ನವದೆಹಲಿ: ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ರಾಮಮಂದಿರದ ಮಾದರಿ ಒಳಗೊಂಡ, ಅಯೋಧ್ಯೆಯ ಪರಂಪರೆಯನ್ನು ಬಿಂಬಿಸುವ ಉತ್ತರ ಪ್ರದೇಶದ ಸ್ತಬ್ಧಚಿತ್ರ ಇಲ್ಲಿ ನಡೆದ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಗಮನಸೆಳೆಯಿತು.
ಸ್ತಬ್ಧಚಿತ್ರದ ಬಹುಪಾಲು ಸ್ಥಳವನ್ನು ರಾಮಮಂದಿರದ ಮಾದರಿ ಆವರಿಸಿದ್ದರೆ, ಮುಂಭಾಗ ಮಹರ್ಷಿ ವಾಲ್ಮೀಕಿ ಕುಳಿತ ಭಂಗಿಯಲ್ಲಿರುವ ಎತ್ತರದ ಮೂರ್ತಿ ಇತ್ತು. ‘ಇದು, ಪ್ರಾಚೀನ ನಗರ ಅಯೋಧ್ಯೆಯ ಪರಂಪರೆ ಬಿಂಬಿಸಲಿದೆ’ ಎಂದು ಉತ್ತರ ಪ್ರದೇಶದ ಅಧಿಕಾರಿಯೊಬ್ಬರು ತಿಳಿಸಿದರು. ಸಂತರ ವೇಷದಲ್ಲಿದ್ದ ಹಲವರು, ಕರಕುಶಲ ಕಲಾವಿದರು ಇದ್ದರು.
ಸ್ತಬ್ಧಚಿತ್ರದ ಒಂದು ಬದಿಯಲ್ಲಿ, ಗಿನ್ನಿಸ್ ದಾಖಲೆಗೆ ಸೇರಿರುವ ಅಯೋಧ್ಯೆಯ ದೀಪೋತ್ಸವ ಆಚರಣೆಯ ವಿವರಗಳಿದ್ದವು. ಉಳಿದಂತೆ, ಶ್ರೀರಾಮ, ಶಬರಿ, ಅಹಿಲ್ಯಾ, ಹನುಮಾನರ ಉಬ್ಬುಕಲಾಕೃತಿಗಳು ಇದ್ದವು. ಉತ್ತರ ಪ್ರದೇಶ, ಕರ್ನಾಟಕ ಸೇರಿ ವಿವಿಧ ರಾಜ್ಯಗಳ 17 ಸ್ತಬ್ಧಚಿತ್ರಗಳು ಪಥಸಂಚಲನದಲ್ಲಿ ಭಾಗಿಯಾಗಿದ್ದವು.