ಕೋಲ್ಕತ್ತ: ಸಿಪಿಎಂ ತುಂಬಾ ಅನ್ಯಾಯ ಮಾಡಿದೆ. ಆ ಪಕ್ಷದವರ ವಿರುದ್ಧ ಏಕೆ ಸಿಬಿಐ ತನಿಖೆ, ಜಾರಿ ನಿರ್ದೇಶನಾಲಯ (ಇ.ಡಿ) ಪ್ರಕರಣ ಇಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಶ್ನಿಸಿದ್ದಾರೆ.
ಭವಾನಿಪುರದಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು, ನಮ್ಮ ಪಕ್ಷವು (ಟಿಎಂಸಿ) ಶೌರ್ಯದಿಂದ ಹೋರಾಡುತ್ತಿದೆ. ನಮ್ಮ ದೂರವಾಣಿ ಕರೆಗಳನ್ನು ಪೆಗಾಸಸ್ ಮೂಲಕ ಕದ್ದಾಲಿಸಲಾಗುತ್ತಿದೆ ಎಂದು ದೂರಿದ್ದಾರೆ.
ಚುನಾವಣೆ ಮುಗಿದ ತಿಂಗಳುಗಳ ಬಳಿಕ ಬಿಜೆಪಿ ಕಾರ್ಯಕರ್ತ ಮೃತಪಟ್ಟಿರುವ ಬಗ್ಗೆ ಮಾಹಿತಿ ದೊರೆಯಿತು. ಅಂಥ ಸಾವು ಯಾವತ್ತೂ ದುರದೃಷ್ಟಕರ. ಅವರು ಮೃತದೇಹದೊಂದಿಗೆ ನನ್ನ ಮನೆ ಬಳಿ ಬಂದರು. ಎನ್ಆರ್ಸಿ ಪ್ರತಿಭಟನೆ ವೇಳೆ ಅಸ್ಸಾಂನಲ್ಲಿ ಅನೇಕ ಜನ ಸಾವಿಗೀಡಾಗಿದ್ದರು. ಆ ಬಗ್ಗೆ ನಾಚಿಕೆಯಾಗುವುದಿಲ್ಲವೇ? ಬಿಜೆಪಿ ಆಡಳಿತದಲ್ಲಿರುವಲ್ಲಿ ಕಾನೂನೇ ಅಸ್ತಿತ್ವದಲ್ಲಿಲ್ಲ ಎಂದು ಮಮತಾ ಟೀಕಿಸಿರುವುದಾಗಿ ‘ಎಎನ್ಐ’ ವರದಿ ಮಾಡಿದೆ.
ಬಿಜೆಪಿ ಅತ್ಯಂತ ಹಿಂಸಾತ್ಮಕ, ಕ್ರೂರ ಮತ್ತು ಕೊಲೆಗಾರ ಪಕ್ಷ. ಬಿಜೆಪಿಯವರು ಪ್ರತಿದಿನ ಗೂಂಡಾಗಿರಿ ಮಾಡುತ್ತಿದ್ದಾರೆ. ತಮ್ಮದೇ ಪಕ್ಷದವರ ಮನೆಗಳ ಮೇಲೆ ಬಾಂಬ್ ದಾಳಿ ನಡೆಸುವ ಅವರು ಬಳಿಕ ನಮ್ಮ ಮೇಲೆ ದಾಳಿ ನಡೆದಿದೆ ಎಂದು ಬೊಬ್ಬೆ ಹೊಡೆಯುತ್ತಾರೆ. ನಿಮ್ಮನ್ನು ಮುಟ್ಟಲೂ ನಮಗೆ ನಾಚಿಕೆಯಾಗುತ್ತದೆ. ಟಿಎಂಸಿಯು ಗೂಂಡಾಗಳ ಪಕ್ಷವಲ್ಲ ಎಂದು ಮಮತಾ ಹೇಳಿದ್ದಾರೆ.
ಭವಾನಿಪುರ ಉಪ ಚುನಾವಣೆಯಲ್ಲಿ ಟಿಎಂಸಿಯಿಂದ ಮಮತಾ ಬ್ಯಾನರ್ಜಿ ಅವರು ಸ್ಪರ್ಧಿಸುತ್ತಿದ್ದು, ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ಸೆಪ್ಟೆಂಬರ್ 30ರಂದು ಚುನಾವಣೆ ನಡೆಯಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.