ನವದೆಹಲಿ: ನೆರೆಯ ಚೀನಾ ಜೊತೆ ನಡೆಯುತ್ತಿರುವ ಗಡಿ ಸಂಘರ್ಷದ ನಡುವೆ ಭಾರತದ ಭದ್ರತಾ ಪಡೆಯನ್ನು ಸಜ್ಜುಗೊಳಿಸುವ ದೃಷ್ಟಿಯಿಂದ ರಕ್ಷಣಾ ಪಡೆಗಳಿಗೆ 15 ದಿನಗಳ ಕಠಿಣ ಯುದ್ಧಕ್ಕೆ ಸಾಕಾಗುವಷ್ಟು ಶಸ್ತ್ರಾಸ್ತ್ರ ಮತ್ತು ಮದ್ದು ಗುಂಡುಗಳನ್ನು ಸಂಗ್ರಹಿಸಿಟ್ಟುಕೊಳ್ಳಲು ಅನುಮತಿ ನೀಡುವ ಮೂಲಕ ಭಾರತ ಮಹತ್ವದ ಹೆಜ್ಜೆ ಇಟ್ಟಿದೆ.
ಪೂರ್ವ ಲಡಾಕ್ನಲ್ಲಿ ಚೀನಾ ಜೊತೆ ಏರ್ಪಟ್ಟಿರುವ ಪ್ರಕ್ಷುಬ್ಧ ವಾತಾವರಣದ ಹಿನ್ನೆಲೆಯಲ್ಲಿ ವಿಸ್ತೃತ ದಾಸ್ತಾನು ಅಗತ್ಯತೆಗಳು ಮತ್ತು ತುರ್ತು ಆರ್ಥಿಕ ಅಧಿಕಾರಗಳನ್ನು ಬಳಸಿಕೊಳ್ಳುವ ಮೂಲಕ ಯುದ್ಧ ಪರಿಕರಣಗಳು ಮತ್ತು ಮದ್ದು ಗುಂಡುಗಳಿಗಾಗಿ ರಕ್ಷಣಾ ಪಡೆಗಳು ₹50,000 ಕೋಟಿಗೂ ಹೆಚ್ಚು ವ್ಯಯಿಸುವ ಸಾಧ್ಯತೆ ಇದೆ ಎಂದು ಸ್ಥಳೀಯ ಮತ್ತು ವಿದೇಶಿ ಮೂಲಗಳನ್ನ ಉದ್ದೇಶಿಸಿ ಎನ್ಡಿಟಿವಿ ವರದಿ ಮಾಡಿದೆ.
ಈ ಹಿಂದಿನ ಕನಿಷ್ಠ 10 ದಿನಗಳಿಗೆ ಸಾಕಾಗುವಷ್ಟು ಯುದ್ಧ ಪರಿಕರಗಳ ಸಂಗ್ರಹಣೆಯನ್ನು 15 ದಿನಕ್ಕೆ ಹೆಚ್ಚಿಸುವ ಅನುಮತಿ ನೀಡಿದ್ದರ ಹಿಂದೆ ಚೀನಾ ಮತ್ತು ಪಾಕಿಸ್ತಾನ ಎರಡೂ ದೇಶಗಳ ವಿರುದ್ಧ ಯುದ್ಧ ಸನ್ನದ್ಧತೆಯ ಉದ್ದೇಶವಿದೆ.
"ಹೊಸ ಅನುಮೋದನೆಯ ಅನ್ವಯ 15 ದಿನಗಳ ಯುದ್ಧಕ್ಕೆ ಸಾಕಾಗುವಷ್ಟು ಶಸ್ತ್ರಾಸ್ತ್ರ ವ್ಯವಸ್ಥೆಗಳು ಮತ್ತು ಮದ್ದು ಗುಂಡುಗಳನ್ನ ಸಂಗ್ರಹಿಸಿಟ್ಟುಕೊಳ್ಳಲಾಗುತ್ತಿದೆ. ಯುದ್ಧ ಸಾಮಾಗ್ರಿ ಸಂಗ್ರಹವನ್ನು ಈ ಹಿಂದಿನ 10 ದಿನಗಳ ದಾಸ್ತಾನಿಗಿಂತ ಈ ಬಾರಿ 15 ದಿನಗಳ ದಾಸ್ತಾನಿಗೆ ಹೆಚ್ಚಿಸಲಾಗಿದೆ. ಕೆಲ ಸಮಯದ ಹಿಂದೆಯೇ ರಕ್ಷಣಾ ಪಡೆಗಳಿಗೆ ಯುದ್ಧ ಪರಿಕರಣಗಳ ಹೆಚ್ಚಳಕ್ಕೆ ಅನುಮತಿ ಸಿಕ್ಕಿತ್ತು," ಎಂದು ಸರ್ಕಾರದ ಮೂಲವನ್ನುದ್ದೇಶಿಸಿ ವರದಿ ಮಾಡಲಾಗಿದೆ.
ಅಂದಹಾಗೆ, ಹಲವು ವರ್ಷಗಳ ಹಿಂದೆಯೇ 40 ದಿನಗಳ ಕಠಿಣ ಯುದ್ಧಕ್ಕೆ ಸಾಕಾಗುವಷ್ಟು ಯುದ್ಧ ಸಾಮಗ್ರಿ ಸಂಗ್ರಹ ಅನುಮತಿ ನೀಡಲಾಗಿತ್ತು. ಆದರೆ, ಶಸ್ತ್ರಗಳು ಮತ್ತು ಮದ್ದು ಗುಂಡುಗಳ ಶೇಖರಣೆ ಸಮಸ್ಯೆ ಇದ್ದುದರಿಂದ ಅದನ್ನ ಕನಿಷ್ಠ 10 ದಿನಗಳಿಗೆ ಇಳಿಸಲಾಗಿತ್ತು.
ಉರಿ ದಾಳಿ ಬಳಿಕ ಯುದ್ಧ ಸಾಮಗ್ರಿ ದಾಸ್ತಾನು ಸಂಗ್ರಹ ಬಹಳ ಕಡಿಮೆ ಎಂಬುದು ಮನವರಿಯಾಗಿತ್ತು. ಬಳಿಕ. ಅಂದಿನ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ನೇತೃತ್ವದ ರಕ್ಷಣಾ ಇಲಾಖೆಯು ವಾಯು ಸೇನೆ, ನೌಕಾ ಪಡೆ ಮತ್ತು ಭೂಸೇನೆಯ ಮೂವರು ಮುಖ್ಯಸ್ಥರ ಆರ್ಥಿಕ ಅಧಿಕಾರವನ್ನು ₹ 100 ಕೋಟಿಯಿಂದ ₹500 ಕೋಟಿಗೆ ಹೆಚ್ಚಿಸಿತ್ತು.