ನವದೆಹಲಿ (ಪಿಟಿಐ): ಒಂದು ವಿಧಾನಸಭಾ ಕ್ಷೇತ್ರದ ಮತದಾರ ತನ್ನ ಕ್ಷೇತ್ರದ ಯಾವುದೇ ಮತಗಟ್ಟೆಯ ಏಜೆಂಟ್ ಆಗಿ ಕೆಲಸ ಮಾಡಲು ಅವಕಾಶ ನೀಡುವ ಆದೇಶ ಹೊರಡಿಸುವಂತೆ ಚುನಾವಣಾ ಆಯೋಗವನ್ನು ಕೇಳಿಕೊಳ್ಳಬೇಕು ಎಂದು ಬಿಜೆಪಿಯ ಇಬ್ಬರು ನಾಯಕರು ಮಾತನಾಡಿಕೊಂಡಿದ್ದಾರೆ ಎಂದು ಹೇಳಲಾದ ದೂರವಾಣಿ ಕರೆಯ ಆಡಿಯೊ ಕ್ಲಿಪ್ ಅನ್ನು ಟಿಎಂಸಿ ಶನಿವಾರ ರಾತ್ರಿ ಬಿಡುಗಡೆ ಮಾಡಿದೆ.
ಇದು ಟಿಎಂಸಿ ಮತ್ತು ಬಿಜೆಪಿ ನಡುವಣ ವಾಗ್ವಾದಕ್ಕೆ ಕಾರಣವಾಗಿದೆ. ಅಲ್ಲದೆ, ಟಿಎಂಸಿಯು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ. ಈ ಆದೇಶವನ್ನು ವಾಪಸ್ ಪಡೆಯಬೇಕು ಎಂದು ಟಿಎಂಸಿ ಒತ್ತಾಯಿಸಿದೆ.
ಬಿಜೆಪಿ ನಾಯಕರಾದ ಮುಕುಲ್ ರಾಯ್ ಮತ್ತು ಶಿಶಿರ್ ಬಜೋರಿಯಾ ಅವರ ನಡುವಣ ಫೋನ್ ಮಾತುಕತೆಯ ಆಡಿಯೊ ಕ್ಲಿಪ್ ಅನ್ನು ಟಿಎಂಸಿ ಬಿಡುಗಡೆ ಮಾಡಿದೆ. ಚುನಾವಣಾ ಆಯೋಗದ ಜತೆ ನಡೆಸಬೇಕಿರುವ ಮಾತುಕತೆಗೆ ಪಟ್ಟಿ ಸಿದ್ಧಪಡಿಸಿಕೊಳ್ಳುವುದರ ಬಗ್ಗೆ ಇಬ್ಬರು ನಾಯಕರೂ ದೂರವಾಣಿ ಮೂಲಕ ಚರ್ಚಿಸಿದ್ದಾರೆ. ಮುಖ್ಯವಾಗಿ ಮತಗಟ್ಟೆ ಏಜೆಂಟ್ಗಳ ನೇಮಕದ ಬಗ್ಗೆ ಹೆಚ್ಚು ಚರ್ಚೆ ನಡೆಸಿದ್ದಾರೆ.
ಬಿಜೆಪಿಯ ಇಬ್ಬರು ಪ್ರಮುಖ ನಾಯಕರ ಮಧ್ಯೆ ಈ ಸಂಭಾಷಣೆ ಯಾವಾಗ ನಡೆದಿದೆ ಎಂಬ ಮಾಹಿತಿ ಬಹಿರಂಗವಾಗಿಲ್ಲ. ಆದರೆ, ಚುನಾವಣಾ ಆಯೋಗವು ಕಳೆದ ವಾರವಷ್ಟೇ ಈ ನಿಯಮಗಳಲ್ಲಿ ಬದಲಾವಣೆ ಮಾಡಿ, ಆದೇಶ ನೀಡಿತ್ತು. ಈಗ ಈ ಆದೇಶವನ್ನು ವಾಪಸ್ ಪಡೆಯಬೇಕು ಎಂದು ಟಿಎಂಸಿ ಪಟ್ಟು ಹಿಡಿದಿದೆ.