ವನ್ಸದಾ, ಗುಜರಾತ್: ‘ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ‘ತಾಕತ್ತಿದ್ದರೆ’ ಗುಜರಾತ್ನ ಸಣ್ಣ ಚಹಾ ವ್ಯಾಪಾರಿಗಳಿಂದ ಹಣ ವಸೂಲಿ ಮಾಡಲಿ.ಗುಜರಾತ್ನಿಂದಲೇ ಚುನಾವಣೆಗೆ ಸ್ಪರ್ಧಿಸಿ ತೋರಿಸಲಿ’ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಮಂಗಳವಾರ ಇಲ್ಲಿ ಸವಾಲು ಹಾಕಿದರು.
ಗುಜರಾತ್ ಮತ್ತು ಅಲ್ಲಿನ ಜನರ ಬಗ್ಗೆ ಕಾಂಗ್ರೆಸ್ಗೆ ದ್ವೇಷ ಮತ್ತು ಪೂರ್ವಾಗ್ರಹ ಪೀಡಿತ ಭಾವನೆ ಇದೆ. ಗುಜರಾತ್ನಲ್ಲಿ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಬೃಹತ್ ಪ್ರತಿಮೆ ಸ್ಥಾಪಿಸಲೂ ಕಾಂಗ್ರೆಸ್ಸಿನವರು ವಿರೋಧಿಸಿದ್ದರು ಎಂದು ಆರೋಪಿಸಿದರು.
ಅಸ್ಸಾಂನಲ್ಲಿ ಚುನಾವಣೆ ಪ್ರಚಾರ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಅವರು, ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಚಹಾ ತೋಟದ ಕಾರ್ಮಿಕರ ಕೂಲಿ ಹೆಚ್ಚಿಸಲಿದ್ದು, ಗುಜರಾತ್ ಮೂಲದ ಚಹಾ ತೋಟದ ಮಾಲೀಕರು ಅದನ್ನು ಭರಿಸುವಂತೆ ಮಾಡುತ್ತೇನೆ ಎಂದಿದ್ದರು ಎಂಬುದನ್ನು ಉಲ್ಲೇಖಿಸಿ ಇರಾನಿ ಈ ಮಾತು ಹೇಳಿದರು.
ಗುಜರಾತ್ನ ಸಣ್ಣ ಚಹಾ ವ್ಯಾಪಾರಿಗಳ ಜೇಬಿನಿಂದ ಹಣ ತರುತ್ತೇನೆ ಎಂದು ರಾಹುಲ್ ಹೇಳಿದ್ದಾರೆ. ಈ ಹಿಂದೆ ನರೇಂದ್ರ ಮೋದಿ ಟೀ ಮಾರುತ್ತಿದ್ದರು ಎಂಬ ಬಗ್ಗೆಯೂ ಅವರು ತಕರಾರು ತೆಗೆದಿದ್ದರು ಎಂದೂ ಅವರು ದೂರಿದರು.
ರಾಹುಲ್ ಗಾಂಧಿ ಅವರಿಗೆ ತಾಕತ್ತಿದ್ದರೆ ಈ ಬಗ್ಗೆ ಕ್ರಮಕ್ಕೆ ಮುಂದಾಗಲಿ. ಗುಜರಾತ್ನಿಂದಲೇ ಸ್ಪರ್ಧೆ ಮಾಡುವಂತೆಯೂ ನಾನು ಸವಾಲು ಹಾಕುತ್ತೇನೆ. ಅದು, ಎಲ್ಲ ಗೊಂದಲವನ್ನು ಬಗೆಹರಿಸಲಿದೆ ಎಂದು ಅವರು ಅಭಿಪ್ರಾಯಪಟ್ಟರು.