ಮುಂಬೈ: ಬಹುಕೋಟಿ ವಂಚನೆ ಆರೋಪ ಎದುರಿಸುತ್ತಿರುವ ಉದ್ಯಮಿ ನೀರವ್ ಮೋದಿ ಅವರನ್ನು ಭಾರತಕ್ಕೆ ಹಸ್ತಾಂತರಿಸಲು ಬ್ರಿಟನ್ ಕೋರ್ಟ್ ಒಪ್ಪಿಗೆ ನೀಡುತ್ತಿದ್ದಂತೆಯೇ, ಇತ್ತ ಮುಂಬೈನ ಆರ್ಥರ್ ರಸ್ತೆಯ ಜೈಲಿನಲ್ಲಿ ಅವರಿಗಾಗಿ ವಿಶೇಷ ಕೊಠಡಿಯನ್ನು ಸಿದ್ಧಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ನೀರವ್ ಮೋದಿಯನ್ನು ಜೈಲಿನಲ್ಲಿರಿಸಲು ಸಿದ್ಧತೆಗಳು ಪೂರ್ಣಗೊಂಡಿವೆ. ಅವರನ್ನು ಮುಂಬೈಗೆ ಕರೆತಂದ ನಂತರ, ಜೈಲಿನ ಬ್ಯಾರಕ್ ಸಂಖ್ಯೆ 12ರ ಮೂರು ಕೊಠಡಿಗಳ ಪೈಕಿ ಒಂದರಲ್ಲಿ ಇರಿಸಲಾಗುವುದು. ಇದು ಅತಿ ಹೆಚ್ಚು ಭದ್ರತೆ ಹೊಂದಿರುವ ಬ್ಯಾರಕ್ ಆಗಿದೆ‘ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ.
ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ (ಪಿಎನ್ಬಿ) ₹ 13,500 ಕೋಟಿ ವಂಚಿಸಿರುವ ಆರೋಪ ಎದುರಿಸುತ್ತಿರುವ ವಜ್ರದ ವ್ಯಾಪಾರಿ ನೀರವ್ ಮೋದಿ ವಿದೇಶಕ್ಕೆ ಪರಾರಿಯಾಗಿದ್ದರು. ಅವರನ್ನು ಭಾರತಕ್ಕೆ ಹಸ್ತಾಂತರಿಸಲು ಬ್ರಿಟನ್ ಕೋರ್ಟ್ ಗುರುವಾರ ಒಪ್ಪಿಗೆ ನೀಡಿದೆ.