವಾರ (ಆಗಸ್ಟ್ 8) ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಅಶ್ವಿನಿ ಉಪಾಧ್ಯಾಯ ಮತ್ತು ಇತರರನ್ನು ಬಂಧಿಸಲಾಗುವುದು. ದೆಹಲಿ ಪೊಲೀಸರು ಪ್ರಕರಣವನ್ನು ಕಾನೂನು ರೀತಿಯಲ್ಲಿ ನಿಭಾಯಿಸುತ್ತಿದ್ದಾರೆ. ಕೋಮು ಸಾಮರಸ್ಯಕ್ಕೆ ಧಕ್ಕೆಯಾಗುವುದನ್ನು ಸಹಿಸುವುದಿಲ್ಲʼ ಎಂದು ಪೊಲೀಸರು ಸೋಮವಾರ ಹೇಳಿದ್ದರು.
ಜಂತರ್ ಮಂತರ್ ಪ್ರತಿಭಟನೆ ವೇಳೆ ಮುಸ್ಲಿಂ ವಿರೋಧಿ ಘೋಷಣೆಗಳನ್ನು ಕೂಗುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿವೈರಲ್ ಆಗಿತ್ತು. ಅದರ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.
ಭಾರತ್ ಚೋಡೊ ಅಭಿಯಾನದ ಭಾಗವಾಗಿ ಜಂತರ್ಮಂತರ್ನಲ್ಲಿ ಆಯೋಜಿಸಲಾಗಿದ್ದ ಪ್ರತಿಭಟನೆಯಲ್ಲಿ ಭಾರಿ ಸಂಖ್ಯೆಯಲ್ಲಿ ಜನರು ಭಾಗಿಯಾಗಿದ್ದರು.
ಬಿಜೆಪಿಯ ಮಾಜಿ ವಕ್ತಾರ ಮತ್ತು ವಕೀಲ ಅಶ್ವಿನಿ ಉಪಾಧ್ಯಾಯ ಅವರ ನೇತೃತ್ವದಲ್ಲಿಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು ಎಂದು ಭಾರತ ಜೋಡೋ ಆಂದೋಲನದ ವಕ್ತಾರ ಶಿಪ್ರಾ ಶ್ರೀವಸ್ತವ ತಿಳಿಸಿದ್ದರು.
ʼಜನರು ಅನುಮತಿ ಇಲ್ಲದೆ ಜಂತರ್ ಮಂತರ್ನಲ್ಲಿ ಸೇರಿದ್ದರು. ಅದೇರೀತಿ ಕೆಲವರುಪ್ರಚೋದನಾಕಾರಿ ಮತ್ತು ಆಕ್ಷೇಪಾರ್ಹ ಘೋಷಣೆಗಳನ್ನು ಕೂಗಿರುವುದು ನಮ್ಮ ಗಮನಕ್ಕೆ ಬಂದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೊ ಕೂಡ ನಮಗೆ ತಲುಪಿದ್ದು, ಎಫ್ಐಆರ್ ದಾಖಲಿಸಿಕೊಂಡಿದ್ದೇವೆʼ ಎಂದು ದೆಹಲಿ ಡಿಸಿಬಿ ದೀಪಕ್ ಯಾದವ್ ಹೇಳಿದ್ದರು.