ನವದೆಹಲಿ: ಬಿಹಾರದಲ್ಲಿ ಬಿಜೆಪಿ ಹಾಗೂ ಜೆಡಿ (ಯು) ಮೈತ್ರಿ ಮುರಿದು ಬಿದ್ದಿದ್ದು, ಮಾಜಿ ಮುಖ್ಯಮಂತ್ರಿ ಲಾಲುಪ್ರಸಾದ್ ಯಾದವ್ ಅವರ ಆರ್ಜೆಡಿ ಜೊತೆ ಹೆಜ್ಜೆ ಹಾಕಲು ನಿತೀಶ್ ಕುಮಾರ್ ಮುಂದಾಗಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಲಾಲುಪ್ರಸಾದ್ ಯಾದವ್ ಅವರ ಪುತ್ರಿ ರೋಹಿಣಿ ಆಚಾರ್ಯ, ‘ಲಾಲುಇಲ್ಲದೇ ಬಿಹಾರ ಚಾಲೂ ಆಗುವುದಿಲ್ಲ’ ಎಂಬ ಬೋಜಪುರಿ ವಿಡಿಯೊ ಹಾಡೊಂದನ್ನು ಹಂಚಿಕೊಂಡು ಬಿಜೆಪಿ ವಿರುದ್ಧ ಟೀಕಾಪ್ರಹಾರ ಮಾಡಿದ್ದಾರೆ.
ವೈರಲ್ ಆಗಿದ್ದ ಈ ಹಾಡು 2020 ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಆರ್ಜೆಡಿ ಬಳಸಿತ್ತು. ಇದೇ ಹಾಡನ್ನು ಹಂಚಿಕೊಂಡು ರೋಹಿಣಿ ಅವರು, ‘ಪಟ್ಟಾಭಿಷೇಕಕ್ಕೆ ತಯಾರಾಗಿ, ಲಾಟೀನು ಹಿಡಿದವರು ಬರುತ್ತಿದ್ದಾರೆ’ ಎಂದು ಒಕ್ಕಣೆ ಬರೆದುಕೊಂಡಿದ್ದಾರೆ.
ಅಲ್ಲದೇ ಅವರು ತಮ್ಮ ತಂದೆಯನ್ನು ಕಿಂಗ್ ಮೇಕರ್ ಎಂದು ಕರೆದಿದ್ದಾರೆ. ಮೇವು ಹಗರಣದಲ್ಲಿ ಶಿಕ್ಷೆಗೆ ಒಳಗಾಗಿರುವ ಲಾಲುಅವರು ಸದ್ಯ ಜಾಮೀನಿನ ಮೇಲೆ ಹೊರಗಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
2015–2017 ರವರೆಗಿನ ಸಮ್ಮಿಶ್ರ ಸರ್ಕಾರದಲ್ಲಿ ತೇಜಸ್ವಿ ಯಾದವ್ ಅವರು ಡಿಸಿಎಂ ಆಗಿದ್ದರು. ಇದೀಗ ಹೊಸ ಸರ್ಕಾರದಲ್ಲಿ ತೇಜಸ್ವಿ ಮತ್ತೆ ಡಿಸಿಎಂ ಆಗಬಹುದು ಎನ್ನಲಾಗುತ್ತಿದೆ.