ಫಂಗ್ವಾರ: ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರು ಬಿಜೆಪಿ ಮುಖಂಡರಿಂದ ಹೋಟೆಲ್ ಬಳಿ ಜಮಾವಣೆ ಆದ ಕಾರಣ ಬಿಜೆಪಿ ನಾಯಕರು ಪೊಲೀಸ್ ಭದ್ರತೆಯಲ್ಲಿ ಹಿಂಬಾಗಿಲಿನಿಂದ ಓಡಿಹೋದ ಘಟನೆ ಪಂಜಾಬ್ನ ಫಂಗ್ವಾರದಲ್ಲಿ ನಡೆದಿದೆ.
ಹೋಟೆಲ್ನಲ್ಲಿ ಬಿಜೆಪಿ ಮುಖಂಡರು ವಾಜಪೇಯಿ ಅವರ ಜನ್ಮದಿನಾಚರಣೆ ಕಾರ್ಯಕ್ರಮ ನಡೆಸುತ್ತಿದ್ದ ಸಂದರ್ಭ ಹೊರಗಡೆ ಸೇರಿದ ಭಾರ್ತಿ ಕಿಸಾನ್ ಯೂನಿಯನ್ ಸದಸ್ಯರು ಘೋಷಣೆಗಳನ್ನು ಕೂಗಿದರು. ರೈತರ ಆಗಮನಕ್ಕೂ ಮುನ್ನವೇ ಹಲವು ಬಿಜೆಪಿ ನಾಯಕರು ಹೋಟೆಲ್ ಸೇರಿಕೊಡಿದ್ದರು. ಆದರೆ, ಪ್ರತಿಭಟನೆ ಆರಂಭವಾದ ಬಳಿಕ ಬಿಜೆಪಿಯ ಜಿಲ್ಲಾಧ್ಯಕ್ಷ ಭಾರತಿ ಶರ್ಮಾ ಸೇರಿದಂತೆ ಯಾರೊಬ್ಬರನ್ನೂ ರೈತರು ಹೋಟೆಲ್ ಒಳಗೆ ಹೋಗಲು ಬಿಟ್ಟಿಲ್ಲ.
ಆದರೆ, ಇದಕ್ಕೂ ಮುನ್ನವೇ ಒಳಗೆ ಹೋಗಿದ್ದವರು ಪ್ರತಿಭಟನಾಕಾರರಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಪೊಲೀಸ್ ರಕ್ಷಣೆಯಲ್ಲಿ ಹೋಟೆಲ್ನ ಹಿಂಬಾಗಿಲಿನಿಂದ ಒಬ್ಬೊಬ್ಬರಾಗಿ ಜಾರಿಕೊಳ್ಳಬೇಕಾಯಿತು ಎಂದು ಪೊಲೀಸರು ತಿಳಿಸಿದ್ದಾರೆ ಎಂದು ಎನ್ಡಿಟಿವಿ ವರದಿ ಮಾಡಿದೆ.
ಈ ಹೋಟೆಲ್ ಬಿಜೆಪಿ ಕಾರ್ಯಕರ್ತನಿಗೆ ಸೇರಿದ್ದಾಗಿದೆ ಎಂದು ಹೇಳಿರುವ ಪ್ರತಿಭಟನಾಕಾರರು, ಅದೇ ವ್ಯಕ್ತಿ ಜಾನುವಾರು ಮತ್ತು ಕೋಳಿ ಆಹಾರ ಪೂರೈಸುವ ಕಂಪನಿಯನ್ನು ಸಹ ನಡೆಸುತ್ತಿದ್ದು, ಇನ್ಮುಂದೆ ಆ ಕಂಪನಿಯ ಉತ್ಪನ್ನಗಳನ್ನು ಬಹಿಷ್ಕರಿಸುವುದಾಗಿ ಹೇಳಿದ್ದಾರೆ.