ಮಥುರಾ (ಉತ್ತರಪ್ರದೇಶ):ಶ್ರೀ ಕೃಷ್ಣ ಜನ್ಮಭೂಮಿ- ಶಾಹಿ ಈದ್ಗಾ ಮಸೀದಿ ವಿವಾದದ ತ್ವರಿತ ವಿಚಾರಣೆಗೆ ಅಲಹಾಬಾದ್ ಹೈಕೋರ್ಟ್ ನಿರ್ದೇಶನ ನೀಡಿದ ಮರು ದಿನವೇ, ಶೀಘ್ರವೇ ಹಿರಿಯ ಅಡ್ವೊಕೇಟ್ ಕಮಿಷನರ್ ನೇಮಿಸುವಂತೆ ಕೋರಿ ಮಥುರಾ ನ್ಯಾಯಾಲಯದಲ್ಲಿ ಶುಕ್ರವಾರ ಎರಡು ಅರ್ಜಿಗಳನ್ನು ಸಲ್ಲಿಸಲಾಗಿದೆ.
ಮಸೀದಿ ಸ್ಥಳದಲ್ಲಿ ಹಿಂದೂ ದೇವಾಲಯ ಇದ್ದ ಕುರುಹುಗಳನ್ನು ಪರಿಶೀಲಿಸಲು, ಕುರುಹುಗಳನ್ನು ವಿರೂಪಗೊಳಿಸಲು ಅಥವಾ ನಾಶಪಡಿಸಲು ಅವಕಾಶ ನೀಡದಿರಲುಶೀಘ್ರವೇ ಕಮಿಷನರ್ ಅವರನ್ನು ನೇಮಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
ಮನೀಷ್ ಯಾದವ್ ಅವರು ಸಿವಿಲ್ ನ್ಯಾಯಾಲಯದ (ಹಿರಿಯ ವಿಭಾಗ)ನ್ಯಾಯಾಧೀಶರಾದ ಜ್ಯೋತಿ ಸಿಂಗ್ ಅವರಿಗೆ ಮೊದಲ ಅರ್ಜಿ ಸಲ್ಲಿಸಿದರು. ಭಗವಾನ್ ಶ್ರೀಕೃಷ್ಣ ವಿರಾಜಮಾನರಾಗಿರುವ ಮಸೀದಿಯಲ್ಲಿ ಹಿಂದೂ ದೇವಾಲಯದ ಕುರುಹುಗಳು ಇರುವುದನ್ನು ಪರಿಶೀಲಿಸಲೂ ಯಾದವ್ ರಿಟ್ ಅರ್ಜಿ ಸಲ್ಲಿಸಿದ್ದರು. ಎರಡನೆಯ ಅರ್ಜಿಯನ್ನು ದಿನೇಶ್ ಎಂಬ ಭಕ್ತರೊಬ್ಬರು ಸಲ್ಲಿಸಿದ್ದಾರೆ ಎಂದು ಜಿಲ್ಲಾ ಸರ್ಕಾರಿ ವಕೀಲ (ಸಿವಿಲ್) ಸಂಜಯ್ ಗೌರ್ ಹೇಳಿದರು.
ಉತ್ತರ ಪ್ರದೇಶ ಕೇಂದ್ರ ಸುನ್ನಿ ವಕ್ಫ್ ಬೋರ್ಡ್ ಮತ್ತು ಶಾಹಿ ಈದ್ಗಾ ಮಸೀದಿ ಪರ ವಕೀಲ ತನ್ವೀರ್ ಅಹ್ಮದ್ ಆಕ್ಷೇಪಣೆಗಳಿಗೆ ಉತ್ತರಿಸಲು ಸಮಯಾವಕಾಶ ಕೋರಿದರು. ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಜುಲೈ 1ಕ್ಕೆ ನಿಗದಿಪಡಿಸಿದೆ.
ಕಳೆದ ಹಲವು ವರ್ಷಗಳಿಂದ ಈ ವಿವಾದಕ್ಕೆ ಸಂಬಂಧಿಸಿ 10 ಅರ್ಜಿಗಳು ಮಥುರಾ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇವೆ.