ಲಡಾಖ್: ಭಾರತದ ಗಡಿಯೊಳಗೆ ಪ್ರವೇಶಿಸಿದ ಚೀನಾದ ಯೋಧರೊಬ್ಬರನ್ನು ಭದ್ರತಾ ಪಡೆಗಳು ವಶಕ್ಕೆ ಪಡೆದಿವೆ. ಲಡಾಖ್ನ ಚುಮಾರ್–ಡೆಂಚೋಕ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ಕಣ್ಣುತಪ್ಪಿನಿಂದ ಚೀನಾ ಯೋಧ ಭಾರತದ ಭೂ ಪ್ರದೇಶದೊಳಗೆ ಬಂದಿರಬಹುದು ಎಂದು ಮೂಲಗಳು ತಿಳಿಸಿರುವುದಾಗಿ ಎಎನ್ಐ ವರದಿ ಮಾಡಿದೆ. ಶಿಷ್ಟಾಚಾರದ ಪ್ರಕಾರ ಸೂಕ್ತ ಪ್ರಕ್ರಿಯೆಗಳು ಪೂರೈಸಿದ ಬಳಿಕ ಅವರನ್ನು ಚೀನಾ ಸೇನೆಗೆ ಒಪ್ಪಿಸಲಾಗುತ್ತದೆ ಎಂದು ಭಾರತೀಯ ಸೇನೆ ಹೇಳಿದೆ.
ಭಾರತ ಸೇನೆಯ ವಶದಲ್ಲಿರುವ ಯೋಧ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಯ (ಪಿಎಲ್ಎ) ಕಾರ್ಪೊರಲ್ ವಾಂಗ್ ಯಾ ಲಾಂಗ್ ಎಂದು ಗುರುತಿಸಲಾಗಿದೆ. ಪೂರ್ವ ಲಡಾಖ್ನಲ್ಲಿ ನೈಜ ನಿಯಂತ್ರಣ ರೇಖೆ (ಎಲ್ಎಸಿ) ದಾಟಿ ಓಡಾಡುತ್ತಿದ್ದಾಗ ಭಾರತೀಯ ಭದ್ರತಾ ಪಡೆಗಳು ಅವರನ್ನು ವಶಕ್ಕೆ ಪಡೆದಿವೆ.
ತೀವ್ರ ಶೀತಮಯ ವಾತಾವರಣ ಮತ್ತು ಎತ್ತರ ಪ್ರದೇಶದ ಹವಾಗುಣದಿಂದ ರಕ್ಷಣೆ ನೀಡಲು ಅವರಿಗೆ ಸೂಕ್ತ ವೈದ್ಯಕೀಯ ಸಹಕಾರ, ಆಹಾರ ಹಾಗೂ ಬೆಚ್ಚನೆಯ ಉಡುಪು ನೀಡಲಾಗಿದೆ ಎಂದು ಭಾರತೀಯ ಸೇನೆ ತಿಳಿಸಿದೆ.
Chinese soldier apprehended by security forces in Chumar-Demchok area of Ladakh. He might have entered Indian territory inadvertently. He will be returned to Chinese Army as per established protocol after following due procedure: Sources pic.twitter.com/i23MjkNyqA
ನಾಪತ್ತೆಯಾಗಿರುವ ಯೋಧನ ಸುಳಿವು ಪತ್ತೆಗಾಗಿ ಚೀನಾ ಸೇನೆಯಿಂದಲೂ ಮನವಿ ಬಂದಿದೆ. ಪ್ರಸ್ತುತ ಅನುಸರಿಸಲಾಗುತ್ತಿರುವ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ಬಳಿಕ ಚುಶೂಲ್–ಮೋಲ್ಡೊ ಪ್ರದೇಶದಲ್ಲಿ ಚೀನಾದ ಅಧಿಕಾರಿಗಳಿಗೆ ಅವರನ್ನು ಒಪ್ಪಿಸಲಾಗುತ್ತದೆ ಎಂದು ಹೇಳಿದೆ.
ಜೂನ್ 15ರಂದು ಗಾಲ್ವನ್ ಕಣಿವೆ ಪ್ರದೇಶದಲ್ಲಿ ನಡೆದಿದ್ದ ಸಂಘರ್ಷದಲ್ಲಿ ಭಾರತೀಯ ಸೇನೆಯ ಕಮಾಂಡಿಂಗ್ ಆಫೀಸರ್ ಶ್ರೇಣಿಯ ಅಧಿಕಾರಿ ಸೇರಿದಂತೆ 21 ಯೋಧರು ಹುತಾತ್ಮರಾಗಿದ್ದರು. ಚೀನಾ ಕಡೆಯಲ್ಲಿಯೂ ಸಾವು–ನೋವು ಸಂಭವಿಸಿತ್ತು. ಆದರೆ ಅದರ ವಿವರಗಳನ್ನು ಚೀನಾ ಬಹಿರಂಗಪಡಿಸಿಲ್ಲ.
ಉಭಯ ರಾಷ್ಟ್ರಗಳು ಸೇನೆ ಹಿಂಪಡೆಯುವ ಕುರಿತು ಈಗಾಗಲೇ ಹಲವು ಸುತ್ತಿನ ಮಾತುಕತೆ ನಡೆಸಿವೆ.