ಪಟ್ನಾ: ಬಿಹಾರದಲ್ಲಿ ಚುನಾವಣಾ ಫಲಿತಾಂಶದ ದಿನದಂದು ನಡೆಯುವ ಸಂಭ್ರಮಾಚರಣೆ ವೇಳೆ ಯಾವುದೇ ರೀತಿಯ ಅನುಚಿತ ವರ್ತನೆಯನ್ನು ಸಹಿಸುವುದಿಲ್ಲವೆಂದು ತನ್ನ ಕಾರ್ಯಕರ್ತರಿಗೆ ಆರ್ಜೆಡಿ ಪಕ್ಷವು ಎಚ್ಚರಿಕೆ ನೀಡಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಆರ್ಜೆಡಿ, 'ನವೆಂಬರ್ 10ರಂದು ಬರಲಿರುವ ಚುನಾವಣಾ ಫಲಿತಾಂಶಗಳು ಏನೇ ಇರಲಿ. ಅದನ್ನು ಕಾರ್ಯಕರ್ತರು ಸಂಪೂರ್ಣ ಸಂಯಮ ಹಾಗೂ ಸೌಜನ್ಯದಿಂದ ಸ್ವೀಕರಿಸಬೇಕು' ಎಂದು ತಾಕೀತು ಮಾಡಿದೆ.
'ಸಂಭ್ರಮಾಚರಣೆ ವೇಳೆ ಪಟಾಕಿ ಸಿಡಿಸುವುದು, ಗಾಳಿಯಲ್ಲಿ ಗುಂಡು ಹಾರಿಸಿ ವಿಜಯೋತ್ಸವ ಆಚರಿಸುವುದು ಮತ್ತು ಪ್ರತಿಸ್ಪರ್ಧಿಗಳೊಂದಿಗೆ ಕಾರ್ಯಕರ್ತರು ಅನುಚಿತವಾಗಿ ವರ್ತಿಸುವುದನ್ನು ಸಹಿಸಲಾಗುವುದಿಲ್ಲ' ಎಂದು ಆರ್ಜೆಡಿ ಟ್ವೀಟ್ ಮಾಡಿದೆ.
ಮಹಾಘಟಬಂಧನದ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ ಅವರು ತಮ್ಮ 32ನೇ ಹುಟ್ಟುಹಬ್ಬ ಆಚರಿಸಿಕೊಂಡ ಮರುದಿನ(ನವೆಂಬರ್ 10) ಬಿಹಾರದಲ್ಲಿ ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ.
ಮತದಾನೋತ್ತರ ಸಮೀಕ್ಷೆಗಳ ಪ್ರಕಾರ, ಆರ್ಜೆಡಿ ನೇತೃತ್ವದ ಮಹಾಘಟಬಂಧನವು ಗೆಲ್ಲುವ ಸಾಧ್ಯತೆ ಹೆಚ್ಚಿದೆ.