ಲಡಾಖ್: ಭಾರತೀಯ ಸೇನಾ ಪಡೆಗಳ ಮುಖ್ಯಸ್ಥ ಜ.ಬಿಪಿನ್ ರಾವತ್ ಹಾಗೂ ವಾಯುಪಡೆಯ ಮುಖ್ಯಸ್ಥ ಆರ್.ಕೆ.ಎಸ್ ಬದೌರಿಯಾ ಅವರು ಸೋಮವಾರ ಲಡಾಖ್ಗೆ ಭೇಟಿ ನೀಡಿ ಅಲ್ಲಿ ಸೇನೆಯ ಸನ್ನದ್ಧತೆಯನ್ನು ಪರಿಶೀಲಿಸಿದರು.
ಭಾರತೀಯ ಸೇನೆಯ ಕಮಾಂಡರ್ ಲೆ.ಜನರಲ್ ಪಿ.ಜಿ.ಕೆ. ಮೆನನ್ ಅವರು ಲಡಾಖ್ನ ಸ್ಥಿತಿಗತಿ ಮತ್ತು ಸೇನೆಯ ಸನ್ನದ್ಧತೆಗಳ ಬಗ್ಗೆ ರಾವತ್ ಅವರಿಗೆ ಮಾಹಿತಿ ನೀಡಿದರು. ‘ಚೀನಾ ಸೇನೆಯ ಯಾವುದೇ ರೀತಿಯ ಕ್ರಿಯೆಗೆ ಪ್ರತ್ಯುತ್ತರ ನೀಡಲು ಸೇನೆ ಸನ್ನದ್ಧವಾಗಿದೆ’ ಎಂದು ಅವರು ತಿಳಿಸಿದರು.
ಬದೌರಿಯಾ ಅವರು ಲಡಾಖ್ನಲ್ಲಿರುವ ಭಾರತೀಯ ವಾಯುಪಡೆಯ ನೆಲೆಗೂ ಭೇಟಿ ನೀಡಿ ಸಿದ್ಧತೆಗಳ ಬಗ್ಗೆ ಸೇನೆಯ ಅಧಿಕಾರಿಗಳ ಜತೆಗೆ ಚರ್ಚಿಸಿದರಲ್ಲದೆ, ಸೈನಿಕರು ಹಾಗೂ ಇಂಡೊ ಟಿಬೆಟ್ ಬಾರ್ಡರ್ ಪೊಲೀಸ್ ಸಿಬ್ಬಂದಿಗೆ ಉಳಿದುಕೊಳ್ಳಲು ಮಾಡಿರುವ ವ್ಯವಸ್ಥೆಗಳ ಪರಿಶೀಲನೆಯನ್ನೂ ನಡೆಸಿದರು ಎಂದು ಮೂಲಗಳು ತಿಳಿಸಿವೆ.
ಕಠಿಣ ಹವಾಮಾನ ಹಾಗೂ ದುರ್ಗಮ ಪ್ರದೇಶದಲ್ಲೂ ಸೈನಿಕರು ಪ್ರದರ್ಶಿಸುತ್ತಿರುವ ಅಸಾಧಾರಣ ಸ್ಥೈರ್ಯ ಹಾಗೂ ಸಾಹಸಗಳ ಬಗ್ಗೆ ವಾಯುಪಡೆಯ ಮುಖ್ಯಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು ಎಂದು ತಿಳಿದುಬಂದಿದೆ. ಇದಕ್ಕೂ ಮುನ್ನು ರಾವತ್ ಹಾಗೂ ಬದೌರಿಯಾ ಅವರು ಅರುಣಾಚಲ ಪ್ರದೇಶದಲ್ಲಿ ಭಾರತ– ಚೀನಾದ ವಿವಾದಿತ ಗಡಿಪ್ರದೇಶಕ್ಕೂ ಭೇಟಿ ನೀಡಿದ್ದರು. ಲಡಾಖ್ ಗಡಿಯಲ್ಲಿ ಎಂಟು ತಿಂಗಳ ಹಿಂದೆ ನಡೆದ ಗಡಿ ಸಂಘರ್ಷ ಘಟನೆಯ ನಂತರ ಭಾರತ ಮತ್ತು ಚೀನಾ ನಡುವಿನ ವಾಸ್ತವ ಗಡಿರೇಖೆಯ ಎರಡೂ ಕಡೆಗಳಲ್ಲಿ ಆಯಾ ದೇಶಗಳು ದೊಡ್ಡ ಪ್ರಮಾಣದಲ್ಲಿ ಸೇನಾ ಜಮಾವಣೆಯನ್ನು ಮಾಡಿವೆ.